ಬೆಂಗಳೂರು : ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಹುಲಿ ಉಗುರಿನ ವಿವಾದದ ಬೆನ್ನಲ್ಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಆರೋಪ ಕೇಳಿ ಬಂದವರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಎಂದು ಸೂಚಿಸಿರುವ ಸಚಿವ ಈಶ್ವರ್ ಖಂಡ್ರೆಯವರನ್ನು ರಾಜ್ಯ ಕಾಂಗ್ರೆಸ್ ಶ್ಲಾಘಿಸಿದೆ.
ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಇಲಾಖೆಗೆ ಹೊಸ ಶಕ್ತಿ ನೀಡುತ್ತಿದ್ದಾರೆ, ಮನುಕುಲದ ಉಳಿವಿಗಾಗಿ ನಿಸರ್ಗವನ್ನು ಉಳಿಸುವುದು ಬಹುಮುಖ್ಯ ಎಂಬ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನುವ ಮೂಲಕ ತಮ್ಮ ಸಚಿವರ ಬೆನ್ನು ತಟ್ಟುವ ಕಾರ್ಯ ಮಾಡಿದೆ.
ವಿವಿಧ ಸಂಘ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ 5 ಕೋಟಿ ಸಸಿ ನೆಡುವ ಮಹತ್ತರ ಯೋಜನೆ ರೂಪಿಸಿದ್ದಾರೆ. ಅನ್ಯ ಉದ್ದೇಶಕ್ಕಾಗಿ ಪರಿವರ್ತಿಸಲಾಗಿದ್ದ 5 ಸಾವಿರಕ್ಕೂ, ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ಮರಳಿಸುವ ಮೂಲಕ ಪುನಃ ಅರಣ್ಯ ಭೂಮಿಯಾಗಿ ಪರಿವರ್ತಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಈಗ ವನ್ಯ ಜೀವಿಗಳನ್ನು ಸಂರಕ್ಷಿಸುವ ಹಾಗೂ ಆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜದಲ್ಲಿ ಅದೆಷ್ಟೇ ದೊಡ್ಡವರಾಗಿರಲಿ, ಗಣ್ಯರಾಗಿರಲಿ, ವನ್ಯ ಜೀವಿಗಳ ಉತ್ಪನ್ನಗಳನ್ನು ಹೊಂದಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದೆ.
ಅಲ್ಲದೆ ವನ್ಯ ಜಿವಿಗಳಿಂದ ತಯಾರಾದ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಮೂಲಕ ವನ್ಯಜೀವಿಗಳನ್ನು ಸಂರಕ್ಷಿಸುವ ಸ್ಪಷ್ಟ ಸಂದೇಶ ನೀಡಲಾಗುತ್ತಿದೆ. ಕರ್ನಾಟಕದ ಪರಿಸರ ಸಂಪತ್ತನ್ನು ಉಳಿಸುವ ಹಾಗೂ ಬೆಳೆಸುವಲ್ಲಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಸ್ವಪ್ರಶಂಸೆ ಮಾಡಿಕೊಂಡಿದೆ.
https://x.com/INCKarnataka/status/1717790837051171313?s=20