ಮಡಿಕೇರಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಮಾಯಕ ನಿರುದ್ಯೋಗಿ ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಓರ್ವ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯ ಕಾಸರಗೋಡು ಮೂಲದ ಆರೋಪಿ ಎಂ.ಹೆಚ್. ಶ್ರೀನಾಥ್(೪೫) ಬಂಧಿತ ಆರೋಪಿ.
ಮಡಿಕೇರಿ ತಾಲ್ಲೂಕು ಸಂಪಾಜೆ ಹೋಬಳಿ ಬಾಲಂಬಿ ಗ್ರಾಮ, ಎಂ.ಚೆಂಬು ನಿವಾಸಿ ಜೇಮ್ಸ್ ಜೋಸೆಫ್(೨೪) ಎಂಬುವವರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ೪ ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದ ಶ್ರೀನಾಥ್, ಮುಂಗಡವಾಗಿ ೧.೫೦ ಲಕ್ಷ ರೂ.ಗಳನ್ನು ೨೦೨೧ ರಲ್ಲಿ ಪಡೆದಿದ್ದ ಎನ್ನಲಾಗಿದೆ. ಆದರೆ ಹಣ ನೀಡಿ ವರ್ಷ ತುಂಬುತ್ತಾ ಬಂದರೂ ವಿಸಾ ಮತ್ತು ಉದ್ಯೋಗ ಸಿಗದೆ ಇದ್ದಾಗ ಸಂಶಯಗೊಂಡ ಜೇಮ್ಸ್, ವಿಚಾರಿಸಿದರೂ ಸಮರ್ಪಕ ಮಾಹಿತಿ ನೀಡದ ಹಿನ್ನೆಲೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಶ್ರೀನಾಥ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ತನಿಖೆ ವೇಳೆ ೪೦ಕ್ಕೂ ಹೆಚ್ಚು ಯುವಕರಿಗೆ ಈತ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ವಂಚನೆಗೊಳಗಾದ ಕೆಲವರು ಪೊಲೀಸ್ ಠಾಣೆಗೆ ಬಂದು ಅಳಲು ತೋಡಿಕೊಂಡಿದ್ದಾರೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.



