Mysore
26
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಸಹಾಯ ಮಾಡುವವರು ಬೇರೆ ಯಾರಾದರೂ ಇದ್ದರೆ ಹೇಳಿ : ಜೈಶಂಕರ್‌ಗೆ ಸಿದ್ದರಾಮಯ್ಯ ತಿರುಗೇಟು

ಹೊಸದಿಲ್ಲಿ : ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ ಜನರನ್ನು ಮರಳಿ ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರುವ ವಿಚಾರ ರಾಜ್ಯದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನಡುವೆ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.
ಸುಡಾನ್‌ನಲ್ಲಿ ಸಿಲುಕಿರುವ ಆದಿವಾಸಿ ಸಮುದಾಯದ ಜನರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಕೇಂದ್ರ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅದಕ್ಕೆ ಎಸ್ ಜೈಶಂಕರ್ ಅವರು ಸರಣಿ ಟ್ವೀಟ್‌ಗಳ ಮೂಲಕ ಆಕ್ರೋಶ ಹೊರಹಾಕಿದ್ದರು. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದರು. ಅದಕ್ಕೆ ಸಿದ್ದರಾಮಯ್ಯ ಮತ್ತೆ ತಿರುಗೇಟು ನೀಡಿದ್ದಾರೆ.
“ಸುಡಾನ್‌ನಲ್ಲಿ ಹಕ್ಕಿ ಪಿಕ್ಕಿಗಳು ಕಳೆದ ಕೆಲವು ದಿನಗಳಿಂದ ಆಹಾರವಿಲ್ಲದೆ ಸಿಲುಕಿದ್ದಾರೆ. ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮವಹಿಸಿಲ್ಲ” ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಪ್ರಧಾನಿ ಕಚೇರಿ, ಪ್ರಧಾನಿ, ವಿದೇಶಾಂಗ ಸಚಿವಾಲಯ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶಿಸಬೇಕು ಹಾಗೂ ಅವರ ಸುರಕ್ಷಿತ ಮರಳುವಿಕೆಗೆ ಖಾತರಿವಹಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು.
ಬಿಜೆಪಿ ಸರ್ಕಾರವು ಈ ಕೂಡಲೇ ಮುಕ್ತ ರಾಜತಾಂತ್ರಿಕ ಚರ್ಚೆಗಳನ್ನು ನಡೆಸಬೇಕು ಮತ್ತು ಹಕ್ಕಿ ಪಿಕ್ಕಿಗಳ ಯೋಗಕ್ಷೇಮ ಕಾಪಾಡಲು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಸುಡಾನ್‌ನಲ್ಲಿನ ನಾಗರಿಕ ಯುದ್ಧದಲ್ಲಿ ನಾವು ಒಬ್ಬ ಭಾರತೀಯ ಹಾಗೂ 60 ಇತರರನ್ನು ಕಳೆದುಕೊಂಡಿರುವುದು ದುರದೃಷ್ಟಕರ ಎಂದು ಸಿದ್ದರಾಮಯ್ಯ ಶೋಕ ವ್ಯಕ್ತಪಡಿಸಿದ್ದರು.
ಜೈಶಂಕರ್ ಸರಣಿ ಟ್ವೀಟ್
ಇದಕ್ಕೆ ಜೈಶಂಕರ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. “ನಿಮ್ಮ ಟ್ವೀಟ್ ಕಂಡು ದಿಗಿಲು ಮೂಡಿದೆ. ಅಲ್ಲಿ ಜೀವಗಳು ಅಪಾಯದಲ್ಲಿವೆ; ಇದರಲ್ಲಿ ರಾಜಕೀಯ ಮಾಡಬೇಡಿ” ಎಂದು ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ.
“ಏಪ್ರಿಲ್ 14ರಂದು ಕದನ ಶುರುವಾಗಿದ್ದು, ಖಾರ್ಟೌಮ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಸುಡಾನ್‌ನಲ್ಲಿರುವ ಹೆಚ್ಚಿನ ಭಾರತೀಯ ಪ್ರಜೆಗಳು ಮತ್ತು ಭಾರತ ಮೂಲದ ಪ್ರಜೆಗಳ ಜತೆ ನಿರಂತರ ಸಂಪರ್ಕದಲ್ಲಿದೆ” ಎಂದು ಸಚಿವರು ಹೇಳಿದ್ದಾರೆ.
“ಅವರ ವಿವರ ಹಾಗೂ ಸ್ಥಳಗಳನ್ನು ಭದ್ರತಾ ಕಾರಣಗಳಿಂದಾಗಿ ಬಹಿರಂಗಪಡಿಸುವುದು ಸಾಧ್ಯವಿಲ್ಲ. ಪ್ರಸ್ತುತ ನಡೆಯುತ್ತಿರುವ ತೀವ್ರ ಕದನದ ಕಾರಣದಿಂದ ಅವರ ಚಲನವಲನಗಳನ್ನು ನಿರ್ಬಂಧಿಸಲಾಗಿದೆ” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
“ಬಹಳ ಸಂಕೀರ್ಣ ಭದ್ರತಾ ಸನ್ನಿವೇಶದಲ್ಲಿ ಅವರ ರಕ್ಷಣೆಗೆ ಸಂಬಂಧಿಸಿದ ಯೋಜನೆಗಳನ್ನು ನಡೆಸಬೇಕಿದೆ. ಈ ಸಂಬಂಧ ಸಚಿವಾಲಯದ ಜತೆ ರಾಯಭಾರ ಕಚೇರಿ ನಿರಂತರ ಸಂಪರ್ಕದಲ್ಲಿದೆ. ಅವರ ಪರಿಸ್ಥಿತಿಯನ್ನು ರಾಜಕೀಯಗೊಳಿಸುವುದು ನಿಮ್ಮ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ವಿದೇಶದಲ್ಲಿರುವ ಭಾರತೀಯರನ್ನು ಅಪಾಯಕ್ಕೆ ದೂಡುವುದನ್ನು ಯಾವುದೇ ಚುನಾವಣಾ ಗುರಿ ಸಮರ್ಥಿಸುವುದಿಲ್ಲ” ಎಂದು ಜೈಶಂಕರ್ ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ತಿರುಗೇಟು
ಎಸ್ ಜೈಶಂಕರ್ ಅವರ ಸರಣಿ ಟ್ವೀಟ್‌ಗಳಿಗೆ ಸಿದ್ದರಾಮಯ್ಯ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಎಸ್ ಜೈಶಂಕರ್ ಅವರೇ ನೀವು ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವುದರಿಂದ ಸಹಾಯಕ್ಕಾಗಿ ನಿಮಗೆ ಮನವಿ ಮಾಡಿದ್ದೆ. ನೀವು ಆತಂಕ ಪಡುವುದರಲ್ಲಿಯೇ ಮಗ್ನರಾಗಿದ್ದರೆ, ನಮ್ಮ ಜನರನ್ನು ವಾಪಸ್ ಕರೆತರಲು ನಮಗೆ ಸಹಾಯ ಮಾಡಬಹುದಾದ ವ್ಯಕ್ತಿಯನ್ನು ದಯವಿಟ್ಟು ತೋರಿಸಿ” ಎಂದು ಹೇಳಿದ್ದಾರೆ.
https://twitter.com/siddaramaiah/status/1648380411628732435?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!