Mysore
27
light rain

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಸರ್ಕಾರಿ ಅತಿಥಿಗೃಹ ಮುಂದೆ ಥಳುಕು, ಹಿಂದೆ ಉಳುಕು

ರಾಜ್ಯಪಾಲರು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು ವಾಸ್ತವ್ಯಹೂಡುವ ಸ್ಥಳ

ವರದಿ: ಶಂಕರ ಎಚ್.ಎಸ್.

ಮೈಸೂರು: ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಗಣ್ಯಾತಿಗಣ್ಯರು ವಾಸ್ತವ್ಯ ಹೂಡುವ ಬಂಗ್ಲೆ ಎಂದೇ ಕರೆಯಿಸಿಕೊಳ್ಳುವ ಸರ್ಕಾರಿ ಅತಿಥಿಗೃಹ(ಗವರ್ನಮೆಂಟ್ ಹೌಸ್) ನಿರ್ವಹಣೆ ಕಾಣದೆ ಕಟ್ಟಡದ ಅಂದ ಹದಗೆಡುವ ಜೊತೆಗೆ ಶಿಥಿಲವಾಗುವ ಆತಂಕ ಎದುರಾಗಿದೆ.

ಲೋಕೋಪಯೋಗಿ ಇಲಾಖೆಯ ಬದಲಿಗೆ ಡಿಪಿಎಆರ್ ಇಲಾಖೆಯ ಅಧೀನದಲ್ಲಿ ಕಟ್ಟಡ ಇದ್ದರೂ ಕಾಲಕಾಲಕ್ಕೆ ನಿರ್ವಹಣೆ, ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ಮಾಡದೆ ಹಾಗೆಯೇ ಬಿಟ್ಟಿದ್ದರಿಂದ ಕಟ್ಟಡದ ಒಂದು ಭಾಗ ಮೂಲ ಅಂದವನ್ನೇ ಕಳೆದುಕೊಂಡಿದೆ.

ರಾಜರ ಕಾಲದಲ್ಲಿ ದೇಶ-ವಿದೇಶಗಳ ಗಣ್ಯರು ಮೈಸೂರಿಗೆ ಆಗಮಿಸಿದಾಗ ಅವರ ವಾಸ್ತವ್ಯಕ್ಕಾಗಿ ಸರ್ಕಾರಿ ಅತಿಥಿಗೃಹವನ್ನು ನಿರ್ಮಾಣ ಮಾಡಲಾಗಿತ್ತು. ಅತಿಥಿಗೃಹದಲ್ಲಿ ಈ ಹಿಂದೆ ವೈಶಾರಾಯ್‌ಗಳು, ದಿವಾನರು, ಮಹಾರಾಜರು, ವಿದೇಶಿ ಅಧಿಕಾರಿಗಳು, ಗಣ್ಯರು ವಾಸ್ತವ್ಯ ಹೂಡಿದ್ದಾರೆ. ಈ ಕಟ್ಟಡ ಇವತ್ತಿಗೂ ಕೂಡ ತನ್ನ ಸೇವೆಯನ್ನು ಮುಂದುವರಿಸಿದೆ.

ಈ ಹಿಂದೆ ಈ ಅತಿಥಿ ಗೃಹವನ್ನು ‘ಪ್ರಭುತ್ವ ಭವನ’ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯ ನಂತರದಲ್ಲಿ ಈ ಕಟ್ಟಡದಲ್ಲಿ ರಾಜ್ಯಪಾಲರು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ, ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಲು ಶುರು ಮಾಡಿದ್ದರು. ಹಲವು ವರ್ಷಗಳಿಂದ ಮುಖ್ಯಮಂತ್ರಿಗಳು ನಗರಕ್ಕೆ ಬಂದಾಗ ವಾಸ್ತವ್ಯ ಹೂಡುತ್ತಿದ್ದರು. ಆದರೆ, ಈಗ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವ ಕಾರಣ ಅಧಿಕಾರಿಗಳು ನಿರ್ವಹಣೆಯಲ್ಲಿ ಬೇಕಾಬಿಟ್ಟಿ ತೋರಿದ್ದಾರೆ.

ಹಲವು ವಿಶೇಷತೆಗಳನ್ನು ಹೊಂದಿರುವ ಈ ಕಟ್ಟಡದ ಹೊರಭಾಗದ ಬಣ್ಣ ಮಾಸಿದೆ. ಗೋಡೆಗಳಲ್ಲಿ ಬಿರುಕು ಬಿಟ್ಟಿದೆ ಹಾಗೂ ಪಾಚಿ ಕಟ್ಟಿದೆ. ಅಲ್ಲದೆ, ಬಹಳಷ್ಟು ಭಾಗ ಗಾರೆ ಕಳಚಿ ಇಟ್ಟಿಗೆ ಕಾಣಿಸುತ್ತಿದೆ. ಪಾರಂಪರಿಕ ಶೈಲಿಯಲ್ಲಿರುವ ಕಂಬಗಳು ಹಾಳಾಗಿವೆ. ಕಿಟಕಿಗಳು ದುಸ್ಥಿಯಲ್ಲಿವೆ. ಗೋಡೆಗಳ ಮೇಲೆ ಗಿಡಗಳು ಬೆಳೆದು ಬಿರುಕನ್ನು ಹೆಚ್ಚು ಮಾಡುವಂತಿದೆ. ಕಟ್ಟಡದ ಹೊರ ಭಾಗದಲ್ಲಿ ಆವರಣದ ಅಂದ ಹೆಚ್ಚಿಸಲು ನಿರ್ಮಿಸಿರುವ ಸೆಲ್ಲಾರ್‌ಗಳು ಹಾಳಾಗಿದೆ.

ಸರ್ಕಾರಿ ಅತಿಥಿಗೃಹ ಕಟ್ಟಡವು ಟಸ್ಕನ್ ಡೋರಿಕ್ ಶೈಲಿಯಲ್ಲಿ ನಿರ್ಮಿಸಿದ ಭವ್ಯ ಬಂಗಲೆ. ದೊಡ್ಡ ದೊಡ್ಡ ಕಂಬಗಳು, ವಿಶಾಲ ಚಾವಣಿಗಳನ್ನು ಹೊಂದಿದೆ. ೧೮೦೫ರಲ್ಲಿ ನಿರ್ಮಾಣವಾಗಿರುವ ಈ ಕಟ್ಟಡಕ್ಕೆ ಈಗ ೨೧೮ ವರ್ಷ ತುಂಬಿರುವುದು ವಿಶೇಷವಾಗಿದೆ. ೧೭೯೯ರಲ್ಲಿ ನಿರ್ಮಾಣವಾದ ವೆಲಿಂಗ್‌ಟನ್ ಲಾಜ್ ಮೊದಲ ಕಟ್ಟಡವಾದರೆ, ೧೮೦೫ರಲ್ಲಿ ನಿರ್ಮಾಣವಾದ ೨ನೇ ಕಟ್ಟಡ ಅತಿಥಿಗೃಹ, ಅಂದಿನಿಂದ ಇಂದಿನವರೆಗೂ ಸೇವೆ ನೀಡುವ ಜನೋಪಯೋಗಿ ಕಟ್ಟಡವಾಗಿದೆ. ಇದನ್ನು ಸಂರಕ್ಷಿಸುವ ಹೊನೆಗಾರಿಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳದು.

ದಕ್ಷಿಣ ಭಾರತದಲ್ಲೇ ಕಂಬಗಳೆ ಇಲ್ಲದೆ ನಿರ್ಮಾಣವಾಗಿರುವ ದೊಡ್ಡ ವಿಶೇಷ ಭೋಜನಾಲಯ ಇರುವುದು ಈ ಅತಿಥಿ ಗೃಹದಲ್ಲಿ. ಮಳೆ ಬಂತೆಂದರೆ ಮೇಲ್ಚಾವಣಿ ಸೋರುತ್ತದೆ. ಇದರಿಂದ ಉಳಿದ ಗೋಡೆಗಳಿಗೂ ಹಾನಿಯಾಗಬಹುದು, ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚರ ವಹಿಸಬೇಕಿದೆ. ಹಾಗೆಯೇ ಪಾರಂಪರಿಕ ಕಟ್ಟಡದ ಮೇಲೆ ನೀರಿನ ಟ್ಯಾಂಕ್ ಇಡಬಾರದು ಇದು ಅವೈಜ್ಞಾನಿಕ ಅದನ್ನು ತೆರೆವುಗೊಳಿಸುವುದು ಒಳ್ಳೆಯದು. -ಈಚನೂರು ಕುಮಾರ್, ಪಾರಂಪರಿಕ ತಜ್ಞ

ಪಾರಂಪರಿಕ ಕಟ್ಟಡಗಳ ಮೇಲ್ಚಾವಣಿಯಲ್ಲಿ ಮಳೆ ನೀರು ನಿಂತು ಶಿಥಿಲವಾಗುತ್ತಿವೆ. ಹಾಗೆಯೇ ಗೋಡೆಗಳು ಬಿರುಕು ಬೀಳುತ್ತಿವೆ. ಬಿರುಕು ಬಿದ್ದ ಕಟ್ಟಡಗಳ ಬಗ್ಗೆ ಜನಪತ್ರಿನಿಧಿಗಳು ನಿರ್ಲಕ್ಷ್ಯ ಮಾಡಬಾರದು, ಪಾರಂಪರಿಕ ಕಟ್ಟಡಗಳ ಬಗ್ಗೆ ನುರಿತ ತಜ್ಞರಿಂದ ಅಧ್ಯಯನ ಮಾಡಿಸಿ ಅವುಗಳ ವಸ್ತುಸ್ಥಿತಿಯನ್ನು ಅರಿಯುವುದು ಅವಶ್ಯ, ಮೈಸೂರಿನ ಎಲ್ಲ ಪಾರಂಪರಿಕ ಕಟ್ಟಡಗಳನ್ನೂ ಸಂರಕ್ಷಣೆ ಮಾಡುವುದು ಅತ್ಯವಶ್ಯ. -ಕೆ.ಎಸ್.ರಾಯ್ಕರ್, ನಿವೃತ್ತ ಕೆಎಎಸ್ ಅಧಿಕಾರಿ, ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್ ಫೌಂಡೇಶನ್ ನಿರ್ದೇಶಕ.

  • ೨೦೦ ವರ್ಷಗಳನ್ನು ಪೂರೈಸಿದ ಕಟ್ಟಡ
  • ೧೮೦೫ರಲ್ಲಿ ಟಸ್ಕನ್ ಡೋರಿಕ್ ಶೈಲಿಯಲ್ಲಿ ನಿರ್ಮಿಸಿರುವ ಭವ್ಯ ಬಂಗಲೆ
  • ಹಿಂದೆ ವೈಶಾರಾಯ್‌ಗಳು, ದಿವಾನರು, ಮಹಾರಾಜರು, ವಿದೇಶಿ ಅಧಿಕಾರಿಗಳು, ಗಣ್ಯರು ವಾಸ್ತವ್ಯ ಹೂಡಿದ್ದಾರೆ
  •  ಹಿಂದೆ ಈ ಅತಿಥಿ ಗೃಹವನ್ನು ‘ಪ್ರಭುತ್ವ ಭವನ’ ಎಂದು ಕರೆಯಲಾಗುತ್ತಿತ್ತು
  • ರಾಜರ ಕಾಲದಲ್ಲಿ ದೇಶ-ವಿದೇಶಗಳ ಗಣ್ಯರು ಮೈಸೂರಿಗೆ ಆಗಮಿಸಿದಾಗ ಅವರ ವಾಸ್ತವ್ಯಕ್ಕಾಗಿ ಇದನ್ನು ನಿರ್ಮಾಣ ಮಾಡಲಾಗಿತ್ತು

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ