Mysore
29
overcast clouds

Social Media

ಶನಿವಾರ, 20 ಜೂನ್ 2026
Light
Dark

ಆಸ್ಪತ್ರೆಗೆ ನುಗ್ಗಿ ಬ್ಯಾಗ್ ಕಳವು ಮಾಡಿದ್ದ ಆರೋಪಿ ಬಂಧನ

ಮಡಿಕೇರಿ: ಜಿಲ್ಲಾಸ್ಪತ್ರೆಗೆ ನುಗ್ಗಿ ಕಲಿಕಾ ವೈದ್ಯ ವಿದ್ಯಾರ್ಥಿಗಳ ಬ್ಯಾಗ್, ಬ್ಯಾಗ್‌ನಲ್ಲಿದ್ದ ಹಣ ಹಾಗೂ ಹೊರಾವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಿದ್ದ ಚೋರನನ್ನು ಸೆರೆ ಹಿಡಿಯುವಲ್ಲಿ ಮಡಿಕೇರಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಮೂರ್ನಾಡು ಹೋಬಳಿಯ ಹೊದ್ದೂರು ಬಳಿಯ ಕಬಡಕೇರಿ ನಿವಾಸಿ ಎಂ.ಕೆ. ಹರೀಶ್ ಕುಮಾರ ಎಂಬವರ ಪುತ್ರ ಟಿಂಬರ್ ಕೆಲಸ ಮಾಡಿಕೊಂಡಿರುವ ಎಂ.ಹೆಚ್. ಶಿವಕುಮಾರ್ ಬಂಧಿತ ಆರೋಪಿ.
ನ.೨೭ ರಂದು ಸಂಜೆ ಆಸತ್ರೆಯ ಸಿಬ್ಬಂದಿಯಂತೆ ಒಳನುಗ್ಗಿದ್ದ ಚೋರನೊಬ್ಬ ಆಸ್ಪತ್ರೆಯಿಡೀ ಸುಳಿದಾಡಿ ಕರ್ತವ್ಯನಿರತ ವೈದ್ಯರ ಕೊಠಡಿಯೊಳಗೆ ನುಗ್ಗಿ ಕಲಿಕಾ ವೈದ್ಯ ವಿದ್ಯಾರ್ಥಿಗಳು, ಇರಿಸಿದ್ದ ಬ್ಯಾಗ್‌ಗಳನ್ನು ಜಾಲಾಡಿ ಅದರೊಳಗಡೆ ಇದ್ದ ಹಣವನ್ನು ದೋಚಿದ್ದ. ಜೊತೆಗೆ ಒಂದು ಬ್ಯಾಗ್‌ನೊಳಗಡೆ ದೊರೆತ ದ್ವಿಚಕ್ರ ವಾಹನದ ಕೀಯನ್ನು ಕಸಿದು ಆಸ್ಪತ್ರೆಯ ಹೊರಾವರಣದಲ್ಲಿ ನಿಲ್ಲಿಸಿದ್ದ ವಾಹನವನ್ನು ಕದ್ದೊಯ್ದು ಪರಾರಿಯಾಗಿದ್ದನು.
ಈ ಸಂಬಂಧ ಮೈಸೂರಿನ ವೈದ್ಯ ವಿದ್ಯಾರ್ಥಿನಿ ತರಿಕೆರೆಯ ಸೃಷ್ಟಿ ಎಂಬವರು ನೀಡಿದ್ದ ದೂರಿನ ಆಧಾರದಲ್ಲಿ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಕಳ್ಳನ ಸೆರೆಗೆ ಬಲೆ ಬೀಸಿದ್ದರು. ಈ ಬಗ್ಗೆ ತನಿಖೆ ಮುಂದುವರಿಸಿದ ಠಾಣಾಧಿಕಾರಿ ಶ್ರೀನಿವಾಸ್ ನೇತೃತ್ವದ ಪೊಲೀಸರ ತಂಡ ಕಳ್ಳನ ಜಾಡು ಹಿಡಿದು ವಿರಾಜಪೇಟೆಯಲ್ಲಿ ಸೆರೆ ಹಿಡಿಯುವಲ್ಲಿಯಶಸ್ವಿಯಾಗಿದ್ದಾರೆ.
ಬಂಧಿತನಿಂದ ದ್ವಿಚಕ್ರ ವಾಹನ ಹಾಗೂ ಬ್ಯಾಗ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದೆ. ಕಳವು ಮಾಡಿದ್ದ ವಾಹನಕ್ಕೆ ಪೂಜೆ ಮಾಡಿಸಿದ್ದ ಆರೋಪಿ, ಹೂವು ಹಾಗೂ ರಿಬ್ಬನ್ ಅಂಟಿಸಿ ಸಿಂಗಾರ ಮಾಡಿ ತಾನೇ ಖರೀದಿಸಿದ ವಾಹನವೆಂದು ಜನರೆದುರು ಹೇಳಿಕೊಂಡು ಓಡಾಡುತ್ತಿದ್ದ. ಆದರೆ ಪೊಲೀಸರ ಚಾಣಾಕ್ಷತನದಿಂದಾಗಿ ೧೫ ದಿನಗಳ ಒಳಗಡೆ ಆರೋಪಿ ಸೆರೆಮನೆ ಸೇರುವಂತಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!