ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟಿ ಟ್ವೆಂಟಿ ಸರಣಿಯಲ್ಲಿ ಸಮಬಲ ಸಾಧಿಸಿ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸಿರುವ ಭಾರತ ಇಂದು ( ಡಿಸೆಂಬರ್ 19 ) ಜಿಕೆಬರ್ಹಾದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಹರಿಣಗಳಿಗೆ ಗೆಲ್ಲಲು 212 ರನ್ಗಳ ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 46.2 ಓವರ್ಗಳಲ್ಲಿ 211 ರನ್ ಕಲೆಹಾಕಿ ಆಲ್ಔಟ್ ಆಗಿದೆ. ಟೀಮ್ ಇಂಡಿಯಾ ಪರ ನಾಯಕ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ ಅರ್ಧಶತಕ ಬಾರಿಸುವ ಮೂಲಕ ಜವಾಬ್ದಾರಿಯುತ ಆಟವನ್ನಾಡಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ 62 ರನ್ ಗಳಿಸಿದರೆ, ನಾಯಕ ರಾಹುಲ್ 56 ರನ್ ಬಾರಿಸಿದರು.
ಇನ್ನುಳಿದಂತೆ ಭಾರತದ ಯಾವ ಆಟಗಾರನೂ ಸಹ ಗಮನ ಸೆಳೆಯುವ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ. ರುತುರಾಜ್ ಗಾಯಕ್ವಾಡ್ 4 ರನ್, ತಿಲಕ್ ವರ್ಮಾ 10, ಸಂಜು ಸ್ಯಾಮ್ಸನ್ 12, ರಿಂಕು ಸಿಂಗ್ 17, ಅಕ್ಷರ್ ಪಟೇಲ್ 7, ಕುಲ್ದೀಪ್ ಯಾದವ್ 1, ಅರ್ಷ್ದೀಪ್ ಸಿಂಗ್ 18, ಅವೇಶ್ ಖಾನ್ 9 ಹಾಗೂ ಮುಖೇಶ್ ಕುಮಾರ್ ಅಜೇಯ 4 ರನ್ ಕಲೆಹಾಕಿದರು.
ದಕ್ಷಿಣ ಆಫ್ರಿಕಾ ಪರ ನಂಡ್ರೆ ಬರ್ಗರ್ 3 ವಿಕೆಟ್, ಬ್ಯೂರನ್ ಹೆಂಡ್ರಿಕ್ಸ್ ಹಾಗೂ ಕೇಶವ್ ಮಹಾರಾಜ್ ತಲಾ 2 ವಿಕೆಟ್ ಮತ್ತು ಲಿಜಾರ್ಡ್ ವಿಲಿಯಮ್ಸ್ ಹಾಗೂ ಏಡನ್ ಮಾರ್ಕ್ರಮ್ ತಲಾ ಒಂದೊಂದು ವಿಕೆಟ್ ಪಡೆದರು.





