Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ರಣಹೇಡಿಗಳ ವಿಚಾರ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ: ಬಿ.ಕೆ.ಹರಿಪ್ರಸಾದ್

ಶಿವಮೊಗ್ಗ: ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿ ಸ್ವಾತಂತ್ರ್ಯ ತಂದಿದ್ದಾರೆ. ಅ ಹೋರಾಟ ಮಾಡಿದವರಿಗೆ ಅಪಮಾನ ಮಾಡುತ್ತಿದ್ದಾರೆ. ಬ್ರಿಟಿಷರಿಗೆ ಆರು ಬಾರಿ ಕ್ಷಮಾಪಣೆ ಪತ್ರ ಯಾಕೆ ಕೊಟ್ಟರು ಎಂದು ಬಿಜೆಪಿ ಮತ್ತು ಆರ್ ಎಸ್ಎಸ್ ನಾಯಕರು ಮೊದಲು ಹೇಳಲಿ. ಅವರ ಚಿತ್ರಗುಪ್ತ ಪುಸ್ತಕದಲ್ಲೇ ಬ್ರಿಟಿಷರಿಗೆ ಯಾಕೆ ನಾನು ಕ್ಷಮಾಪಣೆ ಕೇಳಿದ್ದೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಇಂತಹ ರಣಹೇಡಿಗಳ ಬಗ್ಗೆ ನಮ್ಮ ಮಕ್ಕಳ ಪಠ್ಯಪುಸ್ತಕದಲ್ಲಿ ಇಡಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಬಿಜೆಪಿ ಅವರು ಎಲೆಕ್ಷನ್ ಅಜೆಂಡವಾಗಿ ಮಾಡಿಕೊಂಡರೆ ಬಹಳ ಸಂತೋಷ. ಈ ಬಾರಿ ಅವರನ್ನು ಜನ ಮನೆಗೆ ಕಳಿಸಿದ್ದಾರೆ. ಮುಂದಿನ ಬಾರಿ ಅವರನ್ನು ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ ಎಂದರು.

ಪಠ್ಯಪುಸ್ತಕ ಒಂದೇ ಅಲ್ಲ, ಬಿಜೆಪಿ ಅನೈತಿಕ ಸರ್ಕಾರ ಮಾಡಿದ ನಂತರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನೇ ಸಂಪೂರ್ಣ ಕೇಸರಿಕರಣ ಮಾಡಲು ಹೊರಟಿದ್ದರು. ಭಾರತ ಸಾವಿರಾರು ವರ್ಷದಿಂದ ಜಾತ್ಯತೀತ ರಾಷ್ಟ್ರವಾಗಿ ಉಳಿದುಕೊಂಡಿದೆ. ಇದರ ಅರಿವಿಲ್ಲದೇ ವ್ಯವಸ್ಥೆ ಬುಡಮೇಲು ಮಾಡಲು ಬಿಜೆಪಿ ಹೊರಟಿತ್ತು. ಎಲ್ಲಾ ಕಡೆ ಬಿಜೆಪಿ, ಆರ್ ಎಸ್ಎಸ್ ತಮ್ಮ ಸಿದ್ದಾಂತವನ್ನು ತೂರಲು ಪ್ರಯತ್ನ ಮಾಡಿದ್ದಾರೆ. ಆ ಎಲ್ಲಾ ಕ್ಷೇತ್ರದಲ್ಲೂ ಸರಿ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತದೆ ಎಂದರು.

ಹೆಡ್ಗೇವಾರ್ ಪಠ್ಯಪುಸ್ತಕ ಕೈ ಬಿಡುವ ವಿಚಾರವಾಗಿ ಮಾತನಾಡಿ, ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರ ಎಂದು ಮೊದಲು ಸಾಬೀತುಪಡಿಸಲಿ. ಬ್ರಿಟಿಷರ ಬಳಿ ಕ್ಷಮೆ ಕೇಳಿದ ನಕಲಿ ಸ್ವತಂತ್ರ ಹೋರಾಟಗಾರರಿಗೆ ಮನ್ನಣೆ ನೀಡುವುದಾದರೆ ಹೇಗೆ? ಗೋಡ್ಸೆ ಕೂಡ ರಾಷ್ಟ್ರಭಕ್ತ ಎಂದು ಯಾರೋ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರ ರಾಷ್ಟ್ರಭಕ್ತಿಗೂ, ಜನಸಾಮಾನ್ಯರ ರಾಷ್ಟ್ರಭಕ್ತಿಗೂ ಬಹಳಷ್ಟು ವ್ಯತ್ಯಾಸವಿದೆ ಎಂದರು.

ನೈತಿಕ ಪೊಲೀಸ್ ಗಿರಿ ವಿಚಾರವಾಗಿ ಮಾತನಾಡಿ, ನೈತಿಕ ಪೊಲೀಸ್ ಗಿರಿ ಇರುವುದು ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮಾತ್ರ. ಬಜರಂಗದಳ ವಿಚಾರದ ಬಗ್ಗೆ ನಮ್ಮ ನಿಲುವನ್ನ ನಾವು ಸ್ಪಷ್ಟಪಡಿಸಿದ್ದೇವೆ. ಬಜರಂಗ ದಳದ ಹೆಸರು ಅವರು ಹೇಳಿದ್ದಕ್ಕೆ ಜನ ಸೋಲಿಸಿ ಕಳಿಸಿದ್ದಾರೆ. ಬಜರಂಗ ಬಲಿ, ಬಜರಂಗದಳ ಅಂತ ಹೇಳಿದ್ದಕ್ಕೆ ನೀವು ಯೋಗ್ಯರಲ್ಲ ಅಂದು ಜನ ತೀರ್ಮಾನಿಸಿದ್ದಾರೆ. ಇವೆಲ್ಲಾ ಬಿಟ್ಟು ಜನರ ಬದುಕಿನ ಬಗ್ಗೆ ಹಾಗೂ ಜನರ ಕಲ್ಯಾಣದ ಬಗ್ಗೆ ಕಾರ್ಯಕ್ರಮ ಮಾಡಬೇಕು. ಇನ್ನು ಮುಂದಾದರೂ ಕೂಡ ಕರ್ನಾಟಕವನ್ನು ಸರ್ವ ಜನ ಸಮಭಾವವೆಂದು ಹೇಳುತ್ತೇವೆ ಅದಕ್ಕೆ ಗೌರವ ಕೊಟ್ಟು ಬಾಳುವುದು ಒಳ್ಳೆಯದು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!