ಬೆಂಗಳೂರು: ರಾಜ್ಯದಲ್ಲಿ ಭ್ರೂಣಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಭ್ರೂಣಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಆರೋಗ್ಯ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಸುಳಿವು ನೀಡುವವರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಇತ್ತೀಚೆಗೆ ಭ್ರೂಣ ಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ರಾಜ್ಯದಲ್ಲಿ ಲೈಸೆನ್ಸ್ ಇಲ್ಲದ ಕ್ಲಿನಿಕ್ಗಳು ಹಾಗೂ ಚಿಕ್ಕ ಚಿಕ್ಕ ಆಸ್ಪತ್ರೆಗಳನ್ನು ತೆರೆದು ಈ ಕೃತ್ಯಕ್ಕೆ ಕೈ ಹಾಕಲಾಗುತ್ತಿದೆ. ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಬಿಗ್ ಪ್ಲಾನ್ ಮಾಡಿದ್ದು, ಭ್ರೂಣಹತ್ಯೆ ಪ್ರಕರಣದ ಸುಳಿವು ಕೊಟ್ಟವರಿಗೆ ಒಂದು ಲಕ್ಷ ರೂ ಬಹುಮಾನ ಘೋಷಿಸಿದೆ.
ಈ ಮೊದಲು ಭ್ರೂಣಹತ್ಯೆ ಪ್ರಕರಣದ ಸುಳಿವು ನೀಡಿದವರಿಗೆ ಕೇವಲ 50 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತಿತ್ತು. ಆದರೂ ರಾಜ್ಯದಲ್ಲಿ ಯಾರಿಗೂ ಕಾಣದಂತೆ ಯಥೇಚ್ಛವಾಗಿ ಭ್ರೂಣಲಿಂಗ ಹತ್ಯೆ ಪ್ರಕರಣಗಳು ನಡೆಯುತ್ತಲೇ ಇದ್ದವು.
ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಪ್ರಕರಣದ ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದೆ. ರಾಷ್ಟ್ರೀಯ ಅಭಿಯಾನದಡಿ 50 ಸಾವಿರ ಹಾಗೂ ಆಯಾಯ ಜಿಲ್ಲೆಗಳಲ್ಲಿ ಸಂಗ್ರಹಿಸಿರುವ ಪಿಸಿ ಅಂಡ್ ಪಿಎನ್ಟಿಡಿ ಶುಲ್ಕದಿಂದ 50 ಸಾವಿರ ರೂ ನೀಡಲು ಮುಂದಾಗಿದೆ.