ಮೈಸೂರು : ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮವಾದ ಮಳೆಯಾಗುತ್ತಿರುವ ಕಾರಣ ಕಬಿನಿ ಜಲಾಶಯ ಭರ್ತಿಯಾಗಿದೆ. ಅಲ್ಲದೆ ಜಲಾಶಯದಿಂದ ೨೦ ಸಾವಿರ ಕ್ಯೂಸೆಕ್ ನೀರು ಹೊರಗಡೆಗೆ ಬಿಡಲಾಗಿದ್ದು, ಇದರಿಂದಾಗಿ ಕಪಿಲಾ ನದಿ ತುಂಬಿ ಹರಿಯುತ್ತಿದೆ.
ಕಪಿಲಾ ನದಿಯಲ್ಲಿ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಿರುವುದಿಂದ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ನಂಜನಗೂಡು ನಗರದ ತಗ್ಗು ಪ್ರದೇಶದ ಬಡವಾಣೆ ಸೇರಿದಂತೆ ತಾಲೂಕಿನ ಹುಲ್ಲಹಳ್ಳಿ, ಬೊಕ್ಕಹಳ್ಳಿ, ಕುಳ್ಳಂಕನಹುಂಡಿ ಸೇರಿದಂತೆ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಶುರುವಾಗಿದೆ.
ಮಳೆಯ ಆರ್ಭಟ ಹೆಚ್ಚಾದಲ್ಲಿ ನೀರಿನ ಹೊರ ಹರಿವೂ ಕೂಡ ಹೆಚ್ಚಳವಾಗಲಿದೆ. ಜಲಾಶಯದಿಂದ ಹೊರ ಬಿಡುವ ನೀರಿನ ಪ್ರಮಾಣ ೫೦ ಸಾವಿರ ಕ್ಯೂಸೆಕ್ ತಲುಪಿದ್ದೆ ಆದಲ್ಲಿ ನಂಜನಗೂಡಿನಲ್ಲಿ ಪ್ರವಾಹ ಭೀತಿ ಎದುರಾಗಲಿದೆ. ಈಗಾಗಲೇ ಸುತ್ತೂರು, ನಗರ್ಲೆ, ಹುಲ್ಲಹಳ್ಳಿ, ಕುಳ್ಳಂಕನಹುಂಡಿ ಗ್ರಾಮಗಳ ನದಿ ತೀರದಲ್ಲಿರುವ ತಗ್ಗು ಪ್ರದೇಶದ ಜನರಿಗೆ ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಜನರು ಮತ್ತು ಜಾನುವಾರುಗಳನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲು ಸೂಚಿಸಲಾಗಿದೆ.