Mysore
15
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಅಂಬೇಡ್ಕರ್‌ ಅವರಿಂದ ಕುರಿ ಕಾಯುವವ ಸಿಎಂ, ಚಹಾ ಮಾರುವವ ಪಿಎಂ ಆದರು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ 133ನೇ ಜಯಂತೋತ್ಸವ ಅಂಗವಾಗಿ ವಿಧಾನಸೌಧದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿರದೆ ಇದ್ದರೆ ಭಾರತ ಏನಾಗಿರುತ್ತಿತ್ತು ಎನ್ನುವುದನ್ನು ಒಂದು ಕ್ಷಣ ಕಲ್ಪಿಸಿಕೊಂಡರೆ ನಮ್ಮೆಲ್ಲರ ಬದುಕಿನಲ್ಲಿ ಅವರ ಪಾತ್ರದ ಅರಿವಾಗಬಹುದು. ಈ ಕಾರಣಕ್ಕಾಗಿ ಜಾತಿ, ಧರ್ಮ, ಪಂಥ, ಪ್ರದೇಶವನ್ನು ಮೀರಿ ಭಾರತದ ನೆಲದಲ್ಲಿ ಹುಟ್ಟಿದವರು ಮತ್ತು ಹುಟ್ಟಲಿರುವವರೆಲ್ಲರೂ ಅಂಬೇಡ್ಕರ್ ಅವರಿಗೆ ಋಣಿಗಳಾಗಿರಬೇಕು ಎಂದು ಜನ್ಮ ದಿನದ ಅಂಗವಾಗಿ ನೆನೆದಿದ್ದಾರೆ.

ಹಳ್ಳಿಯಲ್ಲಿ ಕುರಿಕಾಯುತ್ತಿದ್ದ ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಿರುವುದು, ಮತ್ತು ರೈಲ್ವೆ ಸ್ಟೇಷನ್ ನಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿರುವುದು ಅಂಬೇಡ್ಕರ್ ಮತ್ತು ಅವರು ರಚಿಸಿ ಕೊಟ್ಟಿರುವ ಸಂವಿಧಾನದ ಕಾರಣಕ್ಕೆ. ಸಂವಿಧಾನದ ರಚನೆಯಲ್ಲಿ ಬಾಬಾಸಾಹೇಬರ ಪಾತ್ರವನ್ನು ಅವಗಣನೆ ಮಾಡುವವರು ಮತ್ತು ಸಂವಿಧಾನವನ್ನು ಬದಲಾಯಿಸಲು ಪಣತೊಟ್ಟವರು ನಿಜವಾದ ದೇಶದ್ರೋಹಿಗಳು. ಇಂತಹವರ ವಿರುದ್ಧದ ಹೋರಾಟಕ್ಕೆ ನಮಗೆ ಬಾಬಾಸಾಹೇಬರ ಚಿಂತನೆಗಳೇ ಅಸ್ತ್ರಗಳು. ಬಾಬಾ ಸಾಹೇಬರ ಜನ್ಮದಿನದ ಸಂದರ್ಭದಲ್ಲಿ ಸಂವಿಧಾನ ಉಳಿಸುವ ಪ್ರತಿಜ್ಞೆಗೈಯೋಣ. ಸರ್ವರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Tags:
error: Content is protected !!