ಚಾಮರಾಜನಗರ: ವಿಶೇಷಚೇತನ ಮಕ್ಕಳ ಜಾತ್ರೆಯನ್ನು ಮಾ 4 ರಂದು ಮಾರ್ಗದರ್ಶಿ ವಿಶೇಷಚೇತನರ ಸ್ವಯಂಸೇವಾ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಯೋಜಕಿ ಲೀನಾಕುಮಾರಿ ತಿಳಿಸಿದರು.
ರಾಮಸಮುದ್ರ ಬಡಾವಣೆಯಲ್ಲಿರುವ ಸಂತ ಫ್ರಾನ್ಸಿಸ್ ಶಾಲೆ ಆವಣರದಲ್ಲಿ ಅಂದು ಬೆಳಿಗ್ಗೆ 9 ಗಂಟೆಗೆ ಜಾತ್ರೆ ನಡೆಯಲಿದ್ದು, ವಿಶೇಷಚೇತನ ಮಕ್ಕಳು ಬಂದು ಹೋಗಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕೋವಿಡ್ ಕಾರಣದಿಂದಾಗಿ 3 ವರ್ಷಗಳಿಂದ ಜಾತ್ರೆ ನಡೆಸಲಾಗಿರಲಿಲ್ಲ. ಈ ಬಾರಿ ಜಿಲ್ಲೆಯ ಐದೂ ತಾಲ್ಲೂಕಿನ 3 ರಿಂದ 16 ವರ್ಷದ ವಿಶೇಷಚೇತನ ಮಕ್ಕಳಿಗೆ ಜಾತ್ರೆ ಆಯೋಜಿಸಲಾಗಿದೆ. ಸುವಾರು 650ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ರೋಟರಿ ಸಿಲ್ಕ್ ಸಿಟಿ ಮಾಜಿ ಅಧ್ಯಕ್ಷ ಡಿ.ಎಸ್.ಗಿರೀಶ್ ಮಾತನಾಡಿ, ಜಾತ್ರೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಆಟದ ಸಾಮಗ್ರಿ, ತಂಪು ಪಾನೀಯ, ಕಬ್ಬಿನ ಹಾಲು, ಕುಡಿಯುವ ನೀರು ಹಾಗೂ ತಿಂಡಿ-ತಿನಿಸುಗಳ ವ್ಯವಸ್ಥೆ ಮಾಡಲಾಗುವುದು ಎಂದರು.
ತಾಲ್ಲೂಕು ಸಂಯೋಜಕಿ ಕೋಮಲ, ಮಾರ್ಗದರ್ಶಕರಾದ ಕವಿತಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.





