Mysore
22
overcast clouds

Social Media

ಗುರುವಾರ, 18 ಜೂನ್ 2026
Light
Dark

ಮುರುಘಾ ಶ್ರೀ ಪ್ರಕರಣ: ಸಂತ್ರಸ್ತರಿಗೆ ಪುನರ್ವಸತಿ, ತಾಯಿಗೆ ಕೆಲಸ ನೀಡಲು ನಿರ್ಧರಿಸಿ ಪತ್ರ

ಮೈಸೂರು: ಮುರುಘ ಶ್ರೀ ಪ್ರಕರಣದ ಸಂತ್ರಸ್ತ ಬಾಲಕಿಯರ ತಾಯಿಗೆ ಕೆಲಸ ನೀಡಲು, ಸಂತ್ರಸ್ತ ಬಾಲಕಿಯರಿಗೆ ಪುನರ್ವಸತಿ ಕಲ್ಪಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಸಂತ್ರಸ್ತರಿಗೆ ಮನವರಿಕೆ ಮಾಡಿಕೊಡುವಂತೆ ಚಿತ್ರದುರ್ಗ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರು ಮೈಸೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಚಿತ್ರದುರ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಸಂತ್ರಸ್ತ ತಾಯಿಯ ಮನವಿಯನ್ನು ಪಡೆದು, ಅಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಶಿಫಾರಸ್ಸು ಮಾದ್ದಾರೆ. ಅವರ ಪತ್ರವನ್ನಾಧರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತ ಬಾಲಕಿಯರು ಮತ್ತು ಅವರ ತಾಯಿಗೆ ಮನವರಿಕೆ ಮಾಡಿಕೊಡುವಂತೆ ಮೈಸೂರಿನ ಮಕ್ಕಳ ಕಲ್ಯಾಣ ಸಮಿತಿಗೆ ಪತ್ರ ಬರೆದಿದ್ದಾರೆ.

ಬಾಲಕಿಯರಿಗೆ ಚಿತ್ರದುರ್ಗದ ವಸತಿ ಶಾಲೆಯಲ್ಲಿ ಶಿಕ್ಷಣ ನೀಡುವುದು ಮತ್ತು ಅವರ ತಾಯಿಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವ ಸಂಬಂಧ ತಿರ್ಮಾನಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ, ದೌರ್ಜನ್ಯಕ್ಕೊಳಗಾಗಿದ್ದ ಬಾಲಕಿಯರ ತಾಯಿಯ ಮೇಲೆ ಸರ್ಕಾರವು ಇದ್ದಕ್ಕಿದ್ದಂತೆ ಅನುಕಂಪ ಹಾಗೂ ಕರುಣೆಯನ್ನು ತೋರುತ್ತಿದೆ. ಮೇಲ್ನೋಟಕ್ಕೆ ಇದೊಂದು ಮಾನವೀಯ ನಡೆಯಂತೆ ಕಾಣುವುದು ಸಹಜ. ಸರ್ಕಾರ ಈ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಸತಿಯುಕ್ತ ಶಿಕ್ಷಣವೋ, ಹಾಸ್ಟೆಲ್ ವ್ಯವಸ್ಥೆಯೋ ಮಾಡಿದ್ದಾದಲ್ಲಿ, ಅವರ ಘನತೆಗೆ ಜೀವನಕ್ಕೆ ದಾರಿ ತೋರಲು ತಾಯಿಗೊಂದು ಉದ್ಯೋಗ ನೀಡುವುದಾದಲ್ಲಿ ಅದನ್ನು ಸ್ವಾಗತಿಸೋಣ. ಆದರೆ, ಷಡ್ಯಂತ್ರ, ಮೋಸ ಹಾಗೂ ಅಪ್ರಾಪ್ತರನ್ನು ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ರವಾನಿಸಿದ ಆರೋಪದಡಿ ಈ ತಾಯಿಯನ್ನು ೨ನೇ ಆರೋಪಿ ಮಾಡಿ, ಚಿತ್ರದುರ್ಗ ಜಿಲ್ಲಾ ಪೊಲೀಸರು ಒಂದು ಪ್ರಕರಣವನ್ನು ದಾಖಲಿಸಿದ್ದಾರೆ. ಹೀಗಿರುವಾಗ ಆರೋಪಿ ಎನಿಸಿಕೊಂಡಿರುವ ತಾಯಿಗೆ ಸಂತ್ರಸ್ತೆಗೆ ನೀಡಬಹುದಾದ ಅನುಕಂಪ ಆಧಾರಿತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಮುಂದೆ ಬಂದಿರುವುದು ಕಾನೂನು ತಿಳಿದವರ ಮನದಲ್ಲಿ ಸಂದೇಹ ಮೂಡಿಸದೇ ಇರದು. ಇದೊಂದು ಹುನ್ನಾರವಾಗಿದೆ. ಬಾಲಕಿಯರಿಗೆ ಪುನರ್ವಸತಿ ಕಲ್ಪಿಸುವುದಾದರೆ ಮತ್ತು ತಾಯಿಗೆ ಉದ್ಯೋಗ ನೀಡುವುದಾದರೆ, ಮೈಸೂರಿನಲ್ಲಿ ಕಲ್ಪಿಸಲಿ ಎಂದು ತಿಳಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!