Mysore
27
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಚಾರಣ ಪ್ರಿಯರಿಗೆ ಬೇಸರದ ಸುದ್ದಿ; ತಾತ್ಕಾಲಿಕ ನಿರ್ಬಂಧ ಹೇರಿದ ರಾಜ್ಯ ಸರ್ಕಾರ

ವಾರಾಂತ್ಯ, ಮಾಸಾಂತ್ಯದ ರಜೆಗಳು ಬಂತೆಂದರೆ ಸಾಕು ಹಸಿರಿನಿಂದ ಕೂಡಿದ ವಿವಿಧ ಬೆಟ್ಟ ಗುಡ್ಡಗಳನ್ನು ಹುಡುಕುತ್ತಾ ಚಾರಣ ಮಾಡಲು ತೆರಳುತ್ತಿದ್ದರು ನಗರವಾಸಿಗಳು. ಹೀಗೆ ಕಾಡು ಸುತ್ತಿ, ಬೆಟ್ಟದ ತುದಿಯಲ್ಲಿ ಟೆಂಟ್‌ ಹಾಕಿ ರಾತ್ರಿ ಕಳೆಯುವ ಹವ್ಯಾಸ ರೂಢಿಸಿಕೊಂಡಿದ್ದ ಚಾರಣ ಪ್ರಿಯರಿಗೆ ಇದೀಗ ರಾಜ್ಯ ಸರ್ಕಾರ ನಿರ್ಬಂಧವನ್ನು ಹೇರಿದೆ. ಪರಿಸರ ಮಾಲಿನ್ಯ, ಪ್ರವಾಸಿಗರ ನಿಯಂತ್ರಣದ ಕಾರಣವನ್ನು ನೀಡಿ ಪ್ರಾಣಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಹೌದು, ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆ ಇಲ್ಲದ ಟ್ರೆಕಿಂಗ್‌ ಪಾಯಿಂಟ್‌ಗಳಿಗೆ ನಿರ್ಬಂಧವನ್ನು ಹೇರಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಆದೇಶವನ್ನು ಹೊರಡಿಸಿದ್ದಾರೆ. ಈ ಕುರಿತು ಪತ್ರವೊಂದನ್ನು ಹೊರಡಿಸಿರುವ ಈಶ್ವರ್‌ ಖಂಡ್ರೆ ರಾಜ್ಯದ ಯುವಜನರು ಇತ್ತೀಚೆಗೆ ಅರಣ್ಯ ವ್ಯಾಪ್ತಿಯ ಗಿರಿ ಶಿಖರಗಳಿಗೆ ಟ್ರೆಕಿಂಗ್‌ ಕೈಗೊಳ್ಳುತ್ತಿದ್ದು ಇದರಿಂದ ವಾರಾಂತ್ಯದಲ್ಲಿ ಜನದಟ್ಟಣೆ ಅಧಿಕವಾಗುತ್ತಿದೆ, ಚಾರಣಕ್ಕೆ ಬರುವವರು ಪ್ಲಾಸ್ಟಿಕ್‌ಗಳನ್ನು ಬಿಸಾಡುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಇದರಿಂದ ವನ್ಯ ಜೀವಿಗಳಿಗೆ ಹಾನಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಜನವರಿ 26ರಂದು ಕುಮಾರಪರ್ವತ ಚಾರಣಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದು, ಇದರ ಚಿತ್ರಗಳು ವೈರಲ್‌ ಆಗಿದ್ದವು. ಈ ಅಂಶಗಳ ಕುರಿತು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಿ ವಾರಾಂತ್ಯವೂ ಬರುವ ಪ್ರವಾಸಿಗರನ್ನು ತಪಾಸಣೆ ನಡೆಸಿದ ನಿಯಂತ್ರಿಸುವುದೂ ಸಹ ಸಿಬ್ಬಂದಿಗೆ ದೊಡ್ಡ ಸವಾಲಾಗಿದ್ದು, ಆನ್‌ಲೈನ್‌ ಬುಕಿಂಗ್‌ ಇಲ್ಲದ ಎಲ್ಲಾ ಚಾರಣ ಕೇಂದ್ರಗಳಿಗೂ ತಾತ್ಕಾಲಿಕ ನಿರ್ಬಂಧಿಸುವಂತೆ ಸೂಚಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಎಲ್ಲಾ ಚಾರಣ ಕೇಂದ್ರಗಳಲ್ಲೂ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದ್ದು, ಈ ಕೆಲಸ ಆಗುವವರೆಗೂ ಈ ನಿರ್ಬಂಧ ಇರಲಿದೆ ಎಂದೂ ಸಹ ತಿಳಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!