ಖ್ಯಾತ ನಟಿ ಶ್ರೀದೇವಿ ಅವರ ಸಾವಿನ ಬಗ್ಗೆ ಜನರಿಗೆ ಹಲವು ಅನುಮಾನಗಳಿವೆ. 2018ರ ಫೆಬ್ರವರಿ 24ರಂದು ದುಬೈನಲ್ಲಿ ಅವರು ನಿಧನರಾದರು. ಸ್ಟಾರ್ ಹೋಟೆಲ್ನ ಬಾತ್ಟಬ್ನಲ್ಲಿ ಮುಳುಗಿ ಅವರು ಕೊನೆಯುಸಿರು ಎಳೆದರು ಎಂಬುದನ್ನು ತಿಳಿದು ಇಡೀ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಆಘಾತ ಆಯಿತು. ಆ ಘಟನೆ ನಡೆದು ಇಷ್ಟು ವರ್ಷಗಳು ಕಳೆದ ಬಳಿಕ ಮೊದಲ ಬಾರಿಗೆ ಶ್ರೀದೇವಿ ಪತಿ ಬೋನಿ ಕಪೂರ್ ಅವರು ಮೌನ ಮುರಿದಿದ್ದಾರೆ. ಪತ್ನಿಯ ಸಾವಿನ ಬಗ್ಗೆ ಅವರು ಮಾತನಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತಾವು ಸುದೀರ್ಘವಾದ ವಿಚಾರಣೆಗೆ ಒಳಪಟ್ಟಿರುವುದಾಗಿ ಬೋನಿ ಕಪೂರ್ ತಿಳಿಸಿದ್ದಾರೆ. ಅಲ್ಲದೇ ಶ್ರೀದೇವಿಯ ಸಾವಿಗೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.
ದಿ ನ್ಯೂ ಇಂಡಿಯನ್ಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್ ಅವರು ಈ ವಿಚಾರ ತಿಳಿಸಿದ್ದಾರೆ. ಶ್ರೀದೇವಿಯದ್ದು ಸಹಜ ಸಾವಲ್ಲ. ಅದು ಅನಾಹುತದ ಸಾವು. ಈ ಕುರಿತು ವಿಚಾರಣೆ ವೇಳೆ ನಾನು 48 ಗಂಟೆಗಳ ಕಾಲ ಮಾತನಾಡಿದ್ದೆ. ಹಾಗಾಗಿ ಮತ್ತೆ ಮಾತನಾಡುವುದು ಬೇಡ ಎಂದು ನಿರ್ಧರಿಸಿದೆ. ಭಾರತದ ಮಾಧ್ಯಮಗಳಿಂದ ಸಾಕಷ್ಟು ಒತ್ತಡ ಬರುತ್ತಿದೆ ಎಂಬ ಕಾರಣಕ್ಕೆ ಈ ರೀತಿ ವಿಚಾರಣೆಗೆ ಒಳಗಾಗಬೇಕು ಎಂದು ಅಲ್ಲಿನ ಅಧಿಕಾರಿಗಳು ನನಗೆ ಹೇಳಿದರು. ಕೊಲೆ ಪ್ರಯತ್ನ ನಡೆದಿಲ್ಲ ಎಂಬುದು ಅವರಿಗೆ ತಿಳಿಯಿತು. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಅನೇಕ ಟೆಸ್ಟ್ಗಳಿಗೆ ನಾನು ಒಳಗಾದೆ. ಕೊನೆಗೂ ವರದಿಯಲ್ಲಿ ಅದು ಆ್ಯಕ್ಸಿಡೆಂಟಲ್ ಸಾವು ಎಂಬುದು ತಿಳಿಯಿತು’ ಎಂದು ಬೋನಿ ಕಪೂರ್ ಹೇಳಿದ್ದಾರೆ.
ಚೆನ್ನಾಗಿ ಕಾಣಬೇಕು ಎಂಬ ಕಾರಣಕ್ಕೆ ಶ್ರೀದೇವಿ ಪಾಲಿಸುತ್ತಿದ್ದ ಡಯೆಟ್ನಿಂದಾಗಿ ಈ ಸಾವು ಸಂಭವಿಸಿದೆ ಎಂದು ಬೋನಿ ಕಪೂರ್ ಹೇಳಿದ್ದಾರೆ. ಶ್ರೀದೇವಿ ಯಾವಾಗಲೂ ಉಪವಾಸ ಮಾಡುತ್ತಿದ್ದರು. ತೆರೆ ಮೇಲೆ ಚೆನ್ನಾಗಿ ಕಾಣಬೇಕು, ದೇಹದ ಶೇಪ್ ಚೆನ್ನಾಗಿ ಇರಬೇಕು ಎಂಬ ಕಾರಣಕ್ಕೆ ಅವರು ಈ ರೀತಿ ಡಯೆಟ್ ಮಾಡುತ್ತಿದ್ದರು. ನನ್ನನ್ನು ಮದುವೆ ಆದಾಗಿನಿಂದ ಹಲವು ಬಾರಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಗೆ ಲೋ ಬಿಪಿ ಇದೆ ಅಂತ ವೈದ್ಯರು ಹೇಳುತ್ತಲೇ ಇದ್ದರು ಎಂದು ಬೋನಿ ಕಪೂರ್ ಹೇಳಿದ್ದಾರೆ.