ಸಂಸತ್ ಭವನದ ಮೇಲೆ ದಾಳಿ ನಡೆಸಿದವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಮತ್ತೊಂದೆಡೆ ಆರೋಪಿಗಳಿಗೆ ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರನ್ನೂ ಸಹ ವಿಚಾರಣೆ ಮಾಡಬೇಕು ಹಾಗೂ ಅವರನ್ನು ಅಮಾನತ್ತು ಮಾಡಬೇಕು ಎಂಬ ಕೂಗು ಕೇಳಿಬಂದಿದೆ.
ನಿನ್ನೆ ( ಡಿಸೆಂಬರ್ 15 ) ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಪ್ರತಾಪ್ ಸಿಂಹ ಅವರ ಫೋಟೊವನ್ನು ಭಯೋತ್ಪಾದಕ ರೀತಿ ಎಡಿಟ್ ಮಾಡಿ ಬ್ಯಾನರ್ ಹಾಕಿ ಪ್ರತಿಭಟಿಸಿದ್ದರು. ಅಲ್ಲದೇ ದಾಳಿ ನಡೆದ ದಿನವೂ ಪ್ರತಾಪ್ ಸಿಂಹ ಅವರನ್ನು ದೇಶದ್ರೋಹಿ ಎಂದು ಘೋಷಣೆ ಕೂಗಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಾಪ್ ಸಿಂಹ ಕಚೇರಿ ಎದುರು ಪ್ರತಿಭಟಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಇದೀಗ ಪ್ರತಾಪ್ ಸಿಂಹ ಅವರ ಬೆಂಬಲಿಗರು ಅವರ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಪ್ರತಾಪ್ ಸಿಂಹ ಕಚೇರಿ ಎದುರು ʼಪ್ರತಾಪ್ ಸಿಂಹ ಅವರೊಂದಿಗೆ ನಾವು, ವಿ ಸ್ಟಾಂಡ್ ವಿತ್ ಪ್ರತಾಪ್ ಸಿಂಹʼ ಎಂಬ ಬರಹವಿರುವ ಫ್ಲೆಕ್ಸ್ ಹಿಡಿದು, ಪ್ರತಾಪ್ ಸಿಂಹ ಅವರ ಭಾವಚಿತ್ರ ಇರುವ ಮುಖವಾಡ ಧರಿಸಿ ಬೆಂಬಲಿಸಿದ್ದಾರೆ. ಇನ್ನು ಆನ್ಲೈನ್ನಲ್ಲೂ ಸಹ ಪ್ರತಾಪ್ ಸಿಂಹ ಪರ ಹಾಗೂ ವಿರೋಧಗಳು ವ್ಯಕ್ತವಾಗುತ್ತಿದ್ದು, ಸಿಂಹ ಬೆಂಬಲಿಗರು #WeStandWithPratapSimha ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ.