ಮೈಸೂರು: ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದ ವಿದ್ಯಾರಣ್ಯರು ಆದರ್ಶಪ್ರಾಯರು. ಅವರು ವಿಭೂತಿ ಪುರುಷರು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬಣ್ಣಿಸಿದರು.
ಹಿಮಾಲಯ ಪ್ರತಿಷ್ಠಾನವು ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರಣ್ಯರ ವ್ಯಕ್ತಿತ್ವ ಲೋಕೋತ್ತರವಾದುದು. ಧ್ರುವ ನಕ್ಷತ್ರದಂತೆ ಬೆಳಗಿದವರು. ಅವರ ಆದರ್ಶವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷ ಬಿ.ಆರ್.ನಟರಾಜ ಜೋಯಿಸ್ ಮಾತನಾಡಿ, ವಿದ್ಯಾರಣ್ಯರು ಒಳ್ಳೆಯ ನಾಡನ್ನು ಕಟ್ಟಿದ್ದಾರೆ. ನಾವು ಅದೇ ರೀತಿ ಉತ್ತಮ ಸಮಾಜವನ್ನು ಕಟ್ಟೋಣ, ಕೆಟ್ಟದ್ದನ್ನು ಮನೆಯಲ್ಲಿಯೇ ಬಿಡೋಣ ಎಂದು ಮನವಿ ,ಮಾಡಿದರು.
ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಕೆ.ಗುರುಪಾದ ಹೆಗಡೆ(ವಿದ್ವತ್ತು), ಆರ್.ವೆಂಕಟೇಶ್(ಕಲೆ), ಡಾ.ಗೀತಾ ಅವಧಾನಿ(ವೈದ್ಯಕೀಯ), ವಸಂತ ವೆಂಕಟೇಶ್(ಮುಕ್ತಕ ಸಾಹಿತ್ಯ), ಕೆ.ಲಕ್ಷ್ಮೀ(ಸಾಹಿತ್ಯ), ಅಂಶಿ ಪ್ರಸನ್ನಕುಮಾರ್(ಪತ್ರಿಕಾರಂಗ), ಡಾ.ಪಿ.ಎನ್.ಗಣೇಶ್ಕುಮಾರ್(ಯೋಗ), ಕೆ.ದಶರಥ(ಸಮಾಜ ಸೇವೆ) ಹಾಗೂ ಚಂದನ್ಗೌಡ(ಮಣ್ಣಿನ ಸೇವೆ) ಅವರಿಗೆ ‘ಆಚಾರ್ಯ ಶ್ರೀ ವಿದ್ಯಾರಣ್ಯ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಅರ್ಕಧಾಮದ ಸಂಸ್ಥಾಪಕ ಶ್ರೀನಿವಾಸ ಅರ್ಕ ಅವರು ಕಮಲಾ ರಾಜೇಶ್ ಅವರ ‘ಶ್ರೀನಿವಾಸ ಕಲ್ಯಾಣ’ ಕೃತಿ ಬಿಡುಗಡೆ ಮಾಡಿದರು. ಕೃತಿ ಕುರಿತು ರಾಜ್ಯ ಮುಕ್ತಕ ಕವಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಎಂ.ಮುತ್ತುಸ್ವಾಮಿ ಮಾತನಾಡಿದರು. ಸಮಾಜ ಸೇವಕ ಕೆ.ರಘುರಾಂ, ವಾಣಿ ವಿಲಾಸ ನೀರು ಸರಬರಾಜು ಕಾರ್ಯಗಾರದ ಕಾರ್ಯಪಾಲಕ ಇಂಜಿನಿಯರ್ ಡಿ. ಅಶ್ವಿನ್, ಕೆಎಸ್ಆರ್ಟಿಸಿ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಟಿ.ಬಸವರಾಜು, ಉದ್ಯಮಿ ಎಂ.ಆರ್.ರಾಹುಲ್ ಹಾಜರಿದ್ದರು. ಹಿವಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್.ಅನಂತ ಸ್ವಾಗತಿಸಿದರು. ಕಾರ್ಯದರ್ಶಿ ಉಮಾಶಂಕರ್ ಅಯ್ಯು ನಿರೂಪಿಸಿದರು. ಉಪಾಧ್ಯಕ್ಷ ಬಿ. ಉಮೇಶ್ ಮೊದಲಾದವರು ಇದ್ದರು. ತನಿಷಾ, ತ್ರಿಶಾಂಕ್ ಪ್ರಾರ್ಥಿಸಿದರು.





