post man
ಸೌಮ್ಯ ಕೋಠಿ, ಮೈಸೂರು
ಚಿಕ್ಕವರಿದ್ದಾಗ ಅಂಚೆ ಅಣ್ಣ ‘ಪೋಸ್ಟ್’ ಎಂದು ಕೂಗಿ ಕೊಡುತ್ತಿದ್ದ ಆ ಪತ್ರಗಳ ಮಾತು ನಿಜಕ್ಕೂ ಮಧುರ. ಪತ್ರದ ಆರಂಭದಲ್ಲಿ ತೀರ್ಥರೂಪು ಅಥವಾ ಮಾತೃ ಸ್ವರೂಪಿ ಎಂದು ಆರಂಭಿಸಿ ನಾನು ಕ್ಷೇಮ, ನೀನು ಕ್ಷೇಮವೆಂದು ಭಾವಿಸುವೆ ಎಂದು ಓದುವಾಗ ಪತ್ರ ಬರೆದವರು ಕ್ಷೇಮವಾಗಿದ್ದಾರೆ ಎಂದು ಒಂದು ಸಣ್ಣ ನಿಟ್ಟುಸಿರು.ಅದಕ್ಕಿಂತ ಹೆಚ್ಚಾಗಿ ಪತ್ರವನ್ನು ಕೈಯಲ್ಲಿ ಹಿಡಿದು ಯಾರಿಂದ ಬಂದಿತು ಎಂದು ನೋಡುವ ಆ ಖುಷಿಯ ಅನುಭವವನ್ನು ಸವಿದವರಿಗೇ ಗೊತ್ತು. ಪತ್ರವನ್ನು ಓದುವಾಗ ಸಿಗುತ್ತಿದ್ದ ಆನಂದ ಈಗ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡಿದರೂ ನಿಜಕ್ಕೂ ಸಿಗುವುದಿಲ್ಲ. ಬರೆಯುವ ವ್ಯಕ್ತಿಯ ಎಲ್ಲ ಭಾವನೆಯೂ ಆ ಪತ್ರದಲ್ಲಿ ತುಂಬಿರುತ್ತಿತ್ತು.
ಅದರಲ್ಲೂ ಮಗ ಬರೆದ ಪತ್ರವನ್ನು ತಾಯಿ ಕೈಯಲ್ಲಿ ಹಿಡಿದು ಓದುವಾಗ, ಅಮ್ಮ ನೀನು ಮಾಡುವ ಅಡುಗೆಯ ನೆನಪಾಯಿತು ಎಂಬ ಸಾಲನ್ನು ನೋಡಿದರೆ ಸಾಕು ಅಮ್ಮನ ಕಣ್ಣಂಚಲ್ಲಿ ನೀರು ತುಂಬುತ್ತಿತ್ತು. ತಂಗಿ ಓಡಿ ಬಂದು ನನ್ನ ಬಗ್ಗೆ ಅಣ್ಣ ಏನೂ ಬರೆದಿಲ್ವಾ, ನನ್ನ ಹೆಸರೇ ಬರೆದಿಲ್ಲ ಎಂದು ಗೋಳಾಡುವಾಗ ಕೊನೆಯ ಸಾಲಲ್ಲಿ ತಂಗಿಯ ಹೆಸರು, ತಮ್ಮನ ಹೆಸರು ನೋಡಿ ಅಣ್ಣ ನಮ್ಮನ್ನು ನೆನಪಿಸಿಕೊಂಡ ಎನ್ನುವ ಖುಷಿ ಈಗ ನಮಗೆ ಸಿಗದು. ಅಲ್ಲೇ ಕುಳಿತಿದ್ದ ಅಪ್ಪ, ಏನು ಮಗನ ಪತ್ರ ಬಂದಿದೆ. ಹಣ ಬೇಕಂತ ಏನು? ಅಂತ ದರ್ಪದಿಂದ ಮಾತನಾಡಿದರೂ, ಎಲ್ಲರೂ ಹೋದ ಮೇಲೆ ರಾತ್ರಿ ಮಲಗುವಾಗ ಮಗನ ಪತ್ರವನ್ನು ಓದುತ್ತ ಕಣ್ಣು ನೆನೆಯಲು ಅಮ್ಮ ಸುಮ್ಮನಿರಿ ಸಾಕು ಎಂದು ಬೈಯುತ್ತಿದ್ದಳು.
ಮೂರು ನಾಲ್ಕು ಪುಟದ ಕಾಗದದಲ್ಲಿ ಒಂದು ಚಿಕ್ಕ ಹೆಸರು ಬರೆದಿದ್ದೆ ಎಷ್ಟು ಖುಷಿ ಕೊಡುತ್ತಿತ್ತು ಅಂದರೆ ಆ ಹೆಸರಲ್ಲೇ ಎಲ್ಲ ಭಾವನೆಗಳೂ ಅಡಗಿರುತ್ತಿದ್ದವು. ಕಾಗದದಲ್ಲಿ ಹೆಸರು ಬರೆಯುವಾಗ ಅವರ, ನಮ್ಮ ಸಂಬಂಧ-ಪ್ರೀತಿ ಎಲ್ಲವೂ ನಮ್ಮ ಮನಸ್ಸಿನಲ್ಲಿ ಮೂಡಿ ಬರುತ್ತಿತ್ತು. ಪತ್ರ ಬರೆಯುವಾಗ ಮನೆಯ ಹಿರಿಯ ಸದಸ್ಯರಿಂದ ಹಿಡಿದು ಕಿರಿಯ ಸದಸ್ಯರವರೆಗೆ ಎಲ್ಲರನ್ನೂ ವಿಚಾರಿಸುತ್ತಿದ್ದ ಆ ಪರಿಯೇ ಚೆಂದ. ಇವೆಲ್ಲವುಗಳ ಮಧ್ಯೆ ತಮಾಷೆ ವಿಷಯ ಎಂದರೆ ಎಷ್ಟೋ ಬಾರಿ ಊರಿನಿಂದ ಅಮ್ಮ ನಾನು ರಜಕ್ಕೆ ಮನೆಗೆ ಬರುತ್ತಿದ್ದೇನೆ ಎಂದು ಮಗ ಬರೆದ ಪತ್ರವು ಮಗ ಮನೆಗೆ ಬಂದು ಅವನೇ ಆ ಪತ್ರ ಹಿಡಿದು ಓದುತ್ತಿದ್ದ ಸಂದರ್ಭಗಳು ಹಾಸ್ಯಮಯವಾಗಿರುತ್ತಿತ್ತು.
ಎಷ್ಟೋ ಬಾರಿ ಹೆಣ್ಣು ಮಕ್ಕಳು ಅವರ ಯೋಗಕ್ಷೇಮವನ್ನು ತಿಳಿಸಲು ತಂದೆ ತಾಯಿಗೆ ಕದ್ದು ಮುಚ್ಚಿ ಪತ್ರವನ್ನು ಬರೆಯುತ್ತಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ಬಾರಿ ನಮಗೆ ಬಂದ ಪತ್ರವನ್ನು ಕೊಡದೆ ದೂರವನ್ನು ಹೆಚ್ಚು ಮಾಡಿದ ಸಂದರ್ಭಗಳೂ ಇವೆ. ಬರೆದ ಪತ್ರಗಳೇ ಕೈ ಸೇರುತ್ತಿರಲಿಲ್ಲ. ಅದರಿಂದಾಗಿ ಎಷ್ಟೋ ಸಂಬಂಧಗಳು ಮುರಿದುಬಿದ್ದ ಉದಾಹರಣೆಗಳಿವೆ. ಅದರಲ್ಲೂ ಆಷಾಢಕ್ಕೆ ಬಂದ ಮಗಳನ್ನು ನೆನೆದು ಅಳಿಯ ಬರೆಯುತ್ತಿದ್ದ ಪತ್ರಗಳು, ಅದನ್ನು ಮಗಳು ಕದ್ದು ಮುಚ್ಚಿ ಓದುತ್ತಿದ್ದ ಪರಿಯನ್ನು ವರ್ಣಿಸಲು ಸಾಧ್ಯವೇ ಇಲ್ಲ.
ಎಷ್ಟೋ ಬಾರಿ ಮಗನಿಂದ ಪತ್ರ ಬಾರದೆ ಇದ್ದಾಗ ಅಮ್ಮ ಅಂಚೆ ಅಣ್ಣನನ್ನು ಅಣ್ಣ ಪತ್ರ ಬಂತಾ ಅಂತ ಕೇಳಿದಾಗ ಅಂಚೆ ಅಣ್ಣ ಬೈದದ್ದೂ ಉಂಟು. ಆತ ಯಾರಿಗೂ ನೆಂಟನಲ್ಲದಿದ್ದರೂ ಎಲ್ಲರ ಮನೆಯ ಸದಸ್ಯನಾಗಿದ್ದ. ಅಷ್ಟೇ ಅಲ್ಲದೆ ಎಷ್ಟೋ ಜನರಿಗೆ ಓದಲು ಬಾರದೆ ಇದ್ದಾಗ ಆ ಪತ್ರವನ್ನು ತಾನೇ ಓದಿ ಹೇಳುತ್ತಿದ್ದ. ಪತ್ರಗಳ ಬಗ್ಗೆ ಮಾತನಾಡುವಾಗ ಪ್ರೇಮ ಪತ್ರದ ಬಗ್ಗೆ ಮಾತನಾಡದಿದ್ದರೆ ಹೇಗೆ? ಅದನ್ನು ಬರೆದವರಿಗೇ ಗೊತ್ತು ಅದರ ಸವಿ ಹಾಗೂ ಓದಿದವರಿಗೇ ಗೊತ್ತು ಅದರ ಸಿಹಿ. ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ… ಎನ್ನುವ ಹಾಡು ಈಗಲೂ ಕಿವಿಯಲ್ಲಿ ಗುಂಯ್ ಗುಟ್ಟುತ್ತದೆ. ಆ ಪ್ರೇಮ ಭಾವನೆಗಳನ್ನು ಈಗಿನ ಪ್ರೇಮಿಗಳು ನಿಜಕ್ಕೂ ಕಳೆದುಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈಗಲೂ ಎಷ್ಟೋ ಮನೆಗಳಲ್ಲಿ ಆ ಎಲ್ಲಾ ಪ್ರೇಮ ಪತ್ರಗಳು ಜೋಪಾನವಾಗಿವೆ. ಅದನ್ನು ಈಗ ಓದಿದರೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಹಾಗೆ ಅದರ ಸವಿ ಈಗಲೂ ಅಷ್ಟೇ ಇದ್ದು, ಇನ್ನೂ ಹೆಚ್ಚಾಗಿದೆ ಎಂದರೆ ತಪ್ಪಾಗುವುದಿಲ್ಲ.
ಆದರೆ ಈಗಿನ ಮಕ್ಕಳು ಹಾಯ್, ಹಲೋದಲ್ಲೇ ಎಲ್ಲಾ ಮಾತನ್ನು ಮುಗಿಸಿಬಿಡುತ್ತಾರೆ. ಪುಟಗಟ್ಟಲೆ ಪತ್ರವೂ ಇಲ್ಲ; ಗಂಟೆಗಟ್ಟಲೆ ಮಾತೂ ಇಲ್ಲ. ಆ ಪತ್ರದ ಒಂದೊಂದು ಪದವೂ ನಮ್ಮೊಂದಿಗೆ ಮಾತನಾಡುತ್ತಿದ್ದವು ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ಭಾವನೆಗಳ ಆಗರ ಆ ಪತ್ರವಾಗಿತ್ತು. ಪತ್ರ ಬರೆಯುವಾಗಲೂ ನಗು, ಅಳು ಸೇರಿದಂತೆ ಎಲ್ಲಾ ಭಾವನೆಗಳನ್ನು ಆ ಪತ್ರ ಹೊಂದಿರುತ್ತಿತ್ತು. ನನಗೆ ಈಗಲೂ ನೆನಪಿದೆ. ನಾನು ಪತ್ರ ಬರೆಯುವಾಗ ನಾನು ಅಳುತ್ತಾ ಈ ಪತ್ರ ಬರೆಯುತ್ತಿದ್ದೇನೆ ಎಂದು ಬರೆದ ಸಾಲುಗಳು. ಈಗ ಅದನ್ನು ಓದಿದರೆ ನಗು ಬರುತ್ತದೆ. ನಿಮ್ಮ ಬಳಿಯೂ ಆ ನೆನಪಿನ ಖಜಾನೆ ಇದ್ದರೆ ದಯಮಾಡಿ ಇಂದೇ ಅದನ್ನು ಹುಡುಕಿ ಓದಿ. ಈಗಿನ ಪೀಳಿಗೆಗೆ ಪತ್ರದ ರುಚಿ ಗೊತ್ತಿಲ್ಲ ಅಂದರೆ ತಪ್ಪಾಗುವುದಿಲ್ಲ. ಹಾಗಾಗಿ ನಿಮ್ಮ ಪ್ರೀತಿ ಪಾತ್ರರಿಗೆ ಪತ್ರ ಬರೆಯಿರಿ. ನಿಮ್ಮ ಸ್ನೇಹಿತರೊಂದಿಗೆ ಪತ್ರದಲ್ಲಿ ಮಾತನಾಡಿ ನೋಡಿ, ಬಹಳ ಚೆನ್ನಾಗಿರುತ್ತೆ.
ನೀಟು.... ಘಾಟು ! ಆಗ, ಎಷ್ಟೊಂದು ಶಿಸ್ತು, ಕ್ರಮವಾಗಿ ನಡೆಯುತ್ತಿತ್ತು? ಪರೀಕ್ಷೆ “ ನೀಟ್ “! ಈಗ, ಇದಕ್ಕೂ ಅಂಟಿಬಿಟ್ಟಿತಲ್ಲ…
ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಮೊಬೈಲ್ ಉಪಯೋಗಿಸಬಾರದೆಂದು ನಿಯಮವನ್ನು ಜಾರಿಗೆ ತಂದು ಎರಡು ವರ್ಷಗಳೇ…
ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳ ದುಬಾರಿ ವೆಚ್ಚ ಮತ್ತು ವಿಮೆ, ತೆರಿಗೆಗಳ ಹೆಚ್ಚಳದಿಂದಾಗಿ ಖಾಸಗಿ ಶಾಲಾ ವಾಹನಗಳ ಮಾಸಿಕ ಶುಲ್ಕವನ್ನು…
ನವೀನ್ ಡಿಸೋಜ ಕೊಡಗಿನ ಹೋಂಸ್ಟೇವೊಂದರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬೆನ್ನಲ್ಲೇ ಕ್ರಮ; ಜಂಟಿ ಸರ್ವೇ ಆರಂಭ ಮಡಿಕೇರಿ: ಹೋಂಸ್ಟೇಗಳಿಗೆ…
ಭೇರ್ಯ ಮಹೇಶ್ ಬರಪೀಡಿತ ತಾಲ್ಲೂಕುಗಳು ಎಂದು ಘೋಷಿಸಲು ರೈತ ಮುಖಂಡರ ಆಗ್ರಹ ಕೆ.ಆರ್.ನಗರ: ಜಿಲ್ಲೆಯಲ್ಲಿ ಭತ್ತದ ಕಣಜ ಎಂದೇ ಪ್ರಸಿದ್ಧಿಯಾಗಿರುವ…
ಕೆ.ಬಿ.ರಮೇಶನಾಯಕ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಗೆ ಸಹಕಾರಿ; ಸ್ಥಳೀಯ ಉತ್ಪನ್ನಗಳ ಮಾರಾಟ, ಆದಾಯ, ಆರೋಗ್ಯ ವೃದ್ಧಿ ಮೈಸೂರು: ಜಗತ್ತಿಗೆ ಯೋಗವನ್ನು ಪರಿಚಯಿಸಿಕೊಡುವ…