ಮೈಸೂರು: ತನಗೆ ಆಶ್ರಯ ನೀಡಿದ್ದ ಮನೆಯಲ್ಲೇ ಕಳ್ಳತನ ಮಾಡಲು ಯತ್ನಿಸಿ ಸಿಕ್ಕಿ ಬೀಳುವ ಭಯದಲ್ಲಿ ಮಹಡಿ ಮೇಲಿಂದ ಹಾರಿದ ಕಳ್ಳನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಾನಸಿ ನಗರದಲ್ಲಿಂದು (ಮೇ.೧೯) ನಡೆದಿದೆ.
ಬಾಲಾಜಿ ಎಂಬವರಿಗೆ ಕಣ್ಣಿನ ಸಮಸ್ಯೆಯಿದ್ದು, ಮರಗೆಲಸ ಮಾಡುವ ರವಿಗೆ ಎಂಬಾತನಿಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿದ್ದರು. ಈ ಹಿಂದೆಯೂ ಮನೆಯಲ್ಲಿ ರವಿ ಮೂರು ಬಾರಿ ಕಳುವಿಗೆ ಯತ್ನಿಸಿ ಸಿಕ್ಕಿಬಿದ್ದಾಗ ಬುದ್ದಿ ಹೇಳಿ ಖಡಕ್ ಸೂಚನೆ ನೀಡಿ ಸುಮ್ಮನಾಗಿದ್ದರು.
ಆದರೆ, ಅವರು ಮನೆಯಲ್ಲಿ ಇಲ್ಲದೆ ಇದ್ದಾಗ ಮತ್ತೆ ಮನೆಯ ನಕಲಿ ಬೀಗ ಬಳಸಿ ಕಳ್ಳತನ ಮಾಡಲು ಯತ್ನಸಿದ್ದಾನೆ. ಈ ಸಂದರ್ಭದಲ್ಲಿ ಮನೆಗೆ ಬಂದ ಮಾಲೀಕ ಡಾ. ಬಾಲಾಜಿ ಬೀಗ ತೆಗೆದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದನ್ನು ಗಮನಿಸಿದ ಖದೀಮ ರವಿ ಮನೆಯ ಮಹಡಿ ಮೇಲಿಂದ ರಗ್ಗು ಕಟ್ಟಿ ಹಾರಲು ಯತ್ನಿಸಿ ನೆಲಕ್ಕುರುಳಿ ತಲೆಗೆ ತೀವ್ರತರವಾದ ಗಾಯವಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಮೈಸೂರು ಗ್ರಾಮಾಂತರ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.