ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಪ್ರಮುಖ ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ವಿಮಾ ಭದ್ರತೆ ಒದಗಿಸುವುದು ಅತಿ ಮುಖ್ಯ ಮತ್ತು ಅತ್ಯಂತ ಜವಾಬ್ದಾರಿ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಸ್ನೇಹಿ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಮುಂದಾಗಿದ್ದಾರೆ.
ತಮ್ಮ ಇಲಾಖೆ ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮತ್ತು ಕುಟುಂಬ ಸದಸ್ಯರಿಗೆ ವಿಮಾ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ.
ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬ ಸದಸ್ಯರು ವಿಮಾ ಹಣ ಪಡೆಯಲು ತಾಂತ್ರಿಕ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ತಮ್ಮ ಇಲಾಖೆಯ ಅಡಿಯಲ್ಲಿರುವ ಎಲ್ಲಾ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾಜಿಕ ಭದ್ರತಾ ಕ್ರಮವಾಗಿ ಕಡ್ಡಾಯವಾಗಿ ಟರ್ಮ್ ಇನ್ಶೂರೆನ್ಸ್ ಪಡೆಯಬೇಕೆಂದು ಸೂಚಿಸಿದ್ದಾರೆ.
ಶನಿವಾರ ನಡೆದ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಹಾಂತೇಶ ಬೀಳಗಿ ವಿಷಯವನ್ನು ಪ್ರಸ್ತಾಪಿಸಿದರು. ಐಎಎಸ್ಗೆ ಬಡ್ತಿ ಪಡೆದ ನಂತರ ಟರ್ಮ್ ವಿಮಾ ವ್ಯವಸ್ಥೆಯಲ್ಲಿ ತಮ್ಮ ಸೇವಾ ವಿವರವನ್ನು ದಾಖಲಿಸಿರಲಿಲ್ಲ. ಇದರಿಂದಾಗಿ ಐಎಎಸ್ ಅಧಿಕಾರಿ ಕುಟುಂಬ ವರ್ಗದವರಿಗೆ ಸುಮಾರು 50 ಲಕ್ಷ ರೂ. ಕಡಿಮೆ ಸಿಕ್ಕಿದೆ ಎಂದು ತಿಳಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮ್ಮ ಪ್ರಸ್ತುತ ಸಂಬಳ ಮತ್ತು ಹುದ್ದೆಗೆ ಅನುಗುಣವಾಗಿ ಟರ್ಮ್ ವಿಮೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕು ಎಂದು ಆದೇಶ ಹೊರಡಿಸುವಂತೆ ತಕ್ಷಣವೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರಿಗೆ ಸೂಚಿಸಿದರು.
ಉದ್ಯೋಗಿಯ ದುರದೃಷ್ಟಕರ ಸಂದರ್ಭದಲ್ಲಿ ಕುಟುಂಬಗಳು ಪೂರ್ಣ ಅರ್ಹ ಟರ್ಮ್ ವಿಮಾ ಮೊತ್ತವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ಕಡಿಮೆ ವೇತನ ಶ್ರೇಣಿಯಲ್ಲಿರುವವರು, ಹಣಕಾಸಿನ ಕೊರತೆ ಅಥವಾ ಅರಿವಿನ ಕೊರತೆಯಿಂದಾಗಿ ವಿಮೆಯನ್ನು ಆಯ್ಕೆ ಮಾಡಿಕೊಂಡಿಲ್ಲದಿರಬಹುದು. ಈ ನಿಟ್ಟಿನಲ್ಲಿ ಅವರಿಗೆ ಅರಿವು ಮೂಡಿಸಬೇಕು ಎಂದು ಸಚಿವರು ಗಮನ ಸೆಳೆದರು.
ಪ್ರಮುಖ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳೊಂದಿಗೆ ಸಭೆ ನಡೆಸಿ ಇಲಾಖೆಯ ಉದ್ಯೋಗಿಗಳಿಗೆ ಕೈಗೆಟುಕುವ ದರಗಳಲ್ಲಿ ಅತ್ಯುತ್ತಮ ವಿಮಾ ಯೋಜನೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.
ನೌಕರರ ಕುಟುಂಬಗಳಿಗೆ ಸಮಗ್ರ ಆರ್ಥಿಕ ಭದ್ರತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಅವಧಿ ವಿಮಾ ಪ್ರಯೋಜನಗಳನ್ನು ವಿಸ್ತರಿಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಡಾ. ಶರಣಪ್ರಕಾಶ್ ಪಾಟೀಲ್ ಆದೇಶಿಸಿದ್ದಾರೆ.
ಮತ್ತೊಂದು ಸಿಬ್ಬಂದಿ ಸ್ನೇಹಿ ನಿರ್ಧಾರ ಕೈಗೊಂಡಿರುವ ಡಾ. ಪಾಟೀಲ್ ಇಲಾಖೆಯಲ್ಲಿರುವ ಅರ್ಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಹುದ್ದೆ ವ್ಯಾಪ್ತಿಗೆ ತರುವ ಕುರಿತು, ಸೂಕ್ತ ಮೀಸಲಾತಿ ರೋಸ್ಟರ್ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಉದ್ಯೋಗದಲ್ಲಿ ನ್ಯಾಯಸಮ್ಮತೆ ಒದಗಿಸಲು ಈ ರೀತಿಯ ಕ್ರಮ ಅಗತ್ಯ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…
ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…
ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…
ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…
ನವದೆಹಲಿ: ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…
ಕೋಯಿಕ್ಕೋಡ್: ವಯನಾಡು, ಕೋಯಿಕ್ಕೋಡ್ನಲ್ಲಿ ಶಿಗೆಲ್ಲಾ ವೈರಸ್ ಸೋಂಕು ಹರಡಿರುವ ನಡುವೆ ನಿಫಾ ವೈರಸ್ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…