Mysore
21
overcast clouds

Social Media

ಗುರುವಾರ, 06 ಆಗಸ್ಟ್ 2026
Light
Dark

ನಿವೃತ್ತ ಯೋಧನ ಬೇಸಾಯ ಪ್ರೀತಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು ಬಳಿಯ ನಲ್ಲೂರಿನ ನಿವೃತ್ತ ಯೋಧ ಸೋಮೆಂಗಡ ಗಣೇಶ್ ತಿಮ್ಮಯ್ಯ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ತಿಮ್ಮಯ್ಯ ಉತ್ತಮ ಪ್ರಗತಿಪರ ಕೃಷಿಕರು. ಕೃಷಿ ವಿಜ್ಞಾನ ಕೇಂದ್ರದ ಜತೆ ನಿರಂತರ ಸಂಬಂಧ ಹೊಂದಿರುವ ತಿಮ್ಮಯ್ಯ ವೈಜ್ಞಾನಿಕ ಪದ್ಧತಿಯಲ್ಲಿ ಮಣ್ಣು ಪರೀಕ್ಷೆ ಮಾಡಿಸಿ, ಕೃಷಿ ಮಾಡುತ್ತಿದ್ದಾರೆ. ಕಾರ್ಮಿಕರ ಕೊರತೆ ಇರುವುದರಿಂದ ಕೃಷಿಗೆ ಯಂತ್ರಗಳ ಮೊರೆ ಹೋಗಿರುವ ಗಣೇಶ್ ತಿಮ್ಮಯ್ಯ, ಅದರಲ್ಲೂ ಲಾಭ ಗಳಿಸುತ್ತಿದ್ದಾರೆ.
ಇವರ ಶ್ರಮ ಹಾಗೂ ಕೃಷಿಯಲ್ಲಿ ಗಳಿಸಿರುವ ಸಾಧನೆಯನ್ನು ಗಮನಿಸಿ ರಾಜ್ಯಮಟ್ಟದವರೆಗೂ ಹಲವು ಪ್ರಶಸ್ತಿಗಳು ಲಭಿಸಿವೆ. ರಾಜ್ಯ ಕೃಷಿ ಇಲಾಖೆ ಕಳೆದ ವರ್ಷ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಇವರನ್ನು ಸನ್ಮಾನಿಸಿದ್ದಾರೆ. ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಹಲವು ಪ್ರಶಸ್ತಿಗಳು ಲಭಸಿವೆ. ಕೃಷಿ ವಿಶ್ವವಿದ್ಯಾಲಯಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಜತೆಗೆ, ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ ಕೃಷಿಕರಿಗೆ ಹತ್ತು ಹಲವು ಮಾಹಿತಿಗಳನ್ನು ನೀಡಿದ್ದಾರೆ.
೩ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ೮ ನೇ ವಯಸ್ಸಿನಲ್ಲಿ ತಾಯಿಯನ್ನೂ ಕಳೆದುಕೊಂಡರು. ಆಗ ಮೂವರು ಅಕ್ಕಂದಿರು, ಒಬ್ಬ ತಂಗಿಯ ನಡುವೆ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ ತಿಮ್ಮಯ್ಯ ತಮ್ಮ ತಂದೆ ಮಾಡಿದ ಭೂಮಿ ಉಳಿಸಿಕೊಳ್ಳಲು ಪ್ರೌಢಶಾಲೆ ಅಧ್ಯಯನ ಮಾಡುತ್ತಿರುವಾಗಲೇ ಗದ್ದೆ ಕೆಲಸಕ್ಕೆ ಇಳಿದರು. ಶಾಲೆಗೆ ಹೋಗುವವರೆಗೆ ಗದ್ದೆ ಉಳುಮೆ ಮಾಡುವುದು ಅನಿವಾರ್ಯವಾಗಿತ್ತು. ೧೦ನೇ ತರಗತಿಯವರೆಗೆ ಓದಿ ಬಳಿಕ ಸೇನೆಗೆ ಹೋದರು. ೧೬ ವರ್ಷಗಳ ಕಾಲ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ಆನಂತರ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
ಭತ್ತದ ಜತೆಗೆ ಉತ್ತಮ ಕಾಫಿ ಬೆಳೆಗಾರರೂ ಆಗಿದ್ದಾರೆ. ಅಡಿಕೆ, ತೆಂಗು, ಬಾಳೆ, ಮಾವು, ಕಿತ್ತಳೆ, ಮೆಣಸು ಮೊದಲಾದ ಸಮಗ್ರ ಕೃಷಿ ಪದ್ಧತಿ ಕೈಗೊಂಡಿದ್ದಾರೆ. ಕೋಳಿ, ಜಾನುವಾರು, ಜೇನು ಸಾಕಣೆ ಮೊದಲಾದವುಗಳನ್ನೂ ಕೈಗೊಂಡಿದ್ದಾರೆ. ಒಂದು ಬೆಳೆ ಕೈಕೊಟ್ಟರೆ ಮತ್ತೊಂದು ಬೆಳೆ ಫಲ ನೀಡುತ್ತದೆ. ಯಾವಾಗಾಲೂ ಒಂದೇ ಬೆಳೆ ಹಾಕಬಾರದು. ಜತೆಗೆ ಕೃಷಿ ಬಗ್ಗೆ ಪ್ರೀತಿ ಇರಬೇಕು ಎಂಬುದು ತಿಮ್ಮಯ್ಯ ಅವರ ಮನದಾಳದ ಮಾತು. ತಿಮ್ಮಯ್ಯ ಅವರ ಈ ಎಲ್ಲ ಸಾಧನೆಗಳ ಹಿಂದೆ ಪತ್ನಿ ಸ್ವಾತಿ ಅವರ ನಿರಂತರ ನೆರವಿದೆ.


ಕೃಷಿಯನ್ನು ಪರಿಗಣಿಸಿದ್ದು ಸಂತೋಷ ತಂದಿದೆ. ಕೃಷಿಯನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ೩೦ ವರ್ಷಗಳಿಂದ ಮಾಡುತ್ತಿದ್ದೇನೆ. ಕೃಷಿಯ ಮಹತ್ವದ ಬಗ್ಗೆ ಎಲ್ಲಾ ಕಡೆ ಜಾಗೃತಿ ಉಂಟು ಮಾಡುತ್ತಿದ್ದೇನೆ. ಪ್ರಶಸ್ತಿ ಲಭಿಸಿದ್ದು ಸಮಧಾನ ತಂದಿದ್ದು, ಕೆಲಸಕ್ಕೆ ಸ್ಪೂರ್ತಿ ನೀಡಿದೆ.
ಸೋಮೆಂಗಡ ಗಣೇಶ್ ತಿಮ್ಮಯ್ಯ, ಪ್ರಗತಿಪರ ಕೃಷಿಕ, ಕೊಡಗು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!