Mysore
23
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಸಭೆಯಲ್ಲಿ ಕೊಡುವ ಗೋಡಂಬಿ, ಬಾದಾಮಿ ತಿನ್ನೋದಿಕ್ಕೆ ಹೋಗಬೇಕಿತ್ತಾ? -ಎಚ್ ಡಿಕೆ

ಬೆಂಗಳೂರು : ನೀರು ಬಿಟ್ಟು ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ. ನೀರು ಬಿಟ್ಟಿದ್ದಕ್ಕೆ ಶಹಬ್ಬಾಶ್‌ ಗಿರಿ ಕೊಡಲು ಸಭೆಗೆ ಹೋಗಬೇಕಿತ್ತಾ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ನಡೆದ ಸರ್ವಪಕ್ಷಗಳ ಸಭೆಗೆ ಗೈರಾದ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿಕೆ,  ಸಿಡಬ್ಲ್ಯೂಆರ್‌ ಸಿ ಶಿಫಾರಸು ಹಿನ್ನೆಲೆ ಸಭೆ ಕರೆದಿದ್ದರು. ಯಾವ ವಿಚಾರ ಚರ್ಚಿಸಲು ಅವರು ಸಭೆ ಕರೆದಿದ್ದರು..? ಚರ್ಚೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದುಹೋಗಿದೆ. ಕಬಿನಿಯಿಂದ ನೀರು ಹರಿದಿದೆ. ಸಭೆಯಲ್ಲಿ ಕೊಡುವ ಗೋಡಂಬಿ, ಬಾದಾಮಿ ತಿನ್ನೋದಿಕ್ಕೆ ನಾನು ಹೋಗಬೇಕಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಯಾಕೆ ಸಭೆ ಮಾಡಿದ್ದೀರಿ..? ಏನು ನಿರ್ಧಾರ ತೆಗೆದುಕೊಂಡರಿ..? ಸಭೆ ಮಾಡಿದ ಮೇಲೂ ಕಡಿಮೆ ಪ್ರಮಾಣದ ನೀರು ಬಿಡಲು ಒಪ್ಪಿಗೆ ಸೂಚಿಸಿದೆ. ತೆಲಂಗಾಣಕ್ಕೆ ಹೋದರೆ ಅಲ್ಲಿ ಸಿಎಂ ಫೋನ್‌ ಮಾಡಿ ಸಹಕಾರ ಕೇಳ್ತಾರೆ. ಆದರೆ ನಾನು ರಾಜ್ಯದ ಯೋಜನೆಗಳಿಗೆ ಸಹಿ ಹಾಕಿದರೆ ಅದನ್ನ ನಿಲ್ಲಿಸುತ್ತಾರೆ ಎಂದು ಕಿಡಿಕಾರಿದರು.

ಜೊತೆಗೆ ಮಂಡ್ಯದಲ್ಲಿ ಜನತಾ ದರ್ಶನ ಮಾಡಿದರೆ ಅಧಿಕಾರಿಗಳು ಭಾಗಿಯಾಗಬಾರದು ಎಂದು ಆದೇಶ ಮಾಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಬಾರದು ಎಂದು ಆದೇಶ ಮಾಡಿದ ಮೇಲೆ ನಮ್ಮಿಂದ ಏನು ಬಯಸುತ್ತೀರಾ…? ಯಾವ ಸಂದರ್ಭ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನನಗೆ ಗೊತ್ತಿದೆ. ನಾನು ಇವರ ಅನುಮತಿ ಪಡೆಯಬೇಕಾ ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!