ಬೆಂಗಳೂರು: ಬಹು ಚರ್ಚಿತ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಈ ಬಾರಿಯ ವಿಧಾನಸಭಾ ಚುನಾವಣೆಗೂ ಮುನ್ನ ಉದ್ಘಾಟನೆಗೊಳ್ಳುವ ಸಾಧ್ಯತೆಯಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಕಾಮಗಾರಿ ಪರಿಶೀಲಿಸಲಿದ್ದಾರೆ.
ನಗರಕ್ಕೆ ಭೇಟಿ ನೀಡುತ್ತಿರುವ ಗಡ್ಕರಿ ಅವರು, ಎಕ್ಸ್ಪ್ರೆಸ್ ವೇ ವೈಮಾನಿಕ ವೀಕ್ಷಣೆ ಮಾಡಲಿದ್ದಾರೆ ರಾಮನಗರದ ಜೀಗನಹಳ್ಳಿ ಗ್ರಾಮದ ಬಳಿ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ. ಬಹುತೇಕ ಬಡಾವಣೆಗಳ ಕಾಮಗಾರಿ ಪೂರ್ಣಗೊಂಡಿದ್ದು, ವಿಧಾನಸಭೆ ಚುನಾವಣೆಗೂ ಮುನ್ನ ಔಪಚಾರಿಕವಾಗಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
4,473 ಕೋಟಿ ರೂ. ವೆಚ್ಚದಲ್ಲಿ 118 ಕಿ.ಮೀ. ಉದ್ದದ ವಿನ್ಯಾಸದ ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದು ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಸ್ತುತ ಪ್ರಯಾಣದ ಮೂರು ಗಂಟೆಗಳ ಸಮಯವನ್ನು90 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ. ಪ್ರಯಾಣದ ಸಮಯ, ಇಂಧನ ಮತ್ತು ಪರಿಸರವನ್ನು ಉಳಿಸುವುದರ ಜೊತೆಗೆ, ಇದು ಪ್ರವಾಸೋದ್ಯಮ ಮತ್ತು ಆರ್ಥಿಕತೆಯನ್ನು ಉತ್ತೇಜಿಸುತ್ತದೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ 262 ಕಿ.ಮೀ. ಒಳಗೊಂಡಿದ್ದು, ಬೆಂಗಳೂರು ಹೊರ ವರ್ತುಲ ರಸ್ತೆಯನ್ನು ಚೆನ್ನೈ ಹೊರ ವರ್ತುಲ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ. ಲಾಜಿಸ್ಟಿಕ್ ದಕ್ಷತೆಯನ್ನು ಹೆಚ್ಚಿಸುತ್ತಿದೆ. 14,872 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಈ ರಸ್ತೆ ಹಾದುಹೋಗುತ್ತದೆ.
ನಾಳೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಗಡ್ಕರಿ ವೈಮಾನಿಕ ಸಮೀಕ್ಷೆ





