Mysore
26
overcast clouds

Social Media

ಬುಧವಾರ, 01 ಜುಲೈ 2026
Light
Dark

ಚಾಲಕ ಬರೋದು ಲೇಟ್‌ ಆಯ್ತು ಅಂತಾ ತಾನೇ ಬಸ್‌ ಕೊಂಡೊಯ್ದ ಕುಡುಕ : ಬೀದರ್‌ನಲ್ಲಿ ತಪ್ಪಿದ ದುರಂತ

ಬೀದರ್‌ : ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದ ವ್ಯಕ್ತಿಯೊಬ್ಬ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಪ್ರಯಾಣಿಕ ಬಸ್‌ ಅನ್ನೇ ಹೈಜಾಕ್‌ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಔರಾದ್‌ ಬಸ್‌ ನಿಲ್ದಾಣದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಕರಂಜಿ ಗ್ರಾಮದ ಯಶಪ್ಪ ಸೂರ್ಯವಂಶಿ ಘಟನೆಯ ಸೂತ್ರಧಾರ.

ವಾರದ ಸಂತೆಗೆ ಬಂದಿದ್ದ ಈತ ಎಲ್ಲವನ್ನೂ ಮರೆತು ಕಂಠಮಟ್ಟ ಮದ್ಯ ಸೇವನೆ ಮಾಡಿದ್ದ. ಬಳಿಕ ಊರು ನೆನಪಾಗಿ ವಾಪಸಾಗಲು ಔರಾದ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದ. ಬೀದರ್‌ ಕಡೆ ಹೊರಡಲು ಅಣಿಯಾಗಿದ್ದ ಬಸ್‌ ಹತ್ತಿ ಕುಳಿತುಕೊಂಡಿದ್ದ. ತುಂಬ ಹೊತ್ತು ಕಳೆದರೂ ಬಸ್‌ ಹೊರಡದೇ ಇದ್ದಾಗ ತಾಳ್ಮೆ ಕಳೆದುಕೊಂಡ ಯಶಪ್ಪ, ಸಿಬ್ಬಂದಿಗೆ ಬೈಯುತ್ತ ಹೋಗಿ ಚಾಲಕನ ಸೀಟಿನಲ್ಲಿಕುಳಿತು ಗಾಡಿ ಸ್ಟಾರ್ಟ್‌ ಮಾಡಿದ್ದ.

ಬಸ್‌ನಲ್ಲಿ ಇದ್ದ ಜನ ಗಾಬರಿಯಾಗಿ, ಇಳಿದು ಓಡುವ ಮೊದಲೇ ಚಾಲನೆ ಮಾಡಿ ರಸ್ತೆಯತ್ತ ತಿರುಗಿಸಿದ್ದ. ಸ್ವಲ್ಪ ಮುಂದೆ ಸಾಗುವಷ್ಟರಲ್ಲಿಯೇ ಅಡ್ಡ ಬಂದ ಕ್ರೂಸರ್‌ವೊಂದಕ್ಕೆ ಬಸ್‌ ಡಿಕ್ಕಿಯಾಗಿತ್ತು. ಇದರಿಂದ ದಿಗಿಲುಗೊಂಡ ಯಶಪ್ಪ, ಹಠಾತ್ತನೆ ಸ್ಟೀರಿಂಗ್‌ ಬದಿಗೆ ಎಳೆದಿದ್ದರಿಂದ ಮೊಣಕಾಲೆತ್ತರದ ಡಿವೈಡರ್‌ಗೆ ಬಸ್‌ ಡಿಕ್ಕಿಯಾಗಿ ಮೇಲಕ್ಕೆ ಹತ್ತಿ ನಿಂತುಕೊಂಡಿತು. ನೆರವಿಗೆ ಧಾವಿಸಿದ ಜನ ಯಶಪ್ಪನನ್ನು ಕೆಳಗೆ ಎಳೆದು ಪೊಲೀಸರಿಗೆ ಒಪ್ಪಿಸಿದರು.

ಅದೃಷ್ಟವಶಾತ್‌ ಈ ಘಟನೆಯಲ್ಲಿಯಾರಿಗೂ ಗಾಯಗಳಾಗಿಲ್ಲ. ಕ್ರೂಸರ್‌ ಸ್ವಲ್ಪಮಟ್ಟಿಗೆ ಜಖಂಗೊಂಡಿದೆ. ”ಸೋಮವಾರ ವಾರದ ಸಂತೆ ಇದ್ದದ್ದರಿಂದ ಬಸ್‌ ನಿಲ್ದಾಣದ ಸುತ್ತಮುತ್ತ ವಿಪರೀತ ಜನರಿದ್ದರು. ಆದರೆ, ಜನಸಂದಣಿ ಇರುವ ಕಡೆ ಬಸ್‌ ಬಂದಿಲ್ಲ. ಹಾಗೊಂದು ವೇಳೆ ಆಗಿದ್ದರೆ ಭಾರಿ ಅನಾಹುತ ಆಗುತ್ತಿತ್ತು,” ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚಾಲಕನ ಮೈಮರೆವು! : ಕುಡುಕನ ಕೈಗೆ ಬಸ್ಸಿನ ಕೀ ಸಿಕ್ಕಿದ್ದು ಹೇಗೆ ಎಂದು ವಿಚಾರಿಸಿದಾಗ ಚಾಲಕನ ಮೈಮರೆವು ಬೆಳಕಿಗೆ ಬಂದಿದೆ. ರವಾನೆ ಅನುಮತಿ ಪಡೆಯಲು ಚಾಲಕ ಕಂಟ್ರೋಲ್‌ ರೂಮ್‌ಗೆ ಹೋಗಿದ್ದ ವೇಳೆ, ಈ ಕುಡುಕ ಪ್ರಯಾಣಿಕ ಬಸ್‌ ಓಡಿಸಿಕೊಂಡು ಹೋಗಲು ಯತ್ನಿಸಿದ್ದ. ”ಸಾಮಾನ್ಯವಾಗಿ ಬಸ್‌ನ ಕೀ ಜತೆಗೆ ತೆಗೆದುಕೊಂಡು ಹೋಗುತ್ತೇನೆ. ಆದರೆ, ಈ ದಿನ ಮೈಮರೆತು ಗಾಡಿಯಲ್ಲಿಯೇ ಬಿಟ್ಟಿದ್ದರಿಂದ ಎಡವಟ್ಟಾಯಿತು,” ಎಂದು ಚಾಲಕ ಒಪ್ಪಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!