Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಕೃಷಿ ಪದವೀಧರರು ನಾಡಿನ ಸರ್ವತೋಮುಖ ಏಳಿಗೆಗೆ ಶ್ರಮಿಸಬೇಕು: ಎನ್ ಚಲುವರಾಯಸ್ವಾಮಿ

ಧಾರವಾಡ: ಕೃಷಿ ಪದವೀಧರರು ತಮ್ಮ ತಾಂತ್ರಿಕ ಜ್ಞಾನ ಬಳಸಿ ನಾಡಿನ ಸರ್ವತೋಮುಖ ಏಳಿಗೆಗೆ ಶ್ರಮಿಸಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ 37ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೃಷಿ ಪದವೀಧರರು ಉದ್ಯೋಗ ಅರಸುವ ಬದಲು ಕೆಲಸ ನೀಡುವವರಾಗಿ ಬೆಳೆಯಬೇಕು ಎಂದರು.

ಕೃಷಿ ಕ್ಷೇತ್ರದಲ್ಲಿ ಮೌಲ್ಯವರ್ಧನೆ ಹಾಗೂ ಅಭಿವೃದ್ಧಿಗೆ ವ್ಯಾಪಕ ಅವಕಾಶ ಇದೆ. ಕೃಷಿ ಪದವಿಧರರು ತಮ್ಮ ಕೌಶಲ್ಯವನ್ನು ಈ ಕ್ಷೇತ್ರದ ವಿಕಾಸಕ್ಕೆ ಬಳಸಬೇಕು ಸಲಹೆ ನೀಡಿದರು.

ಧಾರವಾಡ ಕೃಷಿ ವಿ.ವಿ ದೇಶದ ಶ್ರೇಷ್ಠ ವಿಶ್ವವಿದ್ಯಾಲಗಳಲ್ಲಿ ಒಂದಾಗಿದ್ದು ಹೊಸ ಹೊಸ ಸಂಶೋಧನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವುದು ಪ್ರಶಂಸನೀಯ. ವಿಶ್ವವಿದ್ಯಾಲಯಗಳು ರೈತರಿಗೆ ಆತ್ಮವಿಶ್ವಾಸ ತುಂಬುವ ಜೊತೆಗೆ ವೈಜ್ಞಾನಿಕ, ತಾಂತ್ರಿಕ ನೆರವು ಒದಗಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯ ಸರ್ಕಾರ ಸದಾ ರೈತ ಪರವಾಗಿದೆ. ಕೃಷಿ ಕ್ಷೇತ್ರದ ಶ್ರೇಯೋಭಿವೃದ್ದಿಗೆ ಅನೇಕ‌ ಪರಿಣಾಮಕಾರಿ ಯೋಜನೆ ಜಾರಿ ತಂದಿದೆ ಎಂದು ಅವರು ವಿವರಿಸಿದರು.

ಸಿರಿ ಧಾನ್ಯಗಳ ಪ್ರೋತ್ಸಾಹ ಕಾರ್ಯಕ್ರಮಗಳಿಂದ ದೊಡ್ಡ ಯಶಸ್ಸು ಕಾಣುತ್ತಿದೆ. ನೂರಾರು ಹೊಸ ಉದ್ಯಮ ಪ್ರಾರಂಭವಾಗಿ ಹೀಗೆ ಎಲ್ಲಾ ಕೃಷಿ ಉತ್ಪನ್ನಗಳಲ್ಲಿ ಹೊಸ ಆವಿಷ್ಕಾರ ಮತ್ತು ಬ್ರಾಂಡಿಗ್ ಅಗಬೇಕಿದೆ ಎಂದು ಹೇಳಿದರು.

ಅಲ್ಲದೆ ಈ ವರ್ಷದ ಧಾರವಾಡ ಕೃಷಿ ವಿವಿ ವಿದ್ಯಾರ್ಥಿನಿ ಕುಮಾರಿ ಸೌಭಾಗ್ಯ ಬೀಳಗಿ‌ಮಠ ಯು.ಪಿ‌.ಎಸ್.ಸಿ ಪರೀಕ್ಷೆಯಲ್ಲಿ 101 ನೇ ರಾಂಕ್ ಗಳಿಸಿರುವುದು ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು ಕೃಷಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಧಾರವಾಡದ ಕೃಷಿ ವಿ.ವಿಯ 37ನೇ ಘಟಿಕೊತ್ಸವದಲ್ಲಿ 69 ಪಿ.ಹೆಚ್.ಡಿ, 237 ಸ್ನಾತಕೋತ್ತರ ಹಾಗೂ 627 ಸ್ನಾತಕ ಪದವಿ ಸೇರಿದಂತೆ 933 ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

Tags: