Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಫೆಬ್ರವರಿಗೆ ದಶಪಥ ಸಂಚಾರ ಸರಾಗ

ಮೈಸೂರು/ಮಂಡ್ಯ/ಬೆಂಗಳೂರು: ಈಗಾಗಲೇ ಘೋಷಣೆಯಾದಂತೆ ದಸರಾ ಹೊತ್ತಿಗೆ ಬೆಂಗಳೂರು- ಮೈಸೂರು ದಶಪಥ ಜನ ಬಳಕೆಗೆ ಸಂಪೂರ್ಣ ಮುಕ್ತವಾಗಬೇಕಿತ್ತು. ಈಗಾಗಲೇ ಬೆಂಗಳೂರಿನಿಂದ ಮದ್ದೂರುವರೆಗೆ ಬಹುತೇಕ ಕೆಲಸ ಮುಗಿದು ಸಂಚಾರಕ್ಕೆ ಲಭ್ಯವಿದ್ದರೂ ಮದ್ದೂರಿನಿಂದ ಮೈಸೂರುವರೆಗಿನ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ಕೋವಿಡ್ ಸಹಿತ ಹಲವು ಕಾರಣಗಳಿಂದ ಇನ್ನೂ ಮುಗಿದಿಲ್ಲ. ಹೊಸ ವರ್ಷಕ್ಕೆ ಸಂಪೂರ್ಣವಾಗಬಹುದು ಎನ್ನುವ ಹೊಸ ಹೇಳಿಕೆಗಳು ಬಂದರೂ ಸದ್ಯದ ಪರಿಸ್ಥಿತಿ ನೀಡಿದರೆ ಹೊಸ ವರ್ಷದಲ್ಲೂ ಇದು ಸಂಪೂರ್ಣ ಸಿಗುವ ಸಾಧ್ಯತೆ ಕಡಿಮೆ. ಇದಕ್ಕಾಗಿ ಇನ್ನೂ ಮೂರ್ನಾಲ್ಕು ತಿಂಗಳು ಕಾಯಲೇಬೇಕು.

ಇನ್ನೂ ಏನೇನು ಕೆಲಸವಾಗಬೇಕು: ೨೦೧೯ರಲ್ಲಿ ಈ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ಹಲವಾರು ತೊಡಕುಗಳನ್ನು ನಿವಾರಿಸಿಕೊಂಡು ನಿಧಾನವಾಗಿ ಪೂರ್ಣಗೊಳ್ಳುತ್ತಿದೆ. ಈ ರಸ್ತೆ ಸಂಚಾರಕ್ಕೆ ಮುಕ್ತವಾದರೆ, ಮೈಸೂರು- ಬೆಂಗಳೂರು ನಡುವೆ ಪ್ರಾಯಾಣದ ಸಮಯ ತೀರಾ ಕಡಿಮೆಯಾಗಲಿದೆ. ಪ್ರಸ್ತುತ ಈ ರಸ್ತೆಯಲ್ಲಿ ಉಭಯ ನಗರಗಳ ನಡುವೆ ೩ರಿಂದ ೪ ಗಂಟೆ ಅವಧಿ ಇದೆ. ನೂತನ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ದೊರೆತರೆ ಈ ಅವಧಿ ೭೫ರಿಂದ ೮೦ ನಿಮಿಷಗಳಿಗೆ ಇಳಿಕೆಯಾಗಲಿದೆ. ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಲೇ ಇದೆ. ಈ ಕಾಮಗಾರಿ ಆರಂಭವಾದಾಗ ತೆರವುಗೊಳಿಸಲಾದ ರಸ್ತೆಬದಿ ವ್ಯಾಪಾರಿಗಳ ಬದುಕು ಕೂಡ ಕುಂಟುತ್ತಿದೆ. ನವೆಂಬರ್ ಅಂತ್ಯಕ್ಕೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದ್ದು, ಡಿಸೆಂಬರ್ ವೇಳೆಗೆ ಮಂಡ್ಯ- ಶೀರಂಗಪಟ್ಟಣ ಬೈಪಾಸ್ ಕಾಮಗಾರಿ ಕೂಡ ಪೂರ್ಣಗೊಳ್ಳಲಿದ್ದು, ಹೊಸ ವರ್ಷದ ಹೊತ್ತಿಗೆ ದಶಪಥ ರಸ್ತೆ ಸಾರ್ವಜನಿಕ ಸೇವೆ ಮುಕ್ತವಾಗಬಹುದು ಎನ್ನುವ ಲೆಕ್ಕಾಚಾರವಿದೆ.

‘ ಮದ್ದೂರು,ಮಂಡ್ಯ ಬಳಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದೆ.ಅದನ್ನು ಮುಗಿಸಲು ಕಾಮಗಾರಿ ನಡೆಯುತ್ತಿರುವ ಕಾರಣ ಡಿಸೆಂಬರ್ ಎರಡನೇ ವಾರದೊಳಗೆ ಬೈಪಾಸ್ ಮೂಲಕ ಮೈಸೂರು-ಬೆಂಗಳೂರಿಗೆ ತೆರಳುವವರು ಸಂಚರಿಸಬಹುದಕ್ಕೆ ಯಾವ ಸಮಸ್ಯೆ ಇಲ್ಲ.
ಬೂದನೂರು, ಇಂಡುವಾಳು,ಹನಕೆರೆ ಬಳಿ ಸರ್ವಿಸ್ ಲೈನ್ ಕಾಮಗಾರಿ ನಡೆಯುವ ಜತೆಗೆ ಅಂಡರ್‌ಪಾಸ್, ಕನ್ವರ್ಟ್ ಮುಗಿದ ಬಳಿಕ ಅಲ್ಲಿಯೂ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಈ ಯೋಜನೆ ಜಾರಿಗೆ ಮುತುವರ್ಜಿ ವಹಿಸಿರುವ ಮೈಸೂರು-ಕೊಡಗು ಸಂಸದ ಆಂದೋಲನಕ್ಕೆ ತಿಳಿಸಿದರು.
ವ್ಯಾಪಾರ ಮಂಕು: ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಇತ್ಯಾದಿ ಪಟ್ಟಣ, ನಗರಗಳಲ್ಲಿ ಈ ರಸ್ತೆಯುದ್ದಕ್ಕೂ ಹಣ್ಣು, ತರಕಾರಿ, ಪೆಟ್ರೋಲ್, ಹೋಟೆಲ್ ಇತ್ಯಾದಿ ವ್ಯಾಪಾರ ಮಾಡುತ್ತಿದ್ದವರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಈ ರಸ್ತೆಯ ಕಾಮಗಾರಿ ಯಾವಾಗ ಮುಗಿದು ಪ್ರಾಣಕ್ಕೆ ಮುಕ್ತವಾಗುವುದೋ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ತಟ್ಟೆ ಇಡ್ಲಿ, ರೇಷ್ಮೆಗೆ ಪ್ರಸಿದ್ಧವಾಗಿರುವ ಬಿಡದಿ, ರಾಮನಗರ ಹೆದ್ದಾರಿ ಕಾಮಗಾರಿಯಿಂದ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಂತಾಗಿವೆ. ರಸ್ತೆ ಬದಿಯ ಎಳನೀರು, ಹಣ್ಣು ಇತ್ಯಾದಿ ವ್ಯಾಪಾರವೂ ಮಂಕಾಗಿದೆ.

ಈಗ ಬೆಂಗಳೂರು ದಾಟುತ್ತಿದ್ದಂತೆ ಬೈಪಾಸ್ ಪ್ರವೇಶ ಪಡೆಯುವುದರಿಂದ ವಾಹನಗಳು ಬಿಡದಿ ಪ್ರವೇಶಿಸುವುದಿಲ್ಲ. ಬಿಡದಿ ತಟ್ಟೆ ಇಡ್ಲಿ ತಿನ್ನಲೇಬೇಕೆಂದರೂ ಸರ್ವೀಸ್ ರಸ್ತೆಯಲ್ಲಿ ಸಂಚರಿಸಿ ಮತ್ತೇ ಹೆದ್ದಾರಿ ಪ್ರವೇಶ ಪಡೆಯಬೇಕು. ಹಾಗಾಗಿ ಪ್ರವಾಸಿಗರಿಲ್ಲದೆ ಎಲ್ಲ ಬಗೆಯ ವ್ಯಾಪಾರಗಳೂ ಕಳೆಗುಂದಿವೆ. ಮದ್ದೂರಿನಲ್ಲೂ ಇಂತಹದೇ ಸ್ಥಿತಿ ಎದುರಾಗಿದೆ.
ವಾರಾಂತ್ಯಗಳಲ್ಲಿ ರಾಮನಗರದ ರಾಮದೇವರ ಬೆಟ್ಟ, ರಣಹದ್ದು ವನ್ಯಜೀವಿಧಾಮ, ಕೆಂಗಲ್ ಆಂಜನೇಯಸ್ವಾಮಿ ದೇವಾಲಯ,, ಅಪ್ರಮೇಯ ಸ್ವಾಮಿ ದೇವಾಲಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದವು. ಆದರೆ ಈಗ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ.


ನಮ್ಮ ಬದುಕು ಹೋಯಿತು

ಎಕ್ಸ್‌ಪ್ರೆಸ್ ವೇ ಯಿಂದ ಶ್ರೀಮಂತರು ಸರಾಗವಾಗಿ ಪ್ರಯಾಣ ಮಾಡುತ್ತಾರೆ. ಆದರೆ ರಸ್ತೆ ಬದಿಯಲ್ಲಿ
ಬದುಕು ಕಟ್ಟಿಕೊಂಡಿದ್ದವರು ಹಾಳಾಗಿ ಹೋದರು. ಎಲ್ಲವನ್ನೂ ಮೈಸೂರಿಗೆ ತೆಗೆದುಕೊಂಡು ಹೋದರೆ ನಾವೇನು ಮಾಡೋದು. ಮೈಸೂರಿನ ಸಂಸದರು ನಮ್ಮ ಬದುಕು ಕಿತ್ತುಕೊಂಡಿದ್ದಾರೆ.

-ಶಶಿ, ಉದ್ಯಮಿ, ಬಿಡದಿ.


ತಿಂಗಳೊಳಗೆ ಬಹುತೇಕ ಮುಕ್ತ

ಮೈಸೂರು-ಬೆಂಗಳೂರುನಡುವೆ ನಡೆಯುತ್ತಿರುವ ದಶಪಥದ ಕಾಮಗಾರಿಯು ಶರವೇಗದಿಂದ ಸಾಗಿದ್ದು, ಮದ್ದೂರು,ಮಂಡ್ಯಬೈಪಾಸ್ ರಸ್ತೆ ಕಾಮಗಾರಿಯು ಡಿಸೆಂಬರ್ ಎರಡನೇ ವಾರದೊಳಗೆ ಮುಕ್ತಾಯವಾಗಿ ಮೈಸೂರಿಗೆ ನೇರವಾಗಿ ತಲುಪಬಹುದಾಗಿದೆ. ಡಿಸೆಂಬರ್ ಅಂತ್ಯದೊಳಗೆ ಶ್ರೀರಂಗಪಟ್ಟಣ ಬೈಪಾಸ್ ಮುಕ್ತಾಯವಾದ ಮೇಲೆ ಮದ್ದೂರಿನಿಂದ ಮೈಸೂರು ನಗರಕ್ಕೆ ನೇರ ಸಂಪರ್ಕ ಇರುತ್ತದೆ.

ಪ್ರತಾಪ್‌ಸಿಂಹ, ಸಂಸದ ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ