Mysore
25
moderate rain

Social Media

ಶನಿವಾರ, 13 ಜೂನ್ 2026
Light
Dark

ಕೆಲಸದ ಸಮಯ ಮುಗಿಯಿತೆಂದು ದಿಲ್ಲಿ ತಲುಪಬೇಕಿದ್ದ 300 ಜನರ ಜೈಪುರದಲ್ಲೇ ಇಳಿಸಿ ಹೋದ ಏರ್‌ ಇಂಡಿಯಾ ಪೈಲಟ್‌!

ನವದೆಹಲಿ : ಪ್ರತಿಕೂಲ ಹವಾಮಾನ ಹಾಗೂ ಪೈಲಟ್‌ ಕರ್ತವ್ಯದ ಸಮಯ ಮುಗಿದ ಪರಿಣಾಮವಾಗಿ ಲಂಡನ್‌ನಿಂದ ದೆಹಲಿಗೆ ಏರ್‌ ಇಂಡಿಯಾ ವಿಮಾನದಲ್ಲಿ ಆಗಮಿಸುತ್ತಿದ್ದ 300 ಪ್ರಯಾಣಿಕರು ಪಡಿಪಾಟಲು ಅನುಭವಿಸಿದ ಘಟನೆ ನಡೆದಿದೆ. ಪ್ರತಿಕೂಲ ಹವಾಮಾನದಿಂದಾಗಿ ಜೈಪುರದಲ್ಲಿ ಏರ್‌ ಇಂಡಿಯಾ ವಿಮಾನ ಲ್ಯಾಂಡ್‌ ಆಯಿತು. ಬಳಿಕ ದೆಹಲಿಯಲ್ಲಿ ಇಳಿಸಲು ನಿಶಾನೆ ಸಿಕ್ಕಿತಾದರೂ, ಕಾರ್ಯನಿರ್ವಹಣಾ ಅವಧಿ ಮುಗಿದಿದ್ದ ಕಾರಣ ವಿಮಾನ ಚಾಲನೆಗೆ ಪೈಲಟ್‌ ನಿರಾಕರಿಸಿದ. ಹೀಗಾಗಿ ಪ್ರಯಾಣಿಕರು ಜೈಪುರದಲ್ಲೇ ಸಿಲುಕುವಂತಾಯಿತು.

ಆಕ್ರೋಶಗೊಂಡ ಪ್ರಯಾಣಿಕರು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಏರ್‌ ಇಂಡಿಯಾಗೆ ಟ್ವಿಟ್ಟರ್‌ ಮೂಲಕ ದೂರು ನೀಡಿದರು. ಬಳಿಕ ಬದಲಿ ಪೈಲಟ್‌ನನ್ನು ಕಳುಹಿಸಿ ಪ್ರಯಾಣಿಕರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ.

ಆಗಿದ್ದೇನು? : ಲಂಂಡನ್‌ನಿಂದ ದೆಹಲಿಗೆ 300 ಪ್ರಯಾಣಿಕರನ್ನು ಹೊತ್ತ ಏರ್‌ ಇಂಡಿಯಾ ವಿಮಾನ ಬೆಳಗಿನ ಜಾವ ದೆಹಲಿಗೆ ಆಗಮಿಸಿತು. ಆದರೆ ಪ್ರತಿಕೂಲ ಹವಾಮಾನ ಇದ್ದ ಕಾರಣ ದೆಹಲಿಯ ಆಗಸದಲ್ಲೇ 10 ನಿಮಿಷ ಹಾರಾಟ ನಡೆಸುವಂತೆ ಪೈಲಟ್‌ಗೆ ಸೂಚಿಸಲಾಯಿತು. ಹವಾಮಾನ ಸುಧಾರಿಸದ ಹಿನ್ನೆಲೆಯಲ್ಲಿ ಬೆಳಗಿನ ಜಾವ 4ಕ್ಕೆ ವಿಮಾನವನ್ನು ಜೈಪುರದಲ್ಲಿ ಇಳಿಸಲಾಯಿತು.

ಕೆಲ ಹೊತ್ತಿನ ಬಳಿಕ ದೆಹಲಿಯಲ್ಲಿ ವಿಮಾನ ಲ್ಯಾಂಡ್‌ ಮಾಡಲು ಅನುಮತಿ ಬಂತಾದರೂ ವಿಮಾನ ಹಾರಿಸಲು ಪೈಲಟ್‌ ನಿರಾಕರಿಸಿದರು. ಪೈಲಟ್‌ಗಳಿಗೆ ನಿರ್ದಿಷ್ಟ ಕರ್ತವ್ಯದ ಮಿತಿ ಇರುತ್ತದೆ. ಏರ್‌ ಇಂಡಿಯಾ ಪೈಲಟ್‌ ಆ ಮಿತಿಯನ್ನು ಮೀರಿದ್ದರು. ಹೀಗಾಗಿ ಅವರು ಒಪ್ಪಲಿಲ್ಲ. ಇದೊಂದು ಸುರಕ್ಷತಾ ಕ್ರಮವಾಗಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ.

ಪಾಕ್‌ ವಾಯು ಪ್ರದೇಶ ಪ್ರವೇಶಿಸಿದ್ದ ಶ್ರೀನಗರ – ಜಮ್ಮು ವಿಮಾನ : ಪ್ರತಿಕೂಲ ಹವಾಮಾನದ ಕಾರಣ ಶ್ರೀನಗರದಿಂದ ಜಮ್ಮುವಿಗೆ ಇಂಡಿಗೋ ವಿಮಾನವೊಂದು ಭಾನುವಾರ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಈ ಸಂಬಂಧ ಮಾಹಿತಿ ನೀಡಿದ ಅಧಿಕಾರಿ, “ಇಂಡಿಗೋ 6e-2124 ಪ್ರತಿಕೂಲ ಹವಾಮಾನದಿಂದಾಗಿ ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿತು ಮತ್ತು ವಿಮಾನವನ್ನು ಅಮೃತಸರಕ್ಕೆ ಮಾರ್ಗ ಬದಲಾವಣೆ ಮಾಡಲಾಯ್ತು” ಎಂದು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಈ ಘಟನೆ ಕೆಲ ಕಾಲ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತಾದರೂ ಅದೃಷ್ಟವಶಾತ್‌ ವಿಮಾನ ಯಶಸ್ವಿಯಾಗಿ ಅಮೃತಸರದ ಕಡೆಗೆ ಮಾರ್ಗ ಬದಲಾವಣೆಯಾಗಿ ಅಲ್ಲೇ ಲ್ಯಾಂಡ್‌ ಆಗಿದೆ. ಇನ್ನು, ಈ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಪರಿಸ್ಥಿತಿಯ ಬಗ್ಗೆ ವಿಮಾನಯಾನ ಸಂಸ್ಥೆಯು ಎರಡೂ ದೇಶಗಳಲ್ಲಿನ ಅಧಿಕಾರಿಗಳಿಗೆ ತಿಳಿಸಿತ್ತು ಎಂದೂ ತಿಳಿದುಬಂದಿದೆ. ಹಾಗೆ, ವಿಮಾನದ ತಿರುವಿನ ಬಗ್ಗೆ ಜಮ್ಮು ಮತ್ತು ಲಾಹೋರ್ ಎಟಿಸಿ ನಡುವೆ ಸಮನ್ವಯ ಸಾಧಿಸಲಾಗಿತ್ತು ಎಂದೂ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!