Mysore
23
scattered clouds

Social Media

ಸೋಮವಾರ, 09 ಮಾರ್ಚ್ 2026
Light
Dark

ಜಾತಿ ನಿಂದನೆ ಪ್ರಕರಣ: ಹೈಕೋರ್ಟ್​​ ತಡೆ ಸಿಕ್ಕ ಬೆನ್ನಲ್ಲೇ ಉಪೇಂದ್ರ ಪ್ರತಿಕ್ರಿಯೆ

ಬೆಂಗಳೂರು : ಮಾತಿನ ನಡುವೆ ಗಾದೆ ಮಾತೊಂದನ್ನು ಹೇಳಿದ್ದ ಸಲುವಾಗಿ ರಿಯಲ್ ಸ್ಟಾರ್ ಉಪೇಂದ್ರ ವಿರುದ್ಧ ಕೆಲವರು ದಾಖಲಿಸಿದ್ದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣದಿಂದ ಸ್ವಲ್ಪ ನಿರಾಳರಾಗಿರುವ ಉಪೇಂದ್ರ, ಇದೀಗ ಈ ಪ್ರಕರಣದ ಕುರಿತು ಪ್ರಪ್ರಥಮ ಪ್ರತಿಕ್ರಿಯೆ ನೀಡಿದ್ದಾರೆ. ‘ಅನ್ಯಾಯದ ಅನುಮಾನಕ್ಕೆ ಹೆಡೆ ಬಿಚ್ಚಿ ಬುಸುಗುಟ್ಟಿದ ಪಡೆ, ದ್ವೇಷದ ಆಟಕ್ಕೆ ತಡೆ ಹಿಡಿದ ಹೈಕೋರ್ಟ್ ನಡೆ, ಅನಿರೀಕ್ಷಿತ ಬಿಸಿಲ ತಾಪಕ್ಕೆ ಸಹೃದಯಗಳು ಹಿಡಿದ ಪ್ರೀತಿಯ ಕೊಡೆ, ನನ್ನನ್ನು ತಿದ್ದಿ ತೀಡುತ್ತಿರುವ ನಿಮ್ಮೆಲ್ಲರನ್ನೂ ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ, ನನಗೆ ಕೊಡೆ.. ಧನ್ಯವಾದಗಳು Thank you all’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್​ ಚಂದನ್​ಗೌಡರ್​ ಅವರಿದ್ದ ಏಕಸದಸ್ಯ ಪೀಠವು ನಟ ಉಪೇಂದ್ರ ವಿರುದ್ಧ ದಾಖಲಾಗಿದ್ದ ಎಫ್​ಐಆರ್​​ಗೆ ಮಧ್ಯಂತರ ತಡೆ ನೀಡಿದೆ. ನಟ ಉಪೇಂದ್ರ ಪರ ವಾದಿಸಿದ ವಕೀಲ ಉದಯ್​ ಹೊಳ್ಳ, ತಮ್ಮ ಕಕ್ಷಿದಾರರು ತಾವಾಡಿರುವ ಮಾತುಗಳಿಗೆ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಆ ವಿಡಿಯೋವನ್ನೂ ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಿದ್ದಾರೆ. ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶದಿಂದ ಆಡಿದ ಮಾತು ಅದಾಗಿರಲಿಲ್ಲ ಎಂದಿದ್ದರು.

ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕೆಂದು ಕೋರಿ ನಟ ಉಪೇಂದ್ರ ಪರ ವಕೀಲ ಉದಯ್​ ಹೊಳ್ಳ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಪ್ರಕರಣ ಸಂಬಂಧ ದಾಖಲಾಗಿರುವ ಎಫ್​ಐಆರ್​​ಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!