Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಯುವಕರನ್ನು ಮದ್ಯದ ನಶೆಯತ್ತ ಸೆಳೆಯಲು ಮುಂದಾದ ಸರ್ಕಾರ

ಮದ್ಯ ಖರೀದಿಗೆ ಇದ್ದ ವಯೋಮಿತಿ 18 ವರ್ಷಕ್ಕೆ ಇಳಿಕೆ ಪ್ರಸ್ತಾಪ

ಬಿ.ಎನ್.ಧನಂಜಯಗೌಡ

ಮೈಸೂರು: ಯುವ ಜನತೆಯನ್ನು ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠವಾಗಿಸಬೇಕಾದ ಸರ್ಕಾರ, ಅವರನ್ನು ನಶೆಯತ್ತ ದೂಡಲು ನಿರ್ಧರಿಸಿದೆ.

21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧವನ್ನು ಸಡಿಲಿಸಿ, ಈ ವಯಸ್ಸನ್ನು 18ಕ್ಕೆ ಇಳಿಸಲು ಸರ್ಕಾರ ಕರ್ನಾಟಕ ಅಬಕಾರಿ ಪರವಾನಗಿಗಳು (ಸಾಮಾನ್ಯ ಷರತ್ತುಗಳು) ನಿಯಮಗಳು-1967ಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ.

ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆಯು ಸಿದ್ಧಪಡಿಸಿರುವ ಕರಡು ಪ್ರತಿಯನ್ನು ಜನವರಿ 9ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಕರ್ನಾಟಕ ಅಬಕಾರಿ ಪರವಾನಗಿಗಳು (ಸಾಮಾನ್ಯ ಷರತ್ತುಗಳು) ನಿಯಮಗಳು-1967ರ ಸೆಕ್ಷನ್ 10 (1) (ಇ)ರಡಿ ಮದ್ಯ ಖರೀದಿದಾರನ ವಯಸ್ಸಿಗೆ ವಿಧಿಸಿದ್ದ ನಿರ್ಬಂಧವನ್ನು ಸಡಿಲಿಸುವ ಉಲ್ಲೇಖ ತಿದ್ದುಪಡಿ ಕರಡಿನಲ್ಲಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸೆಕ್ಷನ್ 10 (1) (ಇ)ನಲ್ಲಿ ಹೇಳಲಾಗಿತ್ತು. ಅದನ್ನು ಬದಲಿಸಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯಮಾರಾಟ ಮಾಡುವಂತಿಲ್ಲ ಎಂಬುದನ್ನು ಸೇರಿಸುವ ಪ್ರಸ್ತಾವವಿದೆ ಎನ್ನಲಾಗಿದೆ.

ನಿರ್ಬಂಧ ಪಾಲನೆಯಾಗುತ್ತಿಲ್ಲ : 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಇರುವಾಗಲೇ ಇದಕ್ಕೂ ಕಡಿಮೆ ವಯಸ್ಸಿನ ಯುವಕರು ಮದ್ಯ ಖರೀದಿಸಿ ಸೇವಿಸುತ್ತಿದ್ದರು. ಆದರೆ, ಈಗ ಸರ್ಕಾರವೇ ವಯೋಮಿತಿಯನ್ನು ಕಡಿಮೆ ಮಾಡಿ, ಕುಡಿಯಲು ಪ್ರೋತ್ಸಾಹಿಸಲು ಮಂದಾಗಿದೆ.

ನಶೆಯುಕ್ತ ರಾಜ್ಯ ಮಾಡಲು ಮುಂದಾದ ಸರ್ಕಾರ

ಇಂತಹ ನಿಮಯಗಳು ಕಾನೂನು ಪುಸ್ತಕಗಳಲ್ಲಿ ಇರುತ್ತವೆಯೇ ವಿನಾ ಅವುಗಳು ಪಾಲನೆಯಾಗುವುದು ಕಡಿಮೆ. ಅಲ್ಲದೇ, ನಿಯಮಗಳಿಗೆ ಅನುಗುಣವಾಗಿಯೂ ಯಾವುದೇ ಮದ್ಯ ಮಾರಾಟ ಅಂಗಡಿಯ ವ್ಯಾಪಾರಿಗಳು ನಡೆದುಕೊಳ್ಳುವುದೂ ಇಲ್ಲ. ಮದ್ಯ ಸೇವನೆಗೆ ಕಡಿವಾಣ ಹಾಕಬೇಕಾದ ಹೊಣೆಗಾರಿಕೆ ಇರುವ ಸರ್ಕಾರ ಈಗ ರಾಜ್ಯವನ್ನು ನಶೆಯುಕ್ತ ಮಾಡಲು ಮುಂದಾಗಿದೆ.


ಮದ್ಯಸೇವನೆಯಿಂದ ಈಗಾಗಲೇ ದಿನನಿತ್ಯ ಸಾಕಷ್ಟು ಕುಟುಂಬಗಳು ಹಾಳಾಗುತ್ತಿವೆ. ಹೀಗಿರುವಾಗ ಇದನ್ನು ನಿಯಂತ್ರಿಸಬೇಕಾದ ಸರ್ಕಾರ, ಯುವ ಜನರು ಕುಡುಕರಾಗಿ ಎಂದು ಪ್ರೋತ್ಸಾಹಿಸಿ ಈ ನಿರ್ಬಂಧವನ್ನು ಸಡಿಸಲು ಮುಂದಾಗಿದೆ. ಇದು ಆಗಬಾರದು.

ಡಾ.ಬಿ.ಟಿ.ರಘು, ಸಹಾಯಕ ಪ್ರಾಧ್ಯಾಪಕರು

—————–

ಜವಾಬ್ದಾರಿ ಕುಡಿತಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ಬೇಜವಾಬ್ದಾರಿ ಕುಡಿತಕ್ಕೆ ನಮ್ಮ ವಿರೋಧ ಯಾವಾಗಲೂ ಇದೆ. ಆದರೆ, ಈಗ ಮದ್ಯಖರೀದಿಗೆ ೨೧ ವರ್ಷದಿಂದ ೧೮ ವರ್ಷ ಮಾಡಲು ಹೊರಟಿರುವುದು ಖಂಡನೀಯ. ಇದರ ಬಗ್ಗೆ ಜನರಿಗೆ ಅರಿವು ಬರಬೇಕು. ಅವರೇ ಹೋರಾಟಕ್ಕೆ ಸ್ವಯಂಪ್ರೇರಣೆಯಿಂದ ಮುಂದಾಗಬೇಕು.

– ಪ್ರೊ.ಇ.ರತಿರಾವ್, ಮಹಿಳಾ ಹೋರಾಟಗಾರ್ತಿ

————————–

ಯುವ ಸಮಾಜವನ್ನು ಸಶಕ್ತಗೊಳಿಸಬೇಕಾದ ಸರ್ಕಾರ. ಈ ರೀತಿ ಕಾನೂನು ತಿದ್ದುಪಡಿ ಮಾಡಿ ಕರ್ನಾಟಕವನ್ನು ಕುಡುಕರ ರಾಜ್ಯವನ್ನಾಗಿ ಮಾಡಲು ಮುಂದಾಗಿದೆ. ನಶೆ ಮುಕ್ತ ಭಾರತಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಯುವ ಸಮೂಹವನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕು.

– ಪ್ರಜ್ಞಾ ಕಶ್ಯಪ್, ಕಾನೂನು ವಿದ್ಯಾರ್ಥಿನಿ.

———————————

ಈಗಾಗಲೇ ಪಿಯುಸಿ ವಿದ್ಯಾರ್ಥಿಗಳೇ ರಾಜರೋಷವಾಗಿ ಕುಡಿಯುತ್ತಿದ್ದಾರೆ. ಸರ್ಕಾರ ಈ ರೀತಿಯಲ್ಲಿ ಕಾನೂನಿಗೆ ತಿದ್ದುಪಡಿ ತರಲು ಮುಂದಾಗಿ ಮತ್ತಷ್ಟು ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳನ್ನು ಕುಡಿಯಲು ಉತ್ತೇಜಿಸಿದೆ.

– ಎಚ್.ಎಸ್.ಶಶಾಂಕ್, ವಿದ್ಯಾರ್ಥಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!