ಶಿವಮೊಗ್ಗ : ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಹೀರೋ ಎಂದುಕೊಂಡಿದ್ದೆ. ಆದರೆ, ವಿಶ್ವ ನಾಯಕ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡುವ ಮೂಲಕ ಜನರಿಗೆ ವಿಲನ್ ಆಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜಕೀಯದಲ್ಲಿ ಒಂದು ತೂಕ ಇತ್ತು. ಅಂಥ ನಾಯಕರು ಮೋದಿ ಬಗ್ಗೆ ಇಷ್ಟುಕೀಳುಮಟ್ಟದಲ್ಲಿ ಮಾತನಾಡುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಪ್ರಧಾನಿ ಮೋದಿ ಅವರನ್ನು ಟೀಕಿಸಿದವರು ಯಾರು ಉದ್ಧಾರ ಆಗಿಲ್ಲ, ಪಕ್ಷವೂ ಉದ್ಧಾರ ಆಗಲ್ಲ ಎಂದು ಕಿಡಿಕಾರಿದರು.
ಜನರ ಮನಸ್ಸನ್ನು ಗೆಲ್ಲುವುದು ಬಿಟ್ಟು ಕಾಂಗ್ರೆಸ್ ಸೋಲಿನ ಭೀತಿಯಿಂದ ಗೂಂಡಾಗಿರಿ ಮಾಡುತ್ತಿದೆ. ಅದನ್ನು ನಿಲ್ಲಿಸದಿದ್ದರೆ ಬಿಜೆಪಿ ತಕ್ಕ ಉತ್ತರ ನೀಡುತ್ತದೆ. ಪಕ್ಷದ ನಾಯಕರು ಕೆಟ್ಟಭಾಷೆಗಳನ್ನು ಬಳಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದನ್ನು ನಿಲ್ಲಿಸಬೇಕು. ನಿನ್ನೆ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು ವಿಷದ ಹಾವು ಎಂದಿರುವುದು ಅವರಿಗೆ ಶೋಭೆ ತರುವುದಿಲ್ಲ. ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಹುಬ್ಬಳ್ಳಿ ಪಾಕಿಸ್ತಾನವೇ? : ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಭ್ರಮೆಯಲ್ಲಿ ಶೆಟ್ಟರ್ ಇದ್ದಾರೆ. ರಾಜ್ಯದ ಎಲ್ಲ ಭಾಗದಲ್ಲೂ ಪಕ್ಷದ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಹುಬ್ಬಳ್ಳಿಯಲ್ಲೂ ಮಾಡುತ್ತಿದ್ದಾರೆ. ಅಲ್ಲಿ ಪ್ರಚಾರ ಮಾಡಬಾರದು ಎಂದರೆ ಹೇಗೆ? ಹುಬ್ಬಳ್ಳಿ ಏನೂ ಪಾಕಿಸ್ತಾನವೇ? ಜಗದೀಶ್ ಶೆಟ್ಟರ್ ಅವರಿಗೆ ಪಕ್ಷ ಎಲ್ಲ ಹುದ್ದೆಗಳನ್ನು ನೀಡಿತ್ತು. ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಬಿಜೆಪಿ. ಹೆತ್ತ ತಾಯಿಗೆ ದ್ರೋಹ ಬಗೆದು ಹೋಗಿದ್ದಾರೆ. ಅವರಿಗೆ ನಾನು ಪ್ರೀತಿಯಿಂದ ಮಾತನಾಡಿ ಬಾ ಎಂದು ಕರೆದೆ ಆದರೆ, ಅವರು ಇಲ್ಲ ನಾನು ಅಲ್ಲೇ ಹೋಗಿ ಸಾಯಿತೀನಿ ಎಂದು ಹೋಗಿದ್ದಾರೆ. ಅವರನ್ನು ಸೋಲಿಸುವುದೇ ಪಕ್ಷದ ಗುರಿಯಾಗಿದೆ ಎಂದು ಖಾರವಾಗಿ ಹೇಳಿದರು.





