Mysore
25
overcast clouds

Social Media

ಭಾನುವಾರ, 14 ಜೂನ್ 2026
Light
Dark

ಆಂದೋಲನ ಓದುಗರ ಪತ್ರ : 03 ಗುರುವಾರ 2022

ಓದುಗರ ಪತ್ರ

ಕುಸಿತ…ಖುಷಿ..ತಾ..

ಕರುನಾಡಲ್ಲಿ
ಕನ್ನಡ
ಮಾತನಾಡುವವರ

ಸಂಖ್ಯೆ
ಶೇಕಡ ೬೪ಕ್ಕೆ ಕುಸಿತ!

(ಆಂದೋಲನ,ನ.೧)

ಅಕಟಕಟಾ

ಕನ್ನಡಕುಲಕೋಟಿಯೇ

ಕೇಳಲಾಗದೇ…

ಕೇಳುತಿಹೆನು ನಿನ್ನ…

ನುಡಿ ನುಡಿಯುತ

ಖುಷಿ ತಾ!!

-ಮ.ಗು.ಬಸವಣ್ಣ, ಜೆ ಎಸ್ ಎಸ್ ಸಂಸ್ಥೆ, ಸುತ್ತೂರು.


ಕರುನಾಡಿನ ದುರಂತ!

ಕೇಂದ್ರ ಸರ್ಕಾರದ ಪರೀಕ್ಷೆಗಳು ಕನ್ನಡದಲ್ಲೇ ಇರಬೇಕು, ಕರುನಾಡಲ್ಲಿ ಕನ್ನಡಿಗರಿಗೆ ಕೇಂದ್ರದ ಉದ್ಯೋಗಗಳು ದೊರೆಯಬೇಕು- ಹೀಗೆ ಕನ್ನಡ ನಾಡು ನುಡಿ, ನೆಲ, ಜಲದ ಸಂರಕ್ಷಣೆಯ ವಿಚಾರವಾಗಿ ಸಾಕಷ್ಟು ವರ್ಷಗಳಿಂದ ಕನ್ನಡಿಗರು ಕೇಂದ್ರ ಸರ್ಕಾರಕ್ಕೆ ಬೇಡಿಕೆಯನ್ನ ಇಡುತ್ತಲೇ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಸಹ ಯಾವುದೇ ಸರ್ಕಾರಗಳು ಈ ಬಗ್ಗೆ ದೃಢವಾದ ನಿಲುವು ತೆಗೆದುಕೊಳ್ಳದೆ ಕನ್ನಡಿಗರನ್ನ ಸದಾ ವಂಚಿಸುತ್ತಲೆ ಬಂದಿವೆ. ಚುನಾವಣೆ ಬಂದಾಗಷ್ಟೇ ಕನ್ನಡ ನಾಡು, ನುಡಿ, ಜಲ ಎಂದು ಬೊಬ್ಬೆ ಹಾಕುವ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರುಗಳು ಅಧಿಕಾರಕ್ಕೆ ಬರುತ್ತಲೇ ಅವೆಲ್ಲವನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಅದಕ್ಕೆ ನಿದರ್ಶನವೆಂಬಂತೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಬ್ಯಾಂಕಿಂಗ್ ಪರೀಕ್ಷೆ, ಎಸ್‌ಎಸ್‌ಸಿ ಪರೀಕ್ಷೆಗಳೆಲ್ಲ ಹಿಂದಿಯಲ್ಲಿ ನಡೆಯುತ್ತಿದ್ದು ಸಾಕಷ್ಟು ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಕರುನಾಡಲ್ಲಿ ಕನ್ನಡಿಗರು ಸಾರ್ವಭೌಮತೆಯನ್ನು ಕಳೆದು ಕೊಳ್ಳುತ್ತಿರುವುದು ದೊಡ್ಡ ದುರಂತವೆ ಸರಿ.

-ರಾಜೇಂದ್ರ ಅಪುರಾ. ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು.


ಶಾಸಕರು ನಮ್ಮವರಲ್ಲೊಬ್ಬರು!

ಮೈಸೂರು ನಗರಪಾಲಿಕೆಯ ಮಾಜಿ ಸದಸ್ಯ ಪ್ರದೀಪ್ ಅವರು ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ. ಮಾಜಿ ಸದಸ್ಯರು ತಿಳಿಸಿರುವಂತೆ ಶಾಸಕರು ಚುನಾವಣೆ ಗೆದ್ದ ನಂತರ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಶಾಸಕರ ಕಚೇರಿಯು ವಿದ್ಯಾರಣ್ಯಪುರಂನಲ್ಲಿದ್ದು, ದಿನದ ೨೪ಗಂಟೆಯೂ ಕಾರ್ಯನಿರ್ವಹಿಸುತ್ತಾರೆ. ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ಅವರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ನಮೋ ಉತ್ಸವ’ ಹೆಸರಿನಲ್ಲಿ ಆಚರಿಸಿದ್ದು, ಹಲವಾರು ದಿನಗಳ ತನಕ ಸರ್ಕಾರವೇ ಜನರ ಕಡೆಗೆ ಎಂಬಂತೆ ಇಡೀ ಮಂತ್ರಿ ಮಂಡಲವನ್ನೇ ನಮ್ಮ ಕ್ಷೇತ್ರಕ್ಕೆ ಕರೆಸಿದ್ದಾರೆ. ಆಸರೆ ಫೌಂಡೇಷನ್ ವತಿಯಿಂದ ಕ್ಷೇತ್ರದ ಪ್ರತಿ ನಾಗರಿಕರ ಮನೆ ಮನೆಗೆ ಅವರ ಹುಟ್ಟುಹಬ್ಬ- ವಿವಾಹ ವಾರ್ಷಿಕೋತ್ಸವ ಅಭಿನಂದನಾ ಗ್ರೀಟಿಂಗ್ ಮೂಲಕ ಶುಭಾಶಯ ಕೋರುತ್ತಿರುವುದು ಪ್ರತಿ ನಾಗರೀಕರಲ್ಲೂ ಹೆಚ್ಚು ಸಂತಸ ತಂದಿದೆ. ಶಾಸಕರು ನಮ್ಮ ಮನೆಯ ಒಬ್ಬ ಸದಸ್ಯರೆಂಬ ಭಾವನೆ ಇದೆ.

ಎಸ್.ವಿನೋದ ಕುಮಾರ್, ವಿದ್ಯಾರಣ್ಯಪುರಂ, ಮೈಸೂರು.


ಅಮಾನವೀಯತೆಯ ಪರಾಕಾಷ್ಠೆ

ಗುಜರಾತ್‌ನ ಮೊರ್ಬಿ ತೂಗುಸೇತುವೆ ಕುಸಿದ ದುರಂತದಲ್ಲಿ ೧೩೫ ಮಂದಿ ಮೃತಪಟ್ಟಿದ್ದಾರೆ. ನೂರಾರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತ ಸಂಭವಿಸಿದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯದಲ್ಲೇ ಇದ್ದರು. ದುರಂತದಲ್ಲಿ ಗಾಯಗೊಂಡವರನ್ನು ಅವರು ಭೇಟಿ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಈ ವೇಳೆ ಗುಜರಾತ್ ಸರ್ಕಾರವು ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಸುಣ್ಣ ಬಣ್ಣ ಬಳಿಯುವ ಅಮಾನವೀಯ ಕೆಲಸ ಮಾಡಿದೆ. ಪ್ರಧಾನಿಗಳನ್ನು ಮೆಚ್ಚಿಸಲು ಇಂತಹ ಕೆಲಸ ಮಾಡಿರುವುದು ಅಮಾನವೀಯತೆಯ ಪರಾಕಾಷ್ಠೆಯೇ ಹೌದು. ಸಂತ್ರಸ್ತ ಜನರನ್ನು ಮತ್ತಷ್ಟು ಘಾಸಿಗೊಳಿಸುವ ಇಂತಹ ನಡೆಗಳು ಅಕ್ಷಮ್ಯ. ಪ್ರಧಾನಿಗಳು ಇಂತಹ ತೋರಿಕೆಯ ಸ್ವಚ್ಛತೆಯನ್ನು ಬೆಂಬಲಿಸಬಾರದು. ವಸ್ತುಸ್ಥಿತಿಯನ್ನು ತಿಳಿದು ಅಗತ್ಯ ಕ್ರಮ ಕೈಗೊಳ್ಳಬೇಕು.

-ನಂದಕುಮಾರ್, ಸರಸ್ವತಿ ಪುರಂ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!