ಆಂದೋಲನ ಪುರವಣಿ

ಯೋಗ ಕ್ಷೇಮ : ಸ್ವಯಂ ವೈದ್ಯಕ್ಕೆ ಮುಂದಾಗುವ ಮುನ್ನ

ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರವಲ್ಲ; ವೈದ್ಯರ ಸಂಪರ್ಕವೇ ಸೂಕ್ತ

ಡಾ. ಮಂಜುನಾಥ್ ಬಿ.ಎಚ್. ನಿರ್ದೇಶಕರು, ಡಿಆರ್‌ಎಂ ಆಸ್ಪತ್ರೆ, ಮೈಸೂರು

ಬೇನೆ ಕಾಣಿಸಿಕೊಂಡರೆ ಒಂದು ವರ್ಗ ಗೂಗಲ್ ಮಾಡಿಯೋ, ಸೋಷಲ್ ಮೀಡಿಯಾ ನೋಡಿಯೋ ಸ್ವಯಂ ವೈದ್ಯ ಮಾಡಿಕೊಳ್ಳುತ್ತದೆ. ಮತ್ತೊಂದು ವರ್ಗ ಮೆಡಿಕಲ್ ಸ್ಟೋರ್‌ಗೆ ಹೋಗಿ ಮಾತ್ರೆ ತೆಗೆದುಕೊಳ್ಳುತ್ತದೆ. ಮಗದೊಂದು ವರ್ಗ ಯಾರೋ ಹೇಳಿದ್ದು, ಹಳೆಯ ಮಾತ್ರೆ ಚೀಟಿಗಳ ಮೊರೆ ಹೋಗುತ್ತದೆ. ಹೀಗೆ ತಜ್ಞ ವೈದ್ಯರನ್ನು ಭೇಟಿಯಾಗದೇ ತಾವಾಗಿ ತಾವೇ ಔಷಧೋಪಚಾರ ಮಾಡಿಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ತುಂಬಾ ಅಪಾಯಕಾರಿ ಎನ್ನುತ್ತಾರೆ ಡಾ. ಮಂಜುನಾಥ್.

———

ಶೀತ, ಜ್ವರ, ತಲೆನೋವು, ಸುಸ್ತಾಗುವುದೆಲ್ಲವೂ ಸಾಮಾನ್ಯ ಸಮಸ್ಯೆಗಳೇ. ಹಾಗೆಯೇ ಇವು ದೊಡ್ಡ ದೊಡ್ಡ ಸಮಸ್ಯೆಗಳ ಪ್ರಾರಂಭಿಕ ಹಂತವೂ ಹೌದು. ಶೀತ ಬಂತು ಎಂದು ಹೇಳಿ ಯಾವುದೋ ಮಾತ್ರೆ ತೆಗೆದುಕೊಂಡರೆ ಅದು ತಕ್ಷಣಕ್ಕೆ ನೆರವಾಗಬಹುದು. ಆದರೆ ಮುಂದೆ ಇದರಿಂದ ದೊಡ್ಡ ಸಮಸ್ಯೆ ಎದುರಾಗಬಹುದು. ಅಷ್ಟರಲ್ಲಿ ಕಾಲ ಮಿಂಚಿಹೋಗಿ ರೋಗ ಉಲ್ಬಣವಾಗಲೂಬಹುದು. ಹಾಗಾಗಿ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯುತ್ತಮ.



ಅರ್ಧ ಜ್ಞಾನದಿಂದ ಯಡವಟ್ಟು

ಇಂದು ಹೆಚ್ಚಿನವರು ಎಲ್ಲ ಸಮಸ್ಯೆಗಳಿಗೂ ಗೂಗಲ್‌ನಲ್ಲಿ ಪರಿಹಾರ ಹುಡುಕುತ್ತಾರೆ. ಬೇರೆಲ್ಲಾ ವಿಚಾರಗಳಲ್ಲಿ ಇದು ಫಲ ನೀಡುತ್ತದೆಯಾದರೂ ಆರೋಗ್ಯದ ವಿಚಾರದಲ್ಲಿ ಈ ನಡೆ ಒಳ್ಳೆಯದಲ್ಲ. ಶೀತ, ಜ್ವರಕ್ಕೆ ಗೂಗಲ್ ಮಾಡಿ ಪರಿಹಾರ ಹುಡುಕಿದರೆ ಅದು ಯಾವ ಮಾತ್ರೆ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಆದರೆ ನಿಜವಾದ ಸಮಸ್ಯೆ ಏನು? ಇದು ಬೇರೆ ರೋಗದ ಪ್ರಾರಂಭಿಕ ಹಂತವೇ ಎಂಬುದನ್ನು ಅದು ತಿಳಿಸುವುದಿಲ್ಲ. ರೋಗ ಲಕ್ಷಣಗಳು ಕಾಣಿಸಿಕೊಂಡ ಪ್ರಾರಂಭಿಕ ಹಂತ ರೋಗಿಯ ಪಾಲಿಗೆ ಅತ್ಯಮೂಲ್ಯ ಸಮಯ. ಇದನ್ನು ವ್ಯರ್ಥ ಮಾಡಿಕೊಳ್ಳದೇ ನೇರವಾಗಿ ವೈದ್ಯರ ಬಳಿ ಬಂದು ಚಿಕಿತ್ಸೆ ಪಡೆಯುವುದು ಉತ್ತಮ. ಆದರೆ ಇಂದು ವಿದ್ಯಾವಂತ ಸಮುದಾಯದಲ್ಲೇ ಈ ರೀತಿಯ ನಡೆ ಹೆಚ್ಚುತ್ತಿರುವುದು ಸರಿಯಲ್ಲ.


ಇತರರಿಗೂ ಗೈಡ್ ಮಾಡುವುದು ತಪ್ಪು

ಹೆಚ್ಚಿನವರು ತಾವು ತೆಗೆದುಕೊಂಡ ಔಷಧವನ್ನು ಇತರರಿಗೆ ರೆಫರ್ ಮಾಡುತ್ತಾರೆ. ಇದು ಎಲ್ಲ ವೇಳೆಯಲ್ಲೂ ಪ್ರಯೋಜನಕಾರಿಯಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿ, ರೋಗ ಲಕ್ಷಣಗಳು, ರೋಗ ನಿರೋಧಕ ಶಕ್ತಿಯ ಪ್ರಮಾಣ ಬೇರೆ ಬೇರೆ ರೀತಿ ಇರುತ್ತದೆ. ಇದಕ್ಕೆ ತಕ್ಕಂತೆ ವೈದ್ಯರು ಔಷಧ ನೀಡುತ್ತಾರೆ. ಆದರೆ ಇತರರು ತಿಳಿಸಿದ ಔಷಧಗಳಿಂದ ರೋಗ ಸಂಪೂರ್ಣವಾಗಿ ಗುಣವಾಗುತ್ತದೆ ಎಂದು ಹೇಳಲಾಗದು. ಜೊತೆಗೆ ಮೆಡಿಕಲ್ ಸ್ಟೋರ್‌ಗಳಿಗೆ ನೇರವಾಗಿ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬಳಸುವುದೂ ಅನೇಕ ವೇಳೆಗಳಲ್ಲಿ ಅಪಾಯ ತರಬಹುದು.


ಸಣ್ಣ ಮೊತ್ತಕ್ಕೆ ಚಿಂತಿಸಬೇಡಿ

ಅನೇಕ ವೇಳೆಯಲ್ಲಿ ಡಾಕ್ಟರ್‌ಗೆ ಕೊಡಬೇಕಾದ ಫೀಸ್, ಕಾಯಬೇಕಾದ ಸಮಯವನ್ನು ಲೆಕ್ಕ ಮಾಡಿಕೊಂಡು ಸ್ವಯಂ ವೈದ್ಯಕ್ಕೆ ಹಲವರು ಮುಂದಾಗುತ್ತಾರೆ. ಇದರಿಂದ ತಾತ್ಕಾಲಿಕವಾಗಿ ಸಮಯ ಮತ್ತು ಹಣವನ್ನು ಉಳಿಸಬಹುದು. ಆದರೆ ಸಮಸ್ಯೆ ಉಲ್ಬಣಿಸಿದರೆ ಹೆಚ್ಚಿನ ಪ್ರಮಾಣದ ಹಣ, ಸಮಯ, ಶಕ್ತಿ ವ್ಯರ್ಥವಾಗುವುದು ಖಂಡಿತ. ವೈದ್ಯರಿಗೆ ಕೊಡಲು ಹಣವಿಲ್ಲ ಎಂದಾದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು. ಡೆಂಗ್ಯೂ, ವೈರಲ್ ಫೀವರ್‌ಗಳು ಪ್ರಾರಂಭದಲ್ಲಿ ಸಾಮಾನ್ಯ ಜ್ವರದಂತೆಯೇ ಕಾಣಿಸುತ್ತವೆ. ಆದರೆ ತಕ್ಷಣ ಚಿಕಿತ್ಸೆ ಪಡೆಯದೇ ಇದ್ದರೆ ಪ್ರಾಣಾಪಾಯ ಸಂಭವಿಸಬಹುದು. ಈ ರೀತಿಯ ಘಟನೆಗಳು ನಮ್ಮ ನಡುವೆ ಆಗಿವೆ. ಹೀಗಾಗಿ ಸಣ್ಣ ಮೊತ್ತಕ್ಕೋ, ಸಮಯದ ಉಳಿತಾಯಕ್ಕೋ ಮುಂದಾಗಿ ಆರೋಗ್ಯದ ಜೊತೆ ಆಟವಾಡುವುದು ತರವಲ್ಲ.


ಸಮಯ ವ್ಯರ್ಥ ಮಾಡದಿರಿ

ಅಪಘಾತವೇ ಆಗಲೀ, ತುರ್ತು ಚಿಕಿತ್ಸೆಯೇ ಆಗಲಿ, ಸಾಮಾನ್ಯ ಚಿಕಿತ್ಸೆಯೇ ಆಗಲಿ ರೋಗಿಯ ಪಾಲಿಗೆ ಗೋಲ್ಡನ್ ಟೈಮ್ ಎನ್ನುವುದು ಇರುತ್ತದೆ. ಈ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಜೀವ ಉಳಿಸಿಕೊಳ್ಳಬಹುದು. ಆದರೆ ಅಪಘಾತ, ತುರ್ತು ಚಿಕಿತ್ಸೆ ಹೊರತಾಗಿ ಹೆಚ್ಚಿನ ಸಂದರ್ಭಗಳಲ್ಲಿ ಕಾದುನೋಡುವ ತಂತ್ರಕ್ಕೆ ಹಲವರು ಮುಂದಾಗುತ್ತಾರೆ. ಹಿಂದೆ ವೈದ್ಯರು ಬರೆದುಕೊಟ್ಟಿದ್ದ ಮಾತ್ರೆಗಳ ಬಳಕೆ ಮಾಡುತ್ತಾರೆ. ಇದು ಬೇರೆ ಬೇರೆ ರೀತಿಯ ಸಮಸ್ಯೆಗೆ ಎಡೆಮಾಡಿಕೊಡಬಹುದು. ಹೀಗಾಗಿ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಭೇಟಿ ಮಾಡಿದರೆ ಪ್ರಾರಂಭದಲ್ಲಿಯೇ ಸಮಸ್ಯೆಗೆ ಪರಿಹಾರ ದೊರೆತು ಆರೋಗ್ಯ ರಕ್ಷಣೆ ಮಾಡಿಕೊಳ್ಳಬಹುದು.


ಎಲ್ಲ ಔಷಧಗಳೂ ಒಂದೇ ಅಲ್ಲ

ವೈದ್ಯರೊಬ್ಬರು ರೋಗಿಗೆ ಔಷಧ ಬರೆದುಕೊಡುವ ಮುನ್ನ ಅವರ ವಯಸ್ಸು, ದೇಹದ ತೂಕ, ಆರೋಗ್ಯ ಮಟ್ಟವನ್ನು ಗಮನದಲ್ಲಿ ಇಟ್ಟುಕೊಂಡಿರುತ್ತಾರೆ. ಆಂಟಿಬಯಾಟಿಕ್‌ನಲ್ಲಿಯೇ ಸಾಕಷ್ಟು ಬಗೆಗಳಿವೆ. ಟೆಟ್ರಾ ಸೈಕ್ಲಿನ್, ಪೆನ್ಸಿಲಿನ್ ಇವೆಲ್ಲಾ ಬೆಸಿಕ್ ಆಂಟಿಬಯಾಟಿಕ್. ಇವುಗಳಿಗೆ ರೋಗ ಗುಣವಾಗದೇ ಇದ್ದಾಗ ವ್ಯಾಂಕೋಮೈಸಿನ್, ಇಂಡಾಮೈಸಿನ್ ಸೇರಿ ತುಂಬಾ ಪರಿಣಾಮಕಾರಿ ಆಂಟಿಬಯಾಟಿಕ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಎಲ್ಲ ಔಷಧಗಳೂ ಒಂದೇ ಅಲ್ಲ.


ಪರೀಕ್ಷೆಗಳಿಗೆ ಸಹಕರಿಸಿ

ಆಲೋಪತಿ ಎವೆಡೆನ್ಸ್ ಬೇಸ್ಡ್ ಮೆಡಿಸನ್. ಸಮಸ್ಯೆಗೆ ಸರಿಯಾದ ಕಾರಣ ತಿಳಿದುಕೊಂಡು ಚಿಕಿತ್ಸೆ ನೀಡುವುದು ಇದರ ಮುಖ್ಯ ಲಕ್ಷಣ. ಸಮಸ್ಯೆಗೆ ಪ್ರಾಥಮಿಕ ಚಿಕಿತ್ಸೆಯಿಂದ ಪರಿಹಾರ ಸಿಕ್ಕದೇ ಇದ್ದರೆ ವೈದ್ಯರು ರಕ್ತ ಪರೀಕ್ಷೆ ಸೇರಿ ಹಲವು ಬಗೆಯ ಪರೀಕ್ಷೆಗೆ ಶಿಫಾರಸ್ಸು ಮಾಡುತ್ತಾರೆ. ಇದರ ಉದ್ದೇಶ ರೋಗದ ಲಕ್ಷಣಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು ಅದಕ್ಕೆ ತಕ್ಕುದಾಗಿ ಚಿಕಿತ್ಸೆ ನೀಡುವುದಾಗಿರುತ್ತದೆ. ಈ ವೇಳೆ ರೋಗಿಗಳು ಸಹಕರಿಸಿದರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುವುದು ಸಾಧ್ಯ.

andolanait

Recent Posts

ದೂರ ಗ್ರಾಮಕ್ಕೆ ನಟ ಪ್ರಭುದೇವ ಭೇಟಿ

ದೂರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೂರ ಗ್ರಾಮಕ್ಕೆ ಖ್ಯಾತ ನಟ, ನಿರ್ದೇಶಕ ಪ್ರಭುದೇವ ಶನಿವಾರ ಆಗಮಿಸಿದ್ದರು. ಅವರು ಮೊದಲು…

2 hours ago

ಸೌದಿ ಅರಾಮ್ಕೊ ತೈಲ ಕಂಪನಿಯ ಹೆಲಿಕಾಪ್ಟರ್‌ ಪತನ: 14 ಮಂದಿ ದುರ್ಮರಣ

ರಿಯಾಧ್:‌ ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾದ ರಾಸ್‌…

3 hours ago

ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣ: ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಟಿ.ನರಸೀಪುರ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ…

4 hours ago

ಮೈಸೂರಿನ ಎರಡು ಪ್ರಮುಖ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆ ಕರೆ: ಕೆಲಕಾಲ ಆತಂಕ ಸೃಷ್ಟಿ

ಮೈಸೂರು: ನಗರದ ಪ್ರಮುಖ ಎರಡು ಹೋಟೆಲ್‌ಗಳನ್ನು ಬಾಂಬ್ ಮೂಲಕ ಸ್ಛೋಟಿಸುವುದಾಗಿ ಇ-ಮೇಲ್ ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದು, ಕೆಲಕಾಲ ಆತಂಕ…

4 hours ago

ಜಮೀನಿನಲ್ಲಿ ಯುವತಿಗೆ ಹಾವು ಕಡಿತ

ಹನೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯುವತಿಯೊಬ್ಬರಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.…

4 hours ago

ಸರಗೂರು: ಹುಲಿ ದಾಳಿಗೆ ಕರು ಬಲಿ

ಸರಗೂರು: ಮೈಸೂರು ಜಿಲ್ಲೆಯಲ್ಲಿ ಮತ್ತೆ ಹುಲಿ ಉಪಟಳ ಹೆಚ್ಚಾಗಿದ್ದು, ಹುಲಿ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸರಗೂರು ತಾಲ್ಲೂಕಿನ ಹೆಗ್ಗನೂರು…

5 hours ago