Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ರಾಮನಗರದಲ್ಲಿ ಒಂಟಿ ಸಲಗ ಸೆರೆ : ಲಾರಿಗೆ ಹತ್ತಿಸುವ ವೇಳೆ ಮುರಿದ ದಂತ

ರಾಮನಗರ : ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಅದರಲ್ಲೂ ಚನ್ನಪಟ್ಟಣ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇತ್ತೀಚಿಗೆ ಇಬ್ಬರು ಅಮಾಯಕರನ್ನ ಕಾಡಾನೆಯೊಂದು ಬಲಿ ಪಡೆದಿತ್ತು. ಹಾಗಾಗಿ ಈ ಕಾಡಾನೆಯನ್ನು ಹಿಡಿಯಲೇಬೇಕು ಎಂದು ನಿರ್ಧರಿಸಿ, ಸಾಕಾನೆಗಳ ನೆರವಿನಿಂದ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ. ಸೆರೆ ಹಿಡಿದ 40 ವರ್ಷದ ಗಂಡಾನೆಯನ್ನ ಲಾರಿಗೆ ಹತ್ತಿಸುವ ವೇಳೆ ಕೋಪದಲ್ಲಿ ಕ್ರೇನ್​ಗೆ ಕಾಡಾನೆ ಗುದ್ದಿದ್ದು, ದಂತ ಮುರಿದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯ ‌ಪ್ರದೇಶದಲ್ಲಿ ಕಾಡಾನೆಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಇಂದು ಯಶಸ್ವಿಯಾಗಿದ್ದಾರೆ. ಸಾಕಾನೆಗಳಾದ ಅಭಿಮನ್ಯು, ಅರ್ಜುನ, ಭೀಮ, ಶ್ರೀಕಂಠ, ಮಹೇಂದ್ರ ಸಹಾಯದಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಯಿತು.

ಇಂದು ಬೆಳಗ್ಗೆ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ಪತ್ತೆಯಾಗಿತ್ತು. ಹೀಗಾಗಿ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು. ಆನಂತರ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನ ಕ್ರೇನ್ ಸಹಾಯದಿಂದ ಲಾರಿಗೆ ಹತ್ತಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಂದಾಗಿದ್ದರು. ಆದರೆ ಈ ವೇಳೆ ಸಾಕಷ್ಟು ವಿರೋಧ ವ್ಯಕ್ತಪಡಿಸಿತ್ತು.

ಅಲ್ಲದೆ ಇದರಿಂದ ಕೋಪಗೊಂಡ ಆನೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿತ್ತು. ಅಲ್ದದೆ ಸಿಟ್ಟಿನಲ್ಲಿ ಕ್ರೇನ್​ಗೆ ಗುದ್ದಿತ್ತು. ಇದರಿಂದ ಆನೆಯ ದಂತವೇ ಮುರಿದು ಬಿದ್ದಿತ್ತು. ಆದರೂ ಸಹ ಸಾಕಾನೆಗಳ ಸಹಾಯದಿಂದ ಕಾಡಾನೆಯನ್ನ ಲಾರಿಗೆ ಹತ್ತಿಸಲಾಯಿತು.

ಅಂದಹಾಗೆ ಕಾಡಾನೆ ದಾಳಿಗೆ ಐದು ದಿನಗಳ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದರು. ಮೇ 30ರಂದು ಕನಕಪುರ ತಾಲೂಕಿನ ಹೊಸಕಬ್ಬಾಳು ಗ್ರಾಮದ ಬಳಿ ಜಮೀನಿಗೆ ತೆರಳುತ್ತಿದ್ದ ಕಬ್ಬಾಳು ಗ್ರಾಮದ ಕಾಳಯ್ಯ(60) ಎಂಬಾತ ಬಲಿಯಾಗಿದ್ರೆ, ಜೂನ್ 3ರಂದು ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದ ಬಳಿ ಮಾವಿನ ತೋಟ ಕಾವಲು ಕಾಯುತ್ತಿದ್ದ, ಕನಕಪುರ ಮೂಲದ ವೀರಭದ್ರಯ್ಯ(56) ಎಂಬಾತನನ್ನು ಕಾಡಾನೆ ಬಲಿ ಪಡೆದಿತ್ತು.

ಹೀಗಾಗಿ ಐದು ಆನೆಗಳನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದರು. ಒಂದು ಕಾಡಾನೆ ಸೆರೆಗೆ ಅನುಮತಿ ಸಿಕ್ಕಿತ್ತು. ಅದರಂತೆ ಇದೀಗ ಇಬ್ಬರನ್ನ ಬಲಿ ಪಡೆದ ಪುಂಡಾನೆ ಸೆರೆಯಾಗಿದ್ದು, ಉಳಿದ ನಾಲ್ಕು ಕಾಡಾನೆಗಳನ್ನ ಮತ್ತೆ ಎರಡು ದಿನಗಳ ನಂತರ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ಲಾನ್ ಮಾಡಿಕೊಂಡಿದ್ದಾರೆ.

ಇದೀಗ ಸೆರೆ ಸಿಕ್ಕಿರುವ ಕಾಡಾನೆಗೆ ರೇಡಿಯೋ ಕಾಲರ್ ಕೂಡ ಅಳವಡಿಸಿದ್ದು, ಅದರ ಚಲನ-ವಲನದ ಬಗ್ಗೆಯೂ ಕೂಡ ನಿಗಾ ಹಿಡಲು ಪ್ಲಾನ್ ಮಾಡಲಾಗಿದೆ. ಸದ್ಯ ಎಲ್ಲರ ನಿದ್ದೆಗೆಡಿಸಿದ ಕಾಡಾನೆಯ ಸೆರೆಯಿಂದ ಹತ್ತಾರು ಹಳ್ಳಿಯ ರೈತರು ಸದ್ಯದ ಮಟ್ಟಿಗೆ ನಿಟ್ಟಿಸಿರು ಬಿಟ್ಟಿದ್ದಾರೆ. ಉಳಿದ ಆನೆಗಳನ್ನು ಕೂಡ ಸೆರೆ ಹಿಡಿಯುವಂತೆ ಒತ್ತಾಯ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!