ಸರಣಿ ಸಾವಿಗೆ ಕಾರಣವಾಯಿತು ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ
ಕೆ ಆರ್ ನಗರ :ಮೈಸೂರು ಜಿಲ್ಲೆ ತಿ ನರಸೀಪುರ ತಾಲ್ಲೂಕಿನ ನಿಲಸೋಗೆ ಗ್ರಾಮದಲ್ಲಿ ಮೂವರು ರೈತರು ವಿದ್ಯುತ್ ತಂತಿ ತುಳಿದು ಮೃತಪಟ್ಟ ಬೆನ್ನಲ್ಲೇ ಮನೆ ಮುಂದೆ ಮರಕ್ಕೆ ವಿದ್ಯುತ್ ಸ್ಪರ್ಶಗೊಂಡು ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಘಟನೆ ಹೆಬ್ಬಾಳು ಹೋಬಳಿ ಮಳಲಿ ಗ್ರಾಮದಲ್ಲಿ ಇಂದು ನಡೆದಿದೆ. ಮಳಲಿ ಗ್ರಾಮದ ಕಾಡೇಗೌಡರ ಮಗ ಮನೋಜ್ (16) ಮೃತ ದುರ್ದೈವಿ.
ಈತ ಮಾವತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ. ಬೆಳಗ್ಗೆ ಮನೆ ಮುಂದೆ ಇರುವ ನುಗ್ಗೆ ಮರದ ಬಳಿ ನಿಂತಿರುವಾಗ ಮರಕ್ಕೆ11ಕೆ.ವಿ. ವಿದ್ಯುತ್ ತಂತಿ ಸ್ಪರ್ಶಗೊಂಡು ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಕಾಡೇಗೌಡರ ಇಬ್ಬರು ಮಕ್ಕಳ ಪೈಕಿ ಈತ ಮೊದಲ ಮಗನಾಗಿದ್ದಾನೆ.
ನಿಲಸೋಗೆ ಗ್ರಾಮದಲ್ಲಿ ಮೂವರು ರೈತರು ವಿದ್ಯುತ್ ತಂತಿಯಿಂದ ಮೃತಪಟ್ಟ ಘಟನೆ ಮಾಸುವ ಮುನ್ನವೇ ಸೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಶಾಲಾ ಬಾಲಕನೊಬ್ಬ ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದರು.





