ಚಾಮರಾಜನಗರ: ತಾಲ್ಲೂಕಿನ ಬಿಸಲ್ವಾಡಿಯ ಬಿಳಿ ಕಲ್ಲು ಕ್ವಾರಿಯಲ್ಲಿ ಸೋಮವಾರ ಕುಳಿ ತೆಗೆಯುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ರೇಣುಕಾದೇವಿ ಎಂಬುವವರಿಗೆ ಸೇರಿದ ಕ್ವಾರಿ ಇದಾಗಿದೆ. ಕುಮಾರ್ (28), ಶಿವರಾಜು (35) ಹಾಗೂ ಸಿದ್ದರಾಜು (27) ಮೃತಪಟ್ಟವರು. ಮೂವರೂ ಕಾಗಲವಾಡಿ ಮೋಳೆಯವರು. ಕಾರ್ಮಿಕರೊಬ್ಬರು ಕ್ವಾರಿಯ ಗೋಡೆಯ ಮಧ್ಯದಲ್ಲಿ ಕುಳಿ ಹೊಡೆಯುತ್ತಿದ್ದರು. ಇನ್ನಿಬ್ಬರು ಕೆಳಗಡೆ ನಿಂತು ಅವರಿಗೆ ನೆರವಾಗುತ್ತಿದ್ದರು. ಈ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು.





