Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ ಹೆಸರಿನಲ್ಲಿ ಬಿಜೆಪಿ ಹೋರಾಟ : ಅಶ್ವತ್ಥ್ ನಾರಾಯಣ

ಬೆಂಗಳೂರು : ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆಯದ ಕಾಂಗ್ರೆಸ್ ವಿರುದ್ಧ ಜುಲೈ 3 ರಂದು ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಅಲ್ಲದೆ, ಗ್ಯಾರಂಟಿ ಯೋಜನೆಗಳಿಗೆ ಹಾಕಿದ ಷರತ್ತುಗಳನ್ನು ವಾಪಸ್ ಪಡೆಯುವಂತೆ ಸದನದ ಒಳಗೆ ಹಾಗೂ ಆಚೆಗೆ ಪ್ರತಿಭಟನೆ ಮಾಡಲು ಬಿಜೆಪಿ ತೀರ್ಮಾನಿಸಿದೆ. ಇನ್ನು ಈ ಬಗ್ಗೆ ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಡಾ. ಸಿಎನ್ ಅಶ್ವತ್ಥ್ ನಾರಾಯಣ, ನಾಳೆಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ. ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ ಎಂಬ ಶೀರ್ಷಿಕೆ ಅಡಿ ಹೋರಾಟ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಜನರಿಗೆ ಗ್ಯಾರಂಟಿಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿಗೊಳಿಸುತ್ತೇವೆ. ಎಂದಿದ್ದರು. ಈಗ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಸದನದ ಹೊರಗಡೆ ಮತ್ತು ಒಳಗಡೆ ಹೋರಾಟ ಮಾಡಲಿದ್ದೇವೆ. ಸದನದ ಹೊರಗಡೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ಜು.4ರಂದು ಫ್ರೀಡಂಪಾರ್ಕ್​ನಲ್ಲಿ ಹೋರಾಟ ಮಾಡುತ್ತಾರೆ ಎಂದು ಹೇಳಿದರು.

ಇಂದು ವಿರೋಧ ಪಕ್ಷದ ನಾಯಕರ ಘೋಷಣೆ ಆಗಲಿದೆ. ವಿಪಕ್ಷ ನಾಯಕರ ನೇತೃತ್ವದಲ್ಲಿ ಸದನದಲ್ಲಿ ಹೋರಾಟ ಮಾಡುತ್ತೇವೆ. ನಾನು ಆಕಾಂಕ್ಷಿ ಅಂತಾ ಅರ್ಜಿ ಹಾಕುವುದು ಬಿಜೆಪಿಯಲ್ಲಿ ಇಲ್ಲ. ಕಾಂಗ್ರೆಸ್​ನವರು ಇನ್ನೂ ಹನಿಮೂನ್​ನಲ್ಲೇ ಇದ್ದಾರೆ. ಎಲ್ಲರ ಹತ್ತಿರ ಹಾರ ಹಾಕಿಸಿಕೊಂಡು ಸಂಭ್ರಮ ಮಾಡುತ್ತಿದ್ದಾರೆ. ಇನ್ಮುಂದೆ ನೋಡಿ ಹೇಗಿರುತ್ತೆ ನಮ್ಮ ಹೋರಾಟ ಎಂದರು.

ಷರತ್ತು ಇಲ್ಲದೇ ಗ್ಯಾರಂಟಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿತ್ತು. ಈಗ ನೋಡಿದ್ರೆ ಗ್ಯಾರಂಟಿಗಳಿಗೆ ಸರ್ಕಾರ ಕಂಡಿಷನ್ ಹಾಕುತ್ತಿದೆ. 10 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಸರ್ಕಾರ ಕೊಡಬೇಕು. ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡಬೇಕು. 200 ಯುನಿಟ್ ವಿದ್ಯುತ್ ಫ್ರೀ ಕೊಡುತ್ತೇವೆ ಎಂದು ಹೇಳಿದ್ದರು. ಆದ್ರೆ 200 ಯುನೈಟೆಡ್ ವಿದ್ಯುತ್ ಫ್ರೀ ಕೊಡುತ್ತಿಲ್ಲ. ಜನರು ವಿದ್ಯುತ್ ವಲೆಯನ್ನು ಖರೀದಿ ಮಾಡಿದ್ದಾರೆ. ಗೃಹ ಜ್ಯೋತಿ ಯೋಜನೆಯಿಂದ ಜಗಳಗಳು ಶುರುವಾಗಿದೆ ಎಂದು ಕಿಡಿಕಾರಿದರು.

ಯುವನಿಧಿ ಯೋಜನೆ ಬಗ್ಗೆ ಬಹುತೇಕ ಗೊಂದಲ ಇದೆ. ಎಲ್ಲಾ ನಿರುದ್ಯೋಗಿಗಳಿಗೆ 3000 ರೂ. ಹಣ ನೀಡಬೇಕು. ಶಕ್ತಿ ಯೊಜನೆಯಿಂದ ಬಸ್ ಗಳ ಕೊರತೆ ಉಂಟಾಗಿದೆ. ನಡು ರಸ್ತೆಯಲ್ಲಿಯೇ ಬಸ್ ಗಳು ಕೆಟ್ಟು ನಿಲ್ಲುತ್ತಿವೆ. ಅಲ್ಲದೇ ಶಕ್ತಿ ಯೊಜನೆಯಿಂದ ಆಟೋ ಚಾಲಕರ ಪರಿಸ್ಥಿತಿ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ