ಎಡಿಟೋರಿಯಲ್

ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಸರ್ಕಾರ ಮುಂದಾಗಲಿ

ಅನಿಲ್ ಅಂತರಸಂತೆ

ರಾಜ್ಯದಲ್ಲಿ ಕೃಷಿಯ ನಂತರದ ೨ನೇ ಸ್ಥಾನವನ್ನು ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಗೆ ನೀಡಬಹುದಾಗಿದೆ. ಅದರಲ್ಲೂ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಸನ ಜಿಲ್ಲೆಗಳ ರೈತರು ಹೆಚ್ಚಾಗಿ ಈ ಹೈನುಗಾರಿಕೆ ಉಪಕಸುಬನ್ನೇ ಅವಲಂಬಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಹಾಲು ಮಾರಾಟದ ದರವು ಏರಿಕೆಯಾದ್ದರಿಂದ ರೈತರು ತಮ್ಮ ಆದಾಯ ಮತ್ತಷ್ಟು ಹೆಚ್ಚಳವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಸರ್ಕಾರ ತಾನು ನೀಡಿದ ಭರವಸೆಯಂತೆ ರೈತರಿಗೆ ನೀಡಬೇಕಿರುವ ೫ ರೂ. ಪ್ರೋತ್ಸಾಹಧನವನ್ನು ಮಾತ್ರ ಇನ್ನೂ ಬಾಕಿ ಉಳಿಸಿಕೊಂಡಿದ್ದು, ಸರ್ಕಾರದ ಭರವಸೆ ಹಾಗೆಯೇ ಉಳಿದಿದೆ.

ಹೈನುಗಾರಿಕೆಯನ್ನು ಆಶ್ರಯಿಸಿ ಹಾಲು ಉತ್ಪಾದನೆ ಮಾಡುತ್ತಿರುವ ರೈತರಿಂದ ಮೈಮುಲ್ ಪ್ರತಿ ಲೀಟರ್‌ಗೆ ೩೦ ರೂ. ಬೆಲೆ ನೀಡಿ ಖರೀದಿಸುತ್ತಿತ್ತು. ಆದರೆ ಸರ್ಕಾರ ನಂದಿನಿ ಹಾಲಿನ ದರ ಏರಿಸಿದ್ದರಿಂದ ಮೈಮುಲ್ (ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ)ಕೂಡ ೨ ರೂ. ಏರಿಸಿ, ೩೨ ರೂ.ಗಳನ್ನು ರೈತರಿಗೆ ನೀಡಲು ಮುಂದಾಗಿದೆ.

ಆದರೆ ಈ ಹಿಂದೆ ರೈತರಿಗೆ ಮೈಮುಲ್ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ ಎಂದಾಗ ೫ ರೂ. ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಆ ಹಣವನ್ನು ಕಳೆದ ೩ ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವುದು, ಸರ್ಕಾರ ಕೇವಲ ಘೋಷಣೆ ಮಾತ್ರ ಮಾಡುತ್ತದೆ ವಿನಾ ಅದನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಪ್ರತಿನಿತ್ಯ ೧೧೫೬ ಸಂಘಗಳಿಂದ ೯೬ ಸಾವಿರ ಹೈನುಗಾರರು ಡೇರಿಗೆ ಸುಮಾರು ೬.೫೦ ಲಕ್ಷ ಲೀ. ಹಾಲು ಹಾಕುತ್ತಿದ್ದು, ಇವರಿಗೆ ಬರಬೇಕಾದ ಮೊತ್ತವೇ ಬರೋಬ್ಬರಿ ತಿಂಗಳಿಗೆ ೩೦ ಕೋಟಿ ರೂ.ಗಳಷ್ಟಿದೆ.

ಇದರೊಂದಿಗೆ ಮಂಡ್ಯದಲ್ಲಿ ೧೨೭೪ ಸಂಘಗಳ ೧,೦೨,೦೦೦ ಸದಸ್ಯರು ಒಟ್ಟು ೯ ಲಕ್ಷ ಲೀ. ಹಾಲು ಡೇರಿಗೆ ಹಾಕುತ್ತಿದ್ದಾರೆ. ಚಾಮರಾಜನಗರದಲ್ಲಿ ೪೬೫ ಸಂಘದ ೩೨ ಸಾವಿರ ಸದಸ್ಯರಿಂದ ೨.೧೦ ಲಕ್ಷ ಲೀ., ಕೊಡಗಿನಿಂದ ೩೮ ಸಂಘದ ೨೭೦೦ ಸದಸ್ಯರಿಂದ ೫೦,೦೦೦ ಲೀ ಹಾಲು ಸಂಗ್ರಹವಾಗುತ್ತಿದೆ.

ಆದರೆ ಸರ್ಕಾರ ಮಾತ್ರ ಇವರಿಗೆ ನೀಡಬೇಕಾದ ೫ ರೂ. ಪ್ರೋತ್ಸಾಹಧನವನ್ನು ಕಳೆದ ೩ ತಿಂಗಳಿನಿಂದ ಬಾಕಿ ಉಳಿಸಿಕೊಂಡಿದ್ದು, ಮಂಡ್ಯ ಜಿಲ್ಲೆಗೇ

೩೫ ಕೋಟಿ ರೂ. ಹಾಗೆಯೇ, ಚಾ.ನಗರ ಮತ್ತು ಕೊಡಗಿನಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದೆ.

ಸದ್ಯ ಈ ಪರಿಸ್ಥಿತಿ ಹೈನುಗಾರಿಕೆಯನ್ನೇ ನಂಬಿರುವ ಗ್ರಾಮೀಣ ಭಾಗದ ಕುಟುಂಬಗಳಿಗೆ ನುಂಗಲಾರದ ತುಪ್ಪವೆನಿಸಿದೆ.

ಬೇಸಾಯವನ್ನು ನಂಬಿ ಸಾಕಷ್ಟು ನಷ್ಟ ಅನುಭವಿಸುತ್ತಿರುವ ಗ್ರಾಮೀಣ ಭಾಗದ ರೈತರು ತಮ್ಮ ಜೀವನೋಪಾಯಕ್ಕಾಗಿ ಹೈನುಗಾರಿಯನ್ನು ಆರಂಭಿಸಿ ಆರ್ಥಿಕವಾಗಿ ಸಫಲತೆ ಕಾಣುವ ಬಯಕೆಯನ್ನು ಹೊಂದಿದ್ದರು. ಇದಕ್ಕಾಗಿ ಸ್ಥಳೀಯ ಬ್ಯಾಂಕುಗಳಿಂದ ಸಾಕಷ್ಟು ಸಾಲ ಮಾಡಿ ಹಸುಗಳನ್ನು ಖರೀದಿಸಿ ಹೈನುಗಾರಿಕೆಯನ್ನು ಆರಂಭಿಸಿದ್ದಾರೆ.

ಈ ನಡುವೆ ಸರ್ಕಾರ ಕೂಡ ಪ್ರೋತ್ಸಾಹ ಧನವನ್ನು ನೀಡುವ ಬಗ್ಗೆ ಭರವಸೆ ನೀಡಿ ಘೋಷಣೆಯನ್ನೂ ಮಾಡಿ ರೈತರಲ್ಲಿ ಆಸೆಯನ್ನು ಚಿಗುರಿಸಿತ್ತು. ಆದರೆ ಇದೀಗ ೩ ತಿಂಗಳ ಹಣ ಬಾಕಿ ಉಳಿಸಿಕೊಂಡಿದೆ. ಅಲ್ಲದೆ ಈ ಪ್ರೋತ್ಸಾಹ ಧನವು ಸಮಯಕ್ಕೆ ಸರಿಯಾಗಿ ಎಂದೂ ಬಂದಿಲ್ಲ ಎಂಬುದು ರೈತರ ಮತ್ತೊಂದು ಆರೋಪವಾಗಿದೆ. ಸರಿಯಾದ ಸಮಯಕ್ಕೆ

ನೀಡಲು ಸಾಧ್ಯವಿಲ್ಲದ ಮೇಲೆ ಸರ್ಕಾರ ಘೋಷಣೆಯನ್ನಾದರೂ ಏಕೆ ಮಾಡಬೇಕು? ಎಂಬುದು ಪ್ರಶ್ನೆಯಾಗಿದೆ. ಇನ್ನಾದರೂ ಸರ್ಕಾರ ಇಂತಹ ಗಂಭೀರ ವಿಚಾರಗಳ ಕುರಿತು ಆಲೋಚನೆ ಮಾಡಬೇಕಿದೆ. ಘೋಷಣೆ ಮಾಡಿ ಬಳಿಕ ಅನುಷ್ಠಾನ ಮಾಡದೆ ಕೇವಲ ಅರೆಬರೆ ಆಶ್ವಾಸನೆಗಳನ್ನು ನೀಡುತ್ತಾ ಮುಂದುವರಿಯುವ ಬದಲು ಯೋಜನೆಯನ್ನು ಯಶಸ್ವಿಯಾಗಿ ರೈತನ ಕೈ ಸೇರುವಂತೆ ಮಾಡಬೇಕಿದೆ.

andolanait

Recent Posts

ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಇಲ್ಲ

ಹಿಂದಿನ ವರ್ಷದ ಶುಲ್ಕವೇ ಈ ವರ್ಷಕ್ಕೂ ಅನ್ವಯ   ಬೆಂಗಳೂರು :  ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ, ದಂತ ವೈದ್ಯಕೀಯ,…

56 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಪ್ರೇಕ್ಷಕ ಚಿತ್ರಮಂದಿರದಿಂದ ವಿಮುಖನಾಗುತ್ತಿದ್ದಾನೆಯೇ?

ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 12 ಶುಕ್ರವಾರ

8 hours ago

ಮಳವಳ್ಳಿ | ಚಿರತೆ ಪ್ರತ್ಯಕ್ಷ ; ಆತಂಕ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…

18 hours ago

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

22 hours ago

ಮಲ್ಲಿಕಾರ್ಜುನ್‌ ಖರ್ಗೆ, ಎಂ.ನಾಗರಾಜ್‌ ಸಹಿತ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…

23 hours ago