Mysore
22
broken clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಆಷಾಢ ಶುಕ್ರವಾರಕ್ಕೆ ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ, ಭಕ್ತಾದಿಗಳಿಗೆ ಉಚಿತ ಬಸ್ ವ್ಯವಸ್ಥೆ

ಮೈಸೂರು : ಚಾಮುಂಡಿ ಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಜರುಗುವ ಆಷಾಢ ಶುಕ್ರವಾರದ ವಿಶೇಷ ಪೂಜಾ ಮಹೋತ್ಸವಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಷಾಢ ಶುಕ್ರವಾರದಂದು ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ, ಉಚಿತ ಬಸ್ ಸೇವೆಯನ್ನು ನೀಡಲು ನಿರ್ಧರಿಸಲಾಗಿದ್ದು, ಅದಕ್ಕೆ ತಗಲುವ ಖರ್ಚನ್ನು ಚಾಮುಂಡೇಶ್ವರಿ ದೇವಸ್ಥಾನದ ದೇವಸ್ಥಾನದ ನಿಧಿಯಿಂದಲೇ ಭರಿಸಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮಹದೇವಪ್ಪನವರು ದೇವಸ್ಥಾನದ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ.

ನಗರದ ಸರಕಾರಿ ಅತಿಥಿಗೃಹದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘‘ಆಷಾಢ ಶುಕ್ರವಾರ ಹಾಗೂ ವರ್ಧಂತ್ಯುತ್ಸವದಂದು ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ಮಾದರಿಯಲ್ಲಿವ್ಯವಸ್ಥೆ ಮಾಡಬೇಕು. ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಅದನ್ನು ಕಾಪಾಡಬೇಕು. ಈ ಹಿಂದೆ ನಡೆದಿರುವ ಕ್ರಮಗಳನ್ನೇ ಅನುಸರಿಸಿ. ಆದರೆ, ಯಾವುದರಲ್ಲಿ ಲೋಪವಿದೆಯೋ ಅಂತಹ ವ್ಯವಸ್ಥೆಗಳನ್ನು ಕೈಬಿಡಿ’’ ಎಂದು ಸಲಹೆ ನೀಡಿದರು.

ಬೆಟ್ಟದಲ್ಲಿ ವಿಶೇಷ ಅಲಂಕಾರ : ಇದಲ್ಲದೆ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದಿಂದ (ಸೆಸ್ಕ್‌) ವತಿಯಿಂದ ಚಾಮುಂಡಿ ಬೆಟ್ಟದ ದೇಗುಲದ ಸುತ್ತ, ದೇವೀಕೆರೆ ಹಾಗೂ 1000 ಮೆಟ್ಟಿಲಿನ ಬಳಿಯ ವಿದ್ಯುತ್‌ ದೀಪಗಳನ್ನು ದುರಸ್ತಿಗೊಳಿಸಬೇಕು. ಮಾತ್ರವಲ್ಲದೇ ಬೆಟ್ಟದಲ್ಲಿರುವ ದೇವಾಲಯಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಶೇಷ ದೀಪಾಲಂಕಾರ, ಎಲ್‌ಇಡಿ ದೀಪಗಳ ವ್ಯವಸ್ಥೆ ಮಾಡಲು ಸಚಿವರು ಸೂಚಿಸಿದ್ದು ಅದರಂತೆ ಕ್ರಮ ಕೈಗೊಳ್ಳಲಾಗಿದೆ.

ಪ್ಲಾಸ್ಟಿಕ್‌ ನಿಷೇಧ ಅರಿವು : ಲಕ್ಷಾಂತರ ಭಕ್ತಾದಿಗಳ ಆಗಮನದಿಂದ ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ತಪ್ಪಿಸಲು ಭಕ್ತಾದಿಗಳಲ್ಲಿ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ, ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಆವರಣದಲ್ಲಿ ಆಷಾಢ ಶುಕ್ರವಾರದಂದು ಹಿಂದಿನ ಹಾಗೂ ಮಾರನೇ ದಿನ ಸ್ವಚ್ಛತೆ ಕಾಪಾಡುವುದು, ಸಂಚಾರ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಭಕ್ತರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಚಾಮುಂಡೇಶ್ವರಿ ದೇಗುಲದ ಹೈ ಮಾಸ್ಟ್‌ ದೀಪವನ್ನು ದುರಸ್ತಿಪಡಿಸಲು ಸಹ ಕ್ರಮಕೈಗೊಳ್ಳಲಾಗಿದೆ.

ಆಷಾಢ ಶುಕ್ರವಾರದ ಮಹತ್ವವೇನು? : ಈ ಬಾರಿ ಜೂ. 23, 30, ಜು.7, 14ರಂದು ಆಷಾಢ ಶುಕ್ರವಾರವಿದ್ದು, ಜು. 10ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತ್ಯುತ್ಸವ ನಡೆಯಲಿದೆ. ಈ ಐದು ದಿನ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ರಾಜ್ಯದ ವಿವಿಧೆಡೆಯಿಂದಷ್ಟೇ ಅಲ್ಲ, ಹೊರರಾಜ್ಯಗಳಿಂದಲೂ ಆಗಮಿಸಲಿದ್ದಾರೆ.

ವಿವಿಧ ಇಲಾಖೆಗಳ ಸಾಥ್ : ಪೊಲೀಸ್‌ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಮುಡಾ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಸೆಸ್ಕ್‌, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ಮೈಸೂರು ತಾಲೂಕು ಪಂಚಾಯಿತಿ ಒಟ್ಟಾಗಿ ಸೇರಿ ಬಿಗಿಭದ್ರತೆ, ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿವೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!