ಹಾಡು ಪಾಡು

ಮೊಬೈಲಾಸುರನನ್ನು ವಧಿಸುವ ದೇವತೆ ಎಲ್ಲಿರುವಳೋ

-ಸದಾನಂದ ಆರ್

‘‘ಬರದ ಛಾಯೆಯ ನಡುವೆ ೨೦೨೩ರ ದಸರಾ ಅಂತ್ಯ’’ ಅನ್ನೋ ಸುದ್ದಿ ಓದುತ್ತಿದ್ದವನನ್ನು ‘‘ಓ…..ದಸರಾದಲ್ಲಿ ರಾವಣಾಸುರನನ್ನೂ ಸುಡುತ್ತಾರೆ. ದೆಹಲಿ ಎಷ್ಟು ದೊಡ್ಡ ಬೊಂಬೆ ನಿರ್ಮಿಸಿದ್ದಾರೆ ನೋಡಿಲ್ಲ’’ ಕರೆದು ಇಂಗ್ಲಿಷ್ ಪತ್ರಿಕೆಯಲ್ಲಿದ್ದ ಚಿತ್ರವನ್ನು ತೋರಿಸಿದಳು ಮಗಳು. ‘‘ಹೌದು. ದಸರಾದಲ್ಲಿ ರಾವಣಾಸುರನ ದಹನ ಮಾಡುವ ಸಂಪ್ರದಾಯವೂ ಇದೆ’’ ಎಂದೆ. ಮತ್ತೇನು ಪ್ರಶ್ನೆ ಕೇಳದೆ ಸುಮ್ಮನಾದಳು. ನಾನು ಪತ್ರಿಕೆಯಿಂದ ತಲೆಯೆತ್ತಿ ನೋಡಿದರೆ ಅವಳಾಗಲೇ ತನ್ನ ಮೊಬೈಲ್‌ನಲ್ಲಿ ಬಿಜಿಯಾಗಿದ್ದಳು. ಅವಳ ಕೈಯಲ್ಲಿದ್ದ ಮೊಬೈಲ್ ನೋಡುತ್ತಿದ್ದಂತೆ ಮೊಬೈಲ್ ಫೋನಿನ ಚಟ ನಮ್ಮ ಕಾಲದ ಪ್ಯಾಂಡಮಿಕ್ ಅನ್ನುವ ವರದಿಯನ್ನು ಓದಿದ ನೆನಪಾಯಿತು. ಕೋವಿಡ್‌ನ ನಂತರ ಎಲ್ಲರಿಗೂ ಪ್ಯಾಂಡಮಿಕ್ ಅನ್ನೋ ಪದ ಪರಿಚಿತ ? ದೇಶಗಳ ಮಿತಿಯನ್ನು ದಾಟುವ ಸರ್ವವ್ಯಾಪಿಯಾದ ರೋಗ. ಪಿಯು ಹಂತದಲ್ಲಿ ಪಾಠ ಮಾಡುವ ಮೇಷ್ಟ್ರಾಗಿ ಮೊಬೈಲ್‌ನ ಹಾವಳಿಯ ಪ್ರಮಾಣವನ್ನು ಕಣ್ಣಾರೆ ಕಂಡಿರುವ ನನಗೆ ಮೊಬೈಲ್ ಚಟ ಪ್ಯಾಂಡಮಿಕ್ ಅನ್ನೋದನ್ನು ಒಪ್ಪುವುದು ಕಷ್ಟವೆನಿಲಿಲ್ಲ. ಜೊತೆಗೆ ನಮ್ಮನ್ನು ಕಾಡುತ್ತಿರುವ ರಕ್ಕಸ ಈ ಮೊಬೈಲಾಸುರ!

ಬಹಳ ಹಿಂದೆ ವೈದ್ಯಕೀಯ ಕ್ಷೇತ್ರ ಪ್ರಗತಿ ಸಾಧಿಸುವುದಕ್ಕೆ ಮೊದಲು, ಇಂತಹ ದೊಡ್ಡ ರೋಗಗಳು ಬಂದರೆ ಅದಕ್ಕೊಂದು ದೇವರ ಹೆಸರು ನೀಡಿ, ಪೂಜಿಸಿ, ಬಲಿ ನೀಡಿ ತಮ್ಮನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ಜನ ಮಾಡುತ್ತಿದ್ದರು. ಇದರ ಕುರಿತು ಅನೇಕ ಜನಪದ ಕಥೆಗಳು ಮತ್ತು ಪುರಾಣ ಕಥೆಗಳು ಇದ್ದಾವೆ. ಹಾಗೆ ನೋಡಿದರೆ, ದುಷ್ಟ ಶಕ್ತಿ ಮತ್ತು ದೈವಿ ಶಕ್ತಿಗಳ ನಡುವಿನ ಕದನವೇ ಈ ಕಥೆಗಳ ಹೂರಣ. ನವರಾತ್ರಿಯಲಿ ಪೂಜಿತರಾಗುವ ದುರ್ಗೆಯರಿರಲಿ, ಮೈಸೂರಿನ ಚಾಮುಂಡಿ ಮಾತೆಯಿರಲಿ, ದಹನವಾಗುವ ರಾವಣಾಸುರನಿರಲಿ-ಈ ಎಲ್ಲಾ ಕಥೆಗಳಲ್ಲೂ ದೈವೀ ಶಕ್ತಿ ಅಂತಿಮವಾಗಿ ಜಯಗಳಿಸುತ್ತದೆ. ಹೀಗೆ ದುಷ್ಟ ಶಕ್ತಿಯಿಂದ ಪೀಡಿತನಾಗಿದ್ದ ಮಾನವ ತನ್ನನ್ನು ರಕ್ಷಿಸಿದ ದೈವೀ ಶಕ್ತಿಯನ್ನು ಸ್ತುತಿಸಿ ಪೂಜಿಸುವ ಘಳಿಗೆಯೇ ದಸರಾ ? ನವರಾತ್ರಿ ಹಬ್ಬಗಳಾಗುತ್ತವೆ. ಜನರ ಜಾತ್ರೆಗಳಾಗುತ್ತವೆ.

‘‘ಅಯ್ಯೋ ಬಿಡಿ. ಎಂತಹ ದುಷ್ಟ ಶಕ್ತಿ ಅವತರಿಸಿದರೂ, ದೇವರಿದ್ದಾನೆ. ದೈವೀ ಶಕ್ತಿಯ ಮುಂದೆ ಯಾರ ಆಟವೂ ಸಾಗದು ಅಂದಿರಾ?’’ ಕಲಿಯುಗದ ರಕ್ಕಸನಾದ ಮೊಬೈಲಾಸುರನ ಮಾಯಾಜಾಲದಲ್ಲಿರುವವರಿಗೆ ‘‘ಅದುವೇ ನಮ್ಮನೆ ದೇವರು’’ ಎಂದಾಗಿದೆ. ‘‘ನಾಶ ಪಡಿಸು’’ ದೇವರೇ ಎನ್ನುವ ಮಾತಿರಲಿ, ‘‘ನಮ್ಮನ್ನು ಕಾಪಾಡು’’ ಎಂದು ಅಸಲಿ ದೇವರಿಗೆ ಮೊರೆಯಿಡುವ ವಿವೇಚನೆಯೇ ಇಲ್ಲವಾಗಿದೆ.
ಪುರಾಣ ಕಥೆಗಳಲ್ಲಿ ನಾವು ನೋಡುವಂತೆ, ಮೊಬೈಲಾಸುರ ವರವಾಗಿಯೇ ಮಾನವರ ಬದುಕಿನಲ್ಲಿ ಜಾಗಪಡೆದುಕೊಂಡಿದ್ದು. ಮನೆಯಿಂದ ಹೊರಬರದ ಸ್ಥಿತಿಯಲ್ಲಿ ಆಪ್ತರೊಂದಿಗೆ ಮಾತನಾಡಲು, ವೈದ್ಯರ ಪರೀಕ್ಷೆಗೆ ಒಳಪಡಲು, ಮಕ್ಕಳಿಗೆ ಪಾಠ ಕಲಿಸಲು ಮೊಬೈಲ್ ಆ ದೇವರೇ ನೀಡಿದ ವಿಶೇಷ ಅವಕಾಶವಾಗಿತ್ತು.

ಕೋವಿಡ್ ಮಾರಿ ಹೋಯಿತು. ಶಾಲೆಗಳು ತೆರೆದವು. ಆದರೆ ತರಗತಿಯ ಕಪ್ಪು/ಹಸಿರು ಹಲಗೆ ಮಕ್ಕಳಿಗೆ ಸಪ್ಪೆಯಾಯಿತು. ಆಕರ್ಷಕ ಚಿತ್ರಗಳನ್ನು ಉಣಬಡಿಸುವ ಮೊಬೈಲ್ ಸ್ಕ್ರೀನ್‌ನಲ್ಲಿ ಅವರು ಲೀನವಾಗ ಬಯಸಿದರು. ಮೇಷ್ಟ್ರು ಹಠಕ್ಕೆ ಬಿದ್ದರು. ಮೊಬೈಲ್‌ನ್ನು ಮುಟ್ಟುಗೋಲು ಹಾಕಿಕೊಂಡರು. ಮಾಯಾವಿಯ ಪೂರ್ಣ ಹಿಡಿತದಲ್ಲಿದ್ದ ಮಕ್ಕಳೇನು ಕಡಿಮೆಯೇ? ಅವರು ಹಠ ಹಿಡಿದರು. ಮೊಬೈಲ್ ಕೊಡದಿದ್ದರೆ, ಸಾಯುವೇ ಎಂದು ಬೆದರಿಸಿದರು. ಕೆಲವರು ಸತ್ತರು ಕೂಡ. ಮೇಷ್ಟ್ರಿಗೆ ಬಿಟ್ಟರೆ ಕಲಿಕೆಯಿಲ್ಲ-ಬಿಡಿದಿದ್ದರೆ ಮಕ್ಕಳ ಜೀವವಿಲ್ಲ ಅನ್ನೋ ಸ್ಥಿತಿ ಬಂತು. ಕೊನೆಗೆ ಪೋಷಕರು ಉಳಿಯಲಿ ಜೀವ ಅನ್ನೋ ನಿರ್ಧಾರಕ್ಕೂ ಬಂದರು. ಇಂದಲ್ಲ ನಾಳೆ ಎಲ್ಲವೂ ಸರಿಯಾಗಬಹುದೆಂಬೋ ಆಸೆ ಪೋಷಕರದ್ದು.
ಮುಂದೊಂದು ದಿನ ಎಲ್ಲವೂ ಸರಿ ಹೋಗುವುದೇ? ಖಂಡಿತ ಇಲ್ಲ. ಮೊಬೈಲಾಸುರನ ಬತ್ತಳಿಕೆಯಲ್ಲಿ ಹಲವು ಬಾಣಗಳಿವೆ. ಈ ಬತ್ತಳಿಕಯೂ ಮಹಾಭಾರತದ ಅಕ್ಷಯಪಾತ್ರೆಯಂತೆ. ಅಪರಿಮಿತ. ಡಿಜಿಟಲ್ ಅಮೃತವನ್ನು ಅನುದಿನವು ಹೀರುವ ಮೊಬೈಲಾಸುರನಿಗೆ ಸಾವು ಎನ್ನುವುದೇ ಇಲ್ಲ.

ಕಲಿಗಾಲದ ಅಸುರನಾದ ಮೊಬೈಲಾಸುರ ಎಲ್ಲರಲ್ಲೂ ಇರುವ ಪಶುತ್ವವನ್ನು ಉದ್ದೀಪನಗೊಳಿಸುವ ಮಾರ್ಗವನ್ನು ಕಂಡುಕೊಂಡಿದ್ದಾನೆ. ಮಾನವ ಸಾವಾಜಿಕ ಜೀವಿಯಾಗಿ ವಿಕಸನಗೊಂಡಾಗ ಅವನಲ್ಲಿದ್ದ ಪಶು ಸ್ವಭಾವ ಹಿನ್ನೆಲೆಗೆ ಸರಿದಿತ್ತು. ಕಳೆದ ನೂರು ವರ್ಷಗಳಿಂದ ಔಪಚಾರಿಕ ಶಿಕ್ಷಣದ ಮೂಲಕ ಮಾನವನನ್ನು ಮತ್ತಷ್ಟು ಸಂಘಜೀವಿಯಾಗಿಸುವ ಸಂಘಟಿತ ಪ್ರಯತ್ನ ನಿರಂತರ ಸಾಗಿತ್ತು. ಇದೆಲ್ಲವನ್ನೂ ಕೇವಲ ಐದಾರು ವರ್ಷಗಳಲ್ಲಿ ಮೊಬೈಲಾಸುರ ಮುರಿಯುವಲ್ಲಿ ಗೆಲವು ಸಾಧಿಸಿದ್ದಾನೆ. ಮಾನವರೀಗ ಜಾತಿ, ಧರ್ಮ, ಭಾಷೆ ಮುಂತಾದುವಗಳ ಹೆಸರಲ್ಲಿ ತಮ್ಮಲ್ಲಿರುವ ಮೃಗತ್ವವನ್ನು ಜಾಲತಾಣಗಳಲ್ಲಿ ರಾಚುತ್ತಿದ್ದಾರೆ. ಮಾನವ ತಾನೇ ದಾನವನಾಗುವ ಹಾದಿಯಲ್ಲಿದ್ದಾನೆ!

ಎಲ್ಲರೂ ಈಗ ಮೊಬೈಲಾಸುರನ ದಾಸರೇ. ಒಂದೆರಡು ಘಳಿಗೆ ಮೊಬೈಲ್ ಕಾಣದಿದ್ದರೆ ಇವರು ಬೆವರುತ್ತಾರೆ, ಬೆದರುತ್ತಾರೆ. ಮನೋ ವೈದ್ಯರು ಇದನ್ನು ಚಟ ಎನ್ನುತ್ತಾರೆ. ಇದೊಂದು ಸರ್ವವ್ಯಾಪಿಯಾಗಿರುವ ಚಟ ? ಚಟದ ಎಪಿಡಮಿಕ್ ಅನ್ನೋದು ಅವರ ನಿಲುವು. ಸತ್ಯವನ್ನು ಕಾಣುವ ಅರ್ಥವಾಡಿಕೊಳ್ಳುವ ಮಾನವರು ಬೇಕಷ್ಟೇ? ಮಾನವರೆಲ್ಲಾ ಮೊಬೈಲ್ ಹಿಡಿದು ಸೆಲ್ಛಿ ತೆಗೆದು, ಜಾಲತಾಣಗಳಲ್ಲಿ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ. ದೈವೀ ಶಕ್ತಿ ಮಾತೆಯರ ಅವತಾರದಲ್ಲಿ ದುಷ್ಟ ಶಕ್ತಿಯನ್ನು ನಾಶಪಡಿಸಿದ್ದನ್ನು ನವರಾತ್ರಿ ಎಂದೋ ದಸರವೆಂದೋ ವಿಜೃಂಭಣೆಯಿಂದ ಆಚರಿಸುವುದಷ್ಟೇ ಅಲ್ಲದೆ, ಆಚರಿಸಿದ್ದನ್ನು ವಾಟ್ಸ್‌ಅಪ್‌ನಲ್ಲಿ ಇನ್‌ಸ್ಟಾದಲ್ಲಿ ಇಲ್ಲವೇ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ವಾಡುವುದರಲ್ಲೇ ಮುಳುಗಿ ಹೋಗಿದೆ. ಈ ಮಾಯಾ ಲೋಕವನ್ನೇ ವಾಸ್ತವವೆಂದು ಗ್ರಹಿಸಿ ಸುಖವಾಗಿದ್ದಾರೆ. ಇವರನ್ನು ಬಂಧಿಸಿರುವ ಮಾಯಾ ಶಕ್ತಿಯಿಂದ ಬಿಡುಗಡೆಗೊಳಿಸುವವರು ಯಾರು?

andolanait

Recent Posts

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

1 hour ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

2 hours ago

ಓದುಗರ ಪತ್ರ: ಶಾಲಾ ಶಿಕ್ಷಣದಲ್ಲಿ ಕೃಷಿ ಬಗ್ಗೆ ಪಠ್ಯ ಅಳವಡಿಸಿ

ಮನುಷ್ಯನಿಗೆ ಅತ್ಯಗತ್ಯವಾಗಿರುವುದು ಆಹಾರ. ಇದಕ್ಕೆ ಕೃಷಿಯೇ ಮೂಲ. ರೈತನ ಪರಿಶ್ರಮದಿಂದ ಜನರು ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗಿದೆ. ಆಧುನಿಕ ಆವಿಷ್ಕಾರಗಳಿಂದ…

2 hours ago

ಸೌಹಾರ್ದ ಸಮಾಜಕ್ಕಾಗಿ ಮಕ್ಕಳಲ್ಲಿ ಭಾವೈಕ್ಯತೆ ಬಿತ್ತನೆ ಅತ್ಯಗತ್ಯ

ಟಿ.ಕೆ.ಹರೀಶ್ ತಂತ್ರಜ್ಞಾನ ಬಳಕೆ ಅತಿಯಾದರೆ ಮಕ್ಕಳಲ್ಲಿ ಸಹಾನುಭೂತಿ ಕ್ಷೀಣ  ಮಾನವೀಯತೆಯ ಮೂಲ ಮಂತ್ರವೇ ಸೌಹಾರ್ದತೆ. ಇದು ಕೇವಲ ಸಹಬಾಳ್ವೆಯಲ್ಲ, ಬದಲಿಗೆ…

2 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಸೋಲಿನಿಂದ ಸೊರಗಿದ ದೀದಿಯನ್ನು ಕೈಬಿಟ್ಟ ಆಪ್ತರು

ರಾಜಕಾರಣವೀಗ ಅಧಿಕಾರದಾಹಿಗಳ ಅಡ್ಡ ಆಗಿಹೋಗಿದೆ. ಅಧಿಕಾರವಿಲ್ಲದೆ ಯಾರಿಗೂ ಯಾವ ಸೈದ್ಧಾಂತಿಕ ರಾಜಕಾರಣವೂ ಬೇಡವಾಗಿದೆ. ಕಾಲ ಸರಿಯುತ್ತಿದ್ದಂತೆ ನಿತ್ಯದ ರಾಜಕಾರಣದ ಬದಲಾವಣೆಯೂ…

2 hours ago

ಇತಿಹಾಸದ ಪುಟಗಳಲ್ಲಿ ಜಿರಳೆಗಳು

ರೇಣುಕಾ ನಿಡುಗುಂದಿ ಯಾವುದೇ ಒಬ್ಬ ಸರ್ವಾಧಿಕಾರಿ ಅಥವಾ ಭ್ರಷ್ಟ ರಾಜಕಾರಣಿ ಜನರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಿ ಆಡಳಿತ ನಡೆಸುತ್ತಾನೆ.…

2 hours ago