ಎಡಿಟೋರಿಯಲ್

ನಗರಪಾಲಿಕೆಯಲ್ಲಿ ಪೂರ್ಣಾಧಿಕಾರ ಪಡೆದ ಬಿಜೆಪಿ ಹೆಗಲ ಮೇಲೆ ಪೂರ್ಣ ಜವಾಬ್ದಾರಿಯೂ ಇದೆ!

ರಾಜ್ಯ, ದೇಶದಲ್ಲಿ ಸ್ವಂತ ಬಲದಲ್ಲಿ ಅಧಿಕಾರ ಹಿಡಿದರೂ ಹಲ–ವಾರು ವರ್ಷಗಳಿಂದ ಮೈಸೂರು ಮಹಾನಗರ–ಪಾಲಿಕೆಯಲ್ಲಿ ಮಹಾಪೌರ ಸ್ಥಾನ ಹಿಡಿಯಲು ಸಾಧ್ಯವಾಗಿಲ್ಲ ಎನ್ನುವ ಕೊರಗನ್ನು ಕಳೆದ ಬಾರಿ ದೂರ ಮಾಡಿಕೊಂಡಿದ್ದ ಬಿಜೆಪಿಯು ಮೊಟ್ಟ ಮೊದಲ ಬಾರಿಗೆ ಮಹಾಪೌರ- ಉಪ ಮಹಾಪೌರಎರಡೂ ಸ್ಥಾನಗಳನ್ನು ಅಲಂಕರಿಸಿ ಪಾರುಪಥ್ಯ ಮೆರೆದಿದೆ. ಮುಂದಿನ ಚುನಾವಣೆ ದೃಷ್ಟಿ ಇಟ್ಟುಕೊಂಡು ಮೈತ್ರಿ ಮಾತುಕತೆಯೇ ಇಲ್ಲ ಎನ್ನುತ್ತಲೇ ಬಂದಿದ್ದ ಜಾ.ದಳ ನಾಯಕರು ಬಿಜೆಪಿ–ಯೊಂ–ದಿಗೆ ಆಂತರಿಕವಾಗಿ ಒಳ ಒಪ್ಪಂದ ಮಾಡಿಕೊಂಡು ಸ್ಥಾನಗಳನ್ನು ಹಂಚಿಕೆ ಮಾಡಿಕೊಂಡರೂ ತನ್ನ ಪಕ್ಷಕ್ಕೆ ಸಿಗಬೇಕಾದ ಉಪ ಮಹಾಪೌರ ಸ್ಥಾನವು ಸಿಗದೆ ತೀವ್ರ ನಿರಾಶೆಗೊಂಡಿದ್ದಾರೆ.

ಜಾ.ದಳದೊಂದಿಗೆ ಮೈತ್ರಿ ಮಾಡಿಕೊಂಡು ಐದು ವರ್ಷಗಳ ಕಾಲ ಉಪಮಹಾಪೌರ ಸ್ಥಾನ ಅಲಂಕರಿಸಿದ್ದ ಬಿಜೆಪಿ ಕಳೆದ ಬಾರಿ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದರಿಂದಾಗಿ ಮಹಾಪೌರ ಸ್ಥಾನ ಅಲಂಕರಿಸಿತ್ತು. ಆದರೆ, ಕಳೆದ ಬಾರಿ ಸಹಕಾರ ನೀಡಿದ್ದಕ್ಕಾಗಿ ಈ ಬಾರಿ ಮಹಾಪೌರ ಸ್ಥಾನವನ್ನು ಜಾ.ದಳಕ್ಕೆ ಬಿಟ್ಟುಕೊಡಬೇಕೆಂಬ ಷರತ್ತಿನೊಂದಿಗೆ ವಿಶ್ವಾಸವನ್ನಿಟ್ಟು ಕಾದಿದ್ದರು. ಅದೇ ರೀತಿ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಬದಲಿಸದೆ ಇರುವ ಜತೆಗೆ ಮಹಾಪೌರ ಸ್ಥಾನ ಕೊಟ್ಟರಷ್ಟೇ ಉಳಿದಿದ್ದು ಎನ್ನುವ ಸಂದೇಶ ರವಾನಿಸಿತ್ತು. ಸದ್ದಿಲ್ಲದೆ ಜಾ.ದಳದ ಒಬ್ಬರು ಸದಸ್ಯರು, ಬಿಎಸ್ಪಿಯ ಒಬ್ಬರು ಸದಸ್ಯರನ್ನು ತಮ್ಮತ್ತ ಸೆಳೆದುಕೊಂಡು ಮಹಾಪೌರ ಸ್ಥಾನ ಹಿಡಿಯಲು ಕಾಂಗ್ರೆಸ್ ನಡೆಸಿದ್ದ ತಂತ್ರ ಗೊತ್ತಾಗು–ತ್ತಿದ್ದಂತೆ ಜಾ.ದಳ ನಾಯಕರು ತನ್ನ ಅಧಿಕೃತ ಅಭ್ಯರ್ಥಿಯನ್ನೇ ಕಣದಿಂದ ಹಿಂದೆ ಸರಿಯುವಂತೆ ಮಾಡಿ ಬಿಜೆಪಿಗೆ ಮಹಾಪೌರ ಸ್ಥಾನ ದೊರೆಯುವಂತೆ ಮಾಡಿದರು.

ತನ್ನ ಸ್ವಯಂಕೃತ ಅಪರಾಧದಿಂದ ಉಪ ಮಹಾಪೌರ ಸ್ಥಾನವು ಸಿಗದೆ ಬಿಜೆಪಿ ಪಾಲಿಗೆ ಅದೃಷ್ಟ ರೇಖೆ ಒಲಿಯುವಂತೆ ಮಾಡಿದೆ. ತನ್ನನ್ನು ಬಿಟ್ಟು ಅಧಿಕಾರ ನಡೆಸಲು ಸಾಧ್ಯವಿಲ್ಲವೆಂದು ಬೀಗುತ್ತಿದ್ದ ಜಾ.ದಳದ ನಾಯಕರಿಗೆ ದೊಡ್ಡ ಮುಖಭಂಗವಾಗಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಜಾ.ದಳದ ಪಟ್ಟಿಗೆ ಮಣಿಯದೆ ಹೋಗಿದ್ದ ಬಿಜೆಪಿಯನ್ನೇ ಬೆಂಬಲಿಸಬೇಕಾದ ಅನಿವಾರ್ಯ ಕೊನೆಯಲ್ಲಿ ಸೃಷ್ಟಿಯಾಗಿದ್ದರಿಂದ ಆ ಪಕ್ಷದ ಪಾಲಿಕೆ ಸದಸ್ಯರು ನಾಯಕರ ವಿರುದ್ಧ ಅಸಮಾಧಾನ, ಸಿಟ್ಟು ಹೊರ ಹಾಕುವಂತೆ ಮಾಡಿದೆ. ಪಕ್ಷದ ನಾಯಕರು ಸರಿಯಾದ ಸಮಯಕ್ಕೆ ನಿರ್ಧಾರ ಕೈಗೊಳ್ಳದೆ ಮತ್ತು ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳದೆ ಇರುವುದರಿಂದ ಬಿಜೆಪಿಗೆ ಅಧಿಕಾರ ಹೋಗಿದೆ. ನಮ್ಮಿಂದ ಸಹಾಯ ಪಡೆದ ಬಿಜೆಪಿಯವರು ಬಹಿರಂಗವಾಗಿ ಮೈತ್ರಿಯೇ ಆಗಿಲ್ಲ ಎನ್ನುವ ಮಾತನ್ನು ಹೇಳಿದ್ದರಿಂದಾಗಿ ನಾವು ಅಸಹಾಯಕರಾಗಿ ಕೂರುವಂತಾಗಿದೆ ಎಂಬುದು ಪಾಲಿಕೆ ಸದಸ್ಯರ ಅಳಲಾಗಿದೆ.

ಬಿಜೆಪಿಗೆ ಮಹಾಪೌರ ಸ್ಥಾನ ಸಿಗದೆ ಇದ್ದರೂ ಉಪ ಮಹಾಪೌರ ಸ್ಥಾನ ದೊರೆತರೆ ಸಾಕು ಎನ್ನುವ ಮಟ್ಟಿಗೆ ಇದ್ದ ಕೆಲವು ನಾಯಕರು ಪಕ್ಷದ ಹಿರಿಯ ಸದಸ್ಯರೊಬ್ಬರು ಮಹಾಪೌರರಾಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ಬಿಜೆಪಿಯಲ್ಲಿಯೂ ಸದ್ದಿಲ್ಲದೆ ನಡೆದಿರುವ ಬೆಳವಣಿಗೆಗಳಿಂದಾಗಿ ಅನೇಕರು ಮೂಕಪ್ರೇಕ್ಷಕರಾದರೆ, ಜಾ.ದಳದಲ್ಲಿ ಆತ್ಮಾವಲೋಕನಕ್ಕೆ ದಾರಿಮಾಡಿಕೊಟ್ಟಿದೆ.

ಶಾಸಕರಾದ ಜಿ.ಟಿ.ದೇವೇಗೌಡ, ಮರಿತಿಬ್ಬೇಗೌಡ ಅವರಂತಹ ಅನುಭವಿ ರಾಜಕಾರಣಿಗಳು ಇದ್ದರೂ ಒಬ್ಬ ಅಭ್ಯರ್ಥಿಯ ನಾಮಪತ್ರ ಕ್ರಮಬದ್ಧವಾಗಿರುವಂತೆ ನೋಡಿಕೊಳ್ಳಲು ಸಾಧ್ಯವಾಗಲಿಲ್ಲವೇ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಈ ವಿಚಾರ ಅರಿಯದೆ ನಡೆದಿರುವುದೇ ಅಥವಾ ದುರುದ್ದೇಶಪೂರ್ವಕವಾಗಿ ನಡೆದಿದೆಯೇ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ಏಕೆಂದರೆ ಪಕ್ಷದಿಂದ ಗೆದ್ದಿದ್ದ ಸದಸ್ಯರನ್ನು ಬಿಟ್ಟು ಕಳೆದ ಬಾರಿ ಜಾ.ದಳಕ್ಕೆ ಸೇರಿದ ಸದಸ್ಯರೊಬ್ಬರನ್ನು ಮಹಾಪೌರ ಸ್ಥಾನದ ಅಭ್ಯರ್ಥಿಯನ್ನಾಗಿ ಮಾಡಿದ ನಾಯಕರ ನಡೆಯೇ ಈಗ ಹಲವರಲ್ಲಿ ಅತೃಪ್ತಿ ಮೂಡಿಸಿದ್ದು, ಪಕ್ಷದ ವರಿಷ್ಠರು ಯಾವ ರೀತಿ ಶಮನ ಮಾಡುತ್ತಾರೋ ಕಾದು ನೋಡಬೇಕಿದೆ.

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗಟ್ಟಿಮಾಡಿಕೊಳ್ಳುವ ಜತೆಗೆ ಜಾ.ದಳದ ಸಹವಾಸವೇ ಬೇಡ ಎಂಬ ನಿಲುವಿಗೆ ಬಂದಿರುವ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ವಿಫಲವಾದರೂ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಳ್ಳುವುದು ಖಚಿತವಾಗಿದೆ. ನಗರಪಾಲಿಕೆಯಲ್ಲಿ ನಡೆಯುವ ವಿದ್ಯಮಾನಗಳು, ಆಡಳಿತದ ವಿಚಾರದಲ್ಲಿ ಇಂಚಿಂಚೂ ಅರೆದು ಕುಡಿದಿರುವ ಕಾಂಗ್ರೆಸ್‌ನ ಹಿರಿಯ ಸದಸ್ಯರು ಬಿಜೆಪಿ ಹಾಗೂ ಜಾ.ದಳವನ್ನು ಕಟ್ಟಿ ಹಾಕುವ ಕೆಲಸ ಮಾಡಲಿದ್ದಾರೆ. ಹಾಗಾಗಿ, ಬಿಜೆಪಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ‘ಡಬಲ್ ಇಂಜಿನ್’ ಸರ್ಕಾರ ಇದೆ. ಈಗ ಮಹಾನಗರ ಪಾಲಿಕೆಯಲ್ಲೂ ಪೂರ್ಣಾಧಿಕಾರ ಹಿಡಿದಿರುವ ಬಿಜೆಪಿ ನಾಯಕರು ಮೈಸೂರನ್ನು ನಿಜವಾದ ಅರ್ಥದಲ್ಲಿ ನಂಬರ್ ೧ ಸ್ವಚ್ಛನಗರ ಮಾಡಬೇಕಿದೆ. ಸ್ವಚ್ಛತೆ ಆಡಳಿತದ ಮಟ್ಟಕ್ಕೂ ವಿಸ್ತರಿಸಬೇಕಿದೆ. ರಾಜ್ಯ ಸರ್ಕಾರಕ್ಕೆ ಅಂಟಿಕೊಂಡಿರುವ ಪರ್ಸೆಂಟೇಜ್ ಕಳಂಕದಿಂದ ಮಲೀನವಾಗ–ದಂತಹ ಆಡಳಿತ ನೀಡುವ ಜವಾಬ್ದ್ಧಾರಿ ಬಿಜೆಪಿ ನಾಯಕರ ಮೇಲಿದೆ.

ಮೇಯರ್ ಚುನಾವಣೆ ಮುಗಿದಿದೆ. ಉಳಿದ ಅವಧಿಗೆ ಎಲ್ಲ ಪಕ್ಷಗಳೂ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಭೇದ ಮರೆತು ಕೆಲಸ ಮಾಡಬೇಕಿದೆ. ಮೂರೂ ಪಕ್ಷಗಳ ಸದಸ್ಯರು ರಾಜಕೀಯವನ್ನು ಬದಿಗೊತ್ತಿ ನಗರವನ್ನು ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಶ್ರಮಿಸಬೇಕಿದೆ.

andolana

Recent Posts

ಹಿಟಾಚಿ ಮೇಲೆ ಬಿದ್ದ ಗೋಡೆ: ಚಾಲಕ ಪಾರು

ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…

12 hours ago

ಕೆಎಸ್‌ಓಯುಗೆ ನೂತನ ಕುಲಪತಿಯಾಗಿ ಡಾ.ಜ್ಞಾನ ಪ್ರಕಾಶ್ ನೇಮಕ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಶಿಕ್ಷಣತಜ್ಞ, ವಿಜ್ಞಾನಿ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.…

12 hours ago

ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ

ಕೃಷ್ಣಾ ಸಿದ್ದಾಪುರ ವಿರಾಜಪೇಟೆ: ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕೆಲಸಕ್ಕೆ ತೆರಳಿದ್ದ…

13 hours ago

ಮಾಜಿ ಸಿಎಂ ದೇವರಾಜ ಅರಸು ನೂತನ ಪ್ರತಿಮೆ ಅನಾವರಣ

ಮೈಸೂರು: ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಮಾಜಿ ಸಿಎಂ ದೇವರಾಜ ಅರಸು ಅವರ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.…

14 hours ago

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್: ಮೂವರು ಸಿಎಂಗಳಿಂದ ಲೋಕಾರ್ಪಣೆ

ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾಗಿರುವ ನೂತನ ಕ್ರೆಸ್ಟ್ ಗೇಟ್‌ಗಳನ್ನು ಮೂವರು ಮುಖ್ಯಮಂತ್ರಿಗಳು ಉದ್ಘಾಟಿಸಿದ ಅಪರೂಪದ ಸಮಾರಂಭಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.…

14 hours ago

ಮಾವು ಬೆಳೆಗಾರರ ನೆರವಿಗೆ ಬಂದ ಕೇಂದ್ರ ಸರ್ಕಾರ: ತೋತಾಪುರಿಯ ಒಂದು ಕ್ವಿಂಟಲ್‌ಗೆ ₹1,750 ನಿಗದಿ

ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿಗಳಾದ ಶಿವರಾಜ್ ಸಿಂಗ್…

15 hours ago