ನವದೆಹಲಿ: ಅಗತ್ಯ ಔಷದಿಗಳ ಬೆಲೆ ಏರಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜನರ ಜೇಬುಗಳ್ಳತನ ಮಾಡಲು ಸುಪಾರಿ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 1 ರಿಂದ ಸುಮಾರು 384 ಔಷದಿಗಳು ಮತ್ತು 1,000 ಕ್ಕೂ ಹೆಚ್ಚು ಸೂತ್ರೀಕರಣಗಳ ದರ ಶೇಕಡಾ 11 ರಷ್ಡು ಏರಿಕೆಯಾಗಿರುವ ಬಗ್ಗೆ ಮಾದ್ಯಮಗಳು ವರದಿ ಮಾಡಿದ ಬಳಿಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಮೋದಿಯವರೇ, ನೀವು ಜನರ ಜೇಬುಗಳ್ಳತನ ಮಾಡಲು ಸುಪಾರಿ ತೆಗೆದುಕೊಂಡಿದ್ದೀರಾ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಭೂಪಾಲ್ನ ಕಾರ್ಯಕ್ರಮಯೊಂದರಲ್ಲಿ ಮಾತನಾಡಿದ ಮೋದಿ, ‘ನನ್ನ ವರ್ಚಸ್ಸನ್ನು ಹಾಳುಗೆಡವಲು ಕೆಲವರು ದೇಶದ ಒಳಗೆ ಮತ್ತು ಹೊರಗಿನ ಜನರೊಂದಿಗೆ ಶಾಮೀಲಾಗಿದ್ದಾರೆ ಮತ್ತು ಈ ಉದ್ದೇಶಕ್ಕಾಗಿ ಸುಪಾರಿ ನೀಡಿದ್ದಾರೆ’ ಎಂದು ಹೇಳಿದ್ದರು. ಮರುದಿನವೇ ಮೋದಿಯವರ ಈ ಆರೋಪಕ್ಕೆ ಖರ್ಗೆ ತಿರುಗೇಟು ನೀಡಿದ್ದಾರೆ.





