Mysore
30
scattered clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಘಟ್ಟದ ಕೆಳಗೂ ಆನೆಗಳ ಹಾವಳಿ…

ಎತ್ತಿನಹೊಳೆ ಕಾಮಗಾರಿ ಬಳಿಕ ಚದುರಿಹೋದ ಆನೆಗಳು

ಮೈಸೂರು: ಹಳೇ ಮೈಸೂರು ಮತ್ತು ಮಲೆನಾಡು ಭಾಗದಲ್ಲಿ ದಾಂಧಲೆ ಎಬ್ಬಿಸುತ್ತಿದ್ದ ಆನೆಗಳು ಇದೀಗ ಘಟ್ಟದ ಕೆಳಗಿನ ಗ್ರಾಮಗಳಲ್ಲೂ ಹಾವಳಿ ಎಬ್ಬಿಸುತ್ತಿದ್ದು ತೋಟಗಳಿಗೆ ನುಗ್ಗಿ ಫಸಲು ನಾಶ ಮಾಡುತ್ತಿವೆ.

ಎತ್ತಿನ ಹೊಳೆ ಯೋಜನೆ ಕಾಮಗಾರಿ ಆರಂಭವಾದ ಬಳಿಕ ಸಕಲೇಶಪುರ ಭಾಗದ ವನ್ಯಮೃಗಗಳ ದಂಡು ಚದುರಿ ಹೋಗಿವೆ. ಒಂದಷ್ಟು ಆನೆಗಳು ಶನಿವಾರ ಸಂತೆ, ಆಲೂರು, ಮೂಡಿಗೆರೆ ಭಾಗಕ್ಕೆ, ಇನ್ನೊಂದಷ್ಟು ದಕ್ಷಿಣ ಕನ್ನಡ ಜಿಲ್ಲೆಯತ್ತ ವಲಸೆ ಹೋಗಿವೆ. ಎತ್ತಿನ ಹೊಳೆ ಯೋಜನೆಗೆ ಮುನ್ನ ದಕ್ಷಿಣಕನ್ನಡದ ಭಾಗದಲ್ಲಿ ಆನೆ ಹಾವಳಿ ಅಪರೂಪವಾಗಿತ್ತು.
ಈಗ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳಲ್ಲೂ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ.
ಶಿರಾಡಿ ಘಾಟ್ ರಸ್ತೆಯಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಆನೆಗಳು ಆಗಾಗ ರಸ್ತೆಗೆ ಬಂದು ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ.

ಕೆಲವೇ ದಿನಗಳ ಹಿಂದೆ ಕುಕ್ಕೆ ಸುಬ್ರ ಹ್ಮ ಣ್ಯ ಪರಿಸರದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿದ್ದವು. ಗುರುವಾರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಬಳಿ ಒಂಟಿ ಸಲಗವೊಂದು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಲ್ಲಿನ ಅಡ್ಡಹೊಳೆಯ ಪೆಟ್ರೋಲ್ ಪಂಪಿನ ಬಳಿ ಕಾಡಿನಿಂದ ಹೆದ್ದಾರಿಗೆ ಬಂದ ಗಂಡಾನೆ ಹೆದ್ದಾರಿಯನ್ನು ದಾಟಲೆತ್ನಿಸಿದೆ. ಆದರೆ ಹೆದ್ದಾರಿ ಅಗಲೀಕರಣಕ್ಕಾಗಿ ಅಗೆಯಲಾದ ಮಣ್ಣಿ ನಲ್ಲಿ ಹೂತು ಸಂಕಷ್ಟಕ್ಕೀಡಾಗಿದೆ. ಬಳಿಕ ಕಷ್ಟಪಟ್ಟು ಮೇಲೆದ್ದು ಸಾಗಿದ ಈ ಆನೆಯು ಅಯ್ಯಪ್ಪ ದೇವಾಲಯದ ಬಳಿಯಿಂದ ಪೇರಮಜಲು ರಸ್ತೆಯಲ್ಲಿ ಜನವಸತಿ ಪ್ರದೇಶದ ಮೂಲಕ ಹಾದು ಕಾಡು ಸೇರಿಕೊಂಡಿದೆ.

ರಸ್ತೆಯಲ್ಲಿಯೇ ಸಾಗಿದ ಆನೆಯು ಎಲ್ಲೂ ಆಕ್ರಮಣಕ್ಕೆ ಮುಂದಾಗದೇ ಕಾಡು ಸೇರಿದೆ. ಗ್ರಾಮಸ್ಥರು ಜೋರಾಗಿ ಬೊಬ್ಬೆ ಹೊಡೆದು ಸುತ್ತಮುತ್ತಲ ಎಚ್ಚರಿಸಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ.
ರಾತ್ರಿ ವೇಳೆ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಆನೆಗಳು ಈಗ ಹಾಡಹಗಲೇ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!