ಮೈಸೂರು: ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಭಂಡಾರಕೇರಿ ಮಠದ ವೇಂಕಟಾಚಲ ಧಾಮದಲ್ಲಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಪ್ರತಿಷ್ಠಾಪಿಸಿರುವ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನ ಕ್ಷೇತ್ರದಲ್ಲಿ ಆ.20ರಿಂದ 3 ದಿನಗಳ ಕಾಲ ವಿಶೇಷ ಆರಾಧನೋತ್ಸವ ನೆರವೇರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಸರಣಿಯಲ್ಲಿ 20ರ ಸಂಜೆ 6 ಗಂಟೆಗೆ ಎ.ಆರ್. ಕೌಸಲ್ಯಾ ರಘುರಾಂ ತಂಡದಿಂದ ವಿಶೇಷ ಭಜನೆ, ರಾತ್ರಿ 8 ಗಂಟೆಗೆ ರಥೋತ್ಸವ, ರಂಗಪೂಜೆ, 21 ರ ಸಂಜೆ 5.30ಕ್ಕೆ ಕಲಾವಿದೆ ಲಲಿತಾ ಉಳಿಯಾರು ತಂಡದಿಂದ ‘ ರಾಘವೇದ್ರ ಮಹಾತ್ಮೆ’ ಹರಿಕಥೆ, ರಾತ್ರಿ 8ಕ್ಕೆ ಅಷ್ಟಾವಧಾನ ಮತ್ತು ರಂಗಸೇವೆ ನೆರವೇರಲಿದೆ.
22 ರ ಸಂಜೆ 6ಕ್ಕೆ ವಿದ್ವಾನ್ ಕೃಷ್ಣಕುಮಾರ ಆಚಾರ್ಯರಿಂದ ‘ಪ್ರಹ್ಲಾದ ಚರಿತ್ರೆ’ ವಿಶೇಷ ಉಪನ್ಯಾಸ, ರಾತ್ರಿ 8ಕ್ಕೆ ರಾಯರಿಗೆ ಮತ್ತು ಶ್ರೀನಿವಾಸ ದೇವರಿಗೆ ಮಹಾಮಂಗಳಾರತಿ ಸಂಪನ್ನಗೊಳ್ಳಲಿದೆ.
ರಾಯರ ವೃಂದಾವನಕ್ಕೆ ಮೂರು ದಿನವೂ ಬೆಳಿಗ್ಗೆ ಅಷ್ಟೋತ್ತರ ಪಾರಾಯಣ ನಂತರ ಪಂಚಾಮೃತಾಭಿಷೇಕ, ಎಳನೀರು ಅಭಿಷೇಕ ಮಾಡಲಾಗುತ್ತದೆ. ವಿಶೇಷ ಹೂವಿನ ಅಲಂಕಾರ ನೆರವೇರಲಿದೆ. ಭಕ್ತರಿಂದ ರಾಯರ ಪಾದುಕೆಗಳಿಗೆ ಪ್ರತ್ಯೇಕ ಪಾದಪೂಜೆ, ಕನಕಾಭಿಷೇಕ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಂಜೆ ಪ್ರಾಕಾರ ಉತ್ಸವ, ಅಷ್ಟಾವಧಾನ ಸೇವೆ ಮತ್ತು ರಂಗಪೂಜೆ ಸಂಪನ್ನಗೊಳ್ಳಲಿದೆ. ಪ್ರಧಾನ ಅರ್ಚಕ ರಾಘವೇಂದ್ರಾಚಾರ್ ಪೂಜಾಕಾರ್ಯದ ನೇತೃತ್ವವಹಿಸಲಿದ್ದಾರೆ. ವಿವರಗಳಿಗೆ 9845492732 ಸಂಪರ್ಕಿಸಬಹುದು.





