Mysore
25
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಆನ್ ಲೈನ್‌ನಲ್ಲಿ ಚಲನಚಿತ್ರ ಟಿಕೆಟ್ ಮಾರಾಟ: ಸಿನಿಪ್ರಿಯರಲ್ಲಿ ಅಸಮಾಧಾನ

 

-ಕೆ.ಬಿ. ಶಂಷುದ್ದೀನ್

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಚಿತ್ರಮಂದಿರಗಳ ಕೊರತೆಯ ನಡುವೆ ಇದೀಗ ಆನ್‌ಲೈನ್ ಟಿಕೆಟ್ ಮಾರಾಟ ಸಿನಿಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಚಿತ್ರಮಂದಿರಗಳಲ್ಲಿ ನಿಯಮ ಪಾಲಿಸದೆ ಎಲ್ಲಾ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿರುವುದರಿಂದ ಬ್ಲಾಕ್‌ನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡಬೇಕಾದ ಅನಿವಾರ್ಯತೆ ಎದುರಾಗಿದೆ.

ಇಂತಿಷ್ಟೇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಉಳಿದ ಟಿಕೆಟ್‌ಗಳನ್ನು ಚಿತ್ರಮಂದಿರದ ಕೌಂಟರ್‌ಗಳಲ್ಲಿ ಮಾರಾಟ ಮಾಡಬೇಕೆಂಬ ನಿಯಮವಿದೆ. ಆದರೆ ಕುಶಾಲನಗರ ಚಿತ್ರಮಂದಿರದಲ್ಲಿ ಈ ನಿಯಮ ಪಾಲಿಸುತ್ತಿಲ್ಲ. ಕೆಲವರು ಆನ್‌ಲೈನ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚು ಟಿಕೆಟ್ ಖರೀದಿಸಿ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಜನಸಾಮಾನ್ಯರು ಚಿತ್ರ ವೀಕ್ಷಿಸಲು ಸಮಸ್ಯೆ ಉಂಟಾಗುತ್ತಿದ್ದು, ಕೌಂಟರ್‌ಗಳಲ್ಲಿ ಟಿಕೆಟ್ ನೀಡಲು ಕ್ರಮ ಕೈಗೊಳ್ಳುವಂತೆ ಸಿನಿಪ್ರಿಯರು ಆಗ್ರಹಿಸಿದ್ದಾರೆ.

ಕುಶಾಲನಗರದ ಏಕೈಕ ಸಿನಿವಾ ಮಂದಿರ ಕೂರ್ಗ್ ಸಿನಿಪ್ಲೆಕ್ಸ್ ನಲ್ಲಿ ಆನ್ ಲೈನ್ ಬುಕ್ಕಿಂಗ್ ಪ್ರಾರಂಭಿಸಿದಾಗಿನಿಂದ, ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ಹೆಚ್ಚಾಗಿದೆ. ಜನಸಾಮಾನ್ಯರು ಸೋಲ್ಡ್ ಔಟ್ ಬೋರ್ಡ್ ನೋಡಿಕೊಂಡು ಮನೆಗೆ ಹಿಂದಿರುಗುವಂತಾಗಿದೆ.

ಈ ಸಿನಿಮಾ ಮಂದಿರಕ್ಕೆ ಶುಂಠಿಕೊಪ್ಪ, ಮಡಿಕೇರಿ, ಸಿದ್ದಾಪುರ ಇನ್ನಿತರ ಕಡೆಗಳಿಂದ ಸಿನಿರಸಿಕರು ಆಗಮಿಸುತ್ತಾರೆ. ಆದರೆ ಕೌಂಟರ್‌ನಲ್ಲಿ ಟಿಕೆಟ್ ಸಿಗದೆ ಬ್ಲಾಕ್‌ನಲ್ಲಿ ಖರೀದಿಸಿ ಸಿನಿಮಾ ವೀಕ್ಷಿಸುವಂತಾಗಿದೆ.

ಈ ಸಮಸ್ಯೆಗಳಿಗೆ ಆನ್ ಲೈನ್ ಟಿಕೆಟ್ ದಂಧೆ ಕಾರಣ ಎಂದು ಸಿನಿವಾ ವೀಕ್ಷಕರು ಆರೋಪಿಸುತ್ತಾರೆ.

ಕುಶಾಲನಗರ ಸಿನಿಪ್ಲೆಕ್ಸ್ ಚಲನಚಿತ್ರ ಮಂದಿರದಲ್ಲಿ ತಿಂಡಿ ತಿನಿಸುಗಳನ್ನು ದುಬಾರಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

 ಕುಶಾಲನಗರದ ಥಿಯೇಟರ್‌ನಲ್ಲಿ ಯಾವಾಗಲೂ ಸೋಲ್ಡ್ ಔಟ್ ನಾಮಫಲಕ ಅಳವಡಿಸಿರುತ್ತಾರೆ. ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯಿಂದ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಹೆಚ್ಚಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಪೊಲೀಸರು ಕ್ರಮ ಕೈಗೊಳ್ಳಬೇಕು. ಥಿಯೇಟರ್ ಮಾಲೀಕರು ಆಫ್ ಲೈನ್‌ನಲ್ಲೂ ಟಿಕೆಟ್ ಸಿಗಲು ಅವಕಾಶ ಮಾಡಿಕೊಡಬೇಕು. – ಎಚ್.ಸಿ.ಜಯಪ್ರಕಾಶ್, ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ, ಜಿಲ್ಲಾಧ್ಯಕ್ಷರು.

ಕುಶಾಲನಗರದ ಸಿನಿಪ್ಲೆಕ್ಸ್ ಮುಂದೆ ಟ್ರಾಫಿಕ್ ಸಮಸ್ಯೆ ಇದ್ದೇ ಇರುತ್ತದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ವೀಕ್ಷಕರು ವಾಹನಗಳನ್ನು ರಸ್ತೆ ಬದಿ ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು ಹೆದ್ದಾರಿಯಾದ ಕಾರಣ ಅಪಘಾತ ಸಂಭವ ಸಾಧ್ಯತೆ ಹೆಚ್ಚಿದೆ. ವರ್ತಕರಿಗೂ ರಸ್ತೆ ಬದಿ ವಾಹನ ನಿಲ್ಲಿಸುತ್ತಿರುವುದಿಂದ ತೊಂದರೆಯಾಗುತ್ತಿದೆ. ಸಂಚಾರಿ ಪೊಲೀಸರು ಕ್ರಮಕೈಗೊಳ್ಳಬೇಕು. – ಜಕ್ರಿಯಾ, ಎಸ್.ಡಿ.ಪಿ.ಐ ಅಧ್ಯಕ್ಷ, ಕುಶಾಲನಗರ.

ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್ ನಲ್ಲಿ ರಾತ್ರಿ ವೇಳೆ ಕೆಲವೊಮ್ಮೆ ಹಳಸಿದ ತಿಂಡಿ ಪದಾರ್ಥ್ನ ಮಾರಾಟ ಮಾಡುತ್ತಾರೆ. ಬಿಲ್ ನೀಡುವುದಿಲ್ಲ. ಎಂ.ಆರ್.ಪಿ ಗಿಂತ ಹೆಚ್ಚು ಹಣ ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನಿಸುವುವವರು ಯಾರೂ ಇಲ್ಲದಂತಾಗಿದೆ. – ತೇಜ, ಕುಶಾಲನಗರ ನಿವಾಸಿ.

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!