ಎಡಿಟೋರಿಯಲ್

ಈ ಜೀವ ಜೀವನ : ದೇಶ ಬಿಟ್ಟು ಹೋಗಿದ್ದವರು, ವಿಭಜನೆಯ ನಂತರ ವಾಪಸ್ಸಾದರು

ಪಂಜು ಗಂಗೊಳ್ಳಿ 

ಕರ್ನಾಟಕದಲ್ಲಿ ಕೆಲವು ದಿನಗಳಿಂದೀಚೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸಿದ್ರಾಮುಲ್ಲಾ ಖಾನ್, ಸೀಟಿ ರವಿಯುದ್ದೀನ್ ಖಾನ್, ಬೊಮ್ಮಯುಲ್ಲಾ ಖಾನ್ ಅಂತ ಪರಸ್ಪರ ಒಬ್ಬರಿಗೊಬ್ಬರು ಮುಸ್ಲಿಂ ಹೆಸರುಗಳನ್ನು ಕೊಟ್ಟು ಅಪಹಾಸ್ಯ ಮಾಡುವುದು ನಡೆಯುತ್ತಿದೆ. ಹಿಂದೆ ಉತ್ತರಪ್ರದೇಶದ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವರನ್ನೂ ಬಿಜೆಪಿ ರಾಜಕಾರಣಿಗಳು ಮುಲ್ಲಾ ಮಲಾಯಂ ಸಿಂಗ್ ಯಾದವ್, ಮೌಲಾನಾ ಮುಲಾಯಂ ಸಿಂಗ್ ಯಾದವ್ ಎಂದು ಕರೆದು ಅಣಕಿಸುತ್ತಿದ್ದರು. ಯಾವುದೇ ಜಾತಿ, ಮತಕ್ಕೆ ಅದರದ್ದೇ ಆದ ವಿಶಿಷ್ಟ ರಿವಾಜುಗಳಿರುವಂತೆ ಅದರದ್ದೇ ಆದ ಹೆಸರಿನ ವಿಶಿಷ್ಟತೆಯೂ ಇರುತ್ತವೆ. ಅಂತೆಯೇ ಮುಸ್ಲಿಂ ಹೆಸರುಗಳು. ಆದರೆ, ಇಂದು ನಮ್ಮ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳು ಯಾವ ಪರಿಯಲ್ಲಿ ಧ್ರುವೀಕರಣಗೊಂಡಿವೆಯೆಂದರೆ ಮುಲ್ಲಾ, ಖಾನ್ ಮುಂತಾದ ಮುಸ್ಲಿಂ ಜಾತಿ ಸೂಚಕ ಹೆಸರುಗಳು ಅನ್ಯರಿಗೆ ಗೇಲಿಯ ವಸ್ತುಗಳಾಗಿವೆ. ಗುಜರಾತ್ ಕೋಮು ಧ್ರುವೀಕರಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಆದರೆ, ಇದೇ ಗುಜರಾತಿನ ಪಾಲನ್‌ಪುರಕ್ಕೆ ಬಂದರೆ ಖಾನ್ ಎಂಬ ಜಾತಿ ಸೂಚಕ ಹೆಸರಿರುವವರೆಲ್ಲ ಮುಸ್ಲಿಮರಲ್ಲ ಎಂಬ ಒಂದು ಕುತೂಹಲದ ಸಂಗತಿ ತಿಳಿಯುತ್ತದೆ!

ಪಾಲನ್‌ಪುರದಲ್ಲಿ ಮೋಲೇಸಲಾಮ್ ಎಂಬ ನೂರಕ್ಕೂ ಹೆಚ್ಚು ಕುಟುಂಬಗಳ ಒಂದು ಜನ ಸಮುದಾಯವಿದೆ. ಈ ಕುಟುಂಬಗಳ ಸದಸ್ಯರು ತಮ್ಮ ಹೆಸರುಗಳನ್ನು ಯಾಕೂಬ್ ಖಾನ್, ಹಮೀದ್ ಖಾನ್, ಜಾಫರ್ ಖಾನ್, ಶೇರ್ ಖಾನ್, ಯೂಸುಫ್ ಖಾನ್, ಕರೀಂ ಖಾನ್, ರಶೀದ್ ಖಾನ್ ಎಂದೆಲ್ಲ ಹೇಳಿಕೊಳ್ಳುತ್ತಾರೆ. ಆದರೆ, ಇವರ‍್ಯಾರೂ ಮುಸ್ಲಿಂ ಮತಸ್ಥರಲ್ಲ. ಇವರಲ್ಲಿ ಮದುವೆಗಳು ಹಿಂದೂ ಪದ್ಧತಿಯಂತೆ ನಡೆಯುತ್ತವೆ. ಇವರ ಕುಟುಂಬಗಳ ಹೆಂಗಸರ ಹೆಸರುಗಳು ಸವಿತಾ ಬೆನ್, ರಾಮಿಲಾ ಬೆನ್, ವಕ್ತು ಬೆನ್ ಮೊದಲಾಗಿ ಸಾಮಾನ್ಯ ಹಿಂದೂ ಗುಜರಾತಿ ಹೆಸರುಗಳಾಗಿರುತ್ತವೆ. ಇವರ ಕುಲದೇವತೆ ಚಾಮುಂಡಾ. ಗುಜರಾತಿ ಮತ್ತು ಹಿಂದಿ ಮಿಶ್ರಣದ ಇವರ ಭಾಷೆ ಇವರ ಕುಟುಂಬದ ಸದಸ್ಯರಲ್ಲದ ಹೊರಗಿನವರಿಗೆ ಅರ್ಥವಾಗದು. ಇವರು ತಮ್ಮನ್ನು ರಜಪೂತ್ ಖಾನ್‌ಗಳೆಂದು ಕರೆದುಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.

ಇವರ ಪೂರ್ವಜರು ಸುರೇಂದ್ರನಗರ ಜಿಲ್ಲೆಯ ಮುಲಿ ಎಂಬ ಚಿಕ್ಕ ರಾಜ್ಯವನ್ನು ಆಳಿಕೊಂಡಿದ್ದರು. ಕ್ರಿ.ಶ.೧೪೫೯ ರಿಂದ ೧೫೧೧ರ ತನಕ ಗುಜರಾತನ್ನು ಆಳಿದ್ದ ಸುಲ್ತಾನ್ ಮೊಹಮ್ಮದ್ ಬೆಗ್ಡಾ ಮುಲಿಯು ರಜಪೂತ ರಾಜಕುಮಾರಿಯನ್ನು ಮದುವೆಯಾದ ನಂತರ ಇವರೆಲ್ಲ ತಮ್ಮ ಹೆಸರಿನ ಮುಂದೆ ‘ಖಾನ್’ ಪದವನ್ನು ಸೇರಿಸಿಕೊಂಡರು. ಸ್ವಾತಂತ್ರ್ಯ ಪೂರ್ವದಲ್ಲಿ ಇವರ ಪೂರ್ವಜರು ಮುಲಿಯನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ, ದೇಶ ವಿಭಜನೆಯ ನಂತರ ಭಾರತಕ್ಕೆ ವಾಪಸ್ ಬಂದರು. ಹೀಗೆ ವಾಪಸ್ ಬಂದವರು ಪಾಲನ್‌ಪುರದ ಆಗಿನ ನವಾಬನ ಅನುಮತಿ ಪಡೆದು ಚಂಡಿಸರ್ ಮತ್ತು ವಸನ್ ಎಂಬ ಹಳ್ಳಿಗಳಲ್ಲಿ ನೆಲೆಯೂರಿದರು. ಈಗ ಇವರು ಗುಜರಾತಿನ ಎಲ್ಲೆಡೆ ಕಂಡು ಬರುತ್ತಾರಾದರೂ ಬರೂಚ್, ಖೇಡಾ ಮತ್ತು ಅಹಮದಾಬಾದ್ ಜಿಲ್ಲೆಗಳಲ್ಲಿ ಹೆಚ್ಚು ಕೇಂದ್ರಿತರಾಗಿದ್ದಾರೆ.

ಕೆಲವು ಮೂಲಗಳ ಪ್ರಕಾರ ಮೋಲೇಸಲಾಮ್‌ಗಳು ಮೂಲತಃ ರಜಪೂತರಾಗಿದ್ದರು. ೧೫ನೇ ಶತಮಾನದಲ್ಲಿ ಮೊಹಮ್ಮದ್ ಬೆಗ್ಡಾ ಸುಲ್ತಾನನ ಆಳ್ವಿಕೆಯ ಸಮಯದಲ್ಲಿ ಅವನಿಂದ ಪ್ರಭಾವಿತರಾಗಿ, ತಮ್ಮ ಊರುಗಳನ್ನು ಬಿಟ್ಟು ಸಾಮೂಹಿಕವಾಗಿ ಅಹಮದಾಬಾದಿಗೆ ವಲಸೆ ಹೋಗಿ, ಅವನ ಸೈನ್ಯ ಸೇರಿದರು. ಕೆಲಕಾಲ ನಂತರ ಅವರು ತಮ್ಮ ಮೂಲ ಊರುಗಳಿಗೆ ಹಿಂತಿರುಗಿದಾಗ ಅವರ ಆಸ್ತಿಪಾಸ್ತಿ, ಮನೆಮಠಗಳೆಲ್ಲವೂ ಅವರ ಸಂಬಂಽಕರ ಪಾಲಾಗಿದ್ದವು. ಅವರ ಸಂಬಂಽಕರು ಅವರನ್ನು ಮುಸ್ಲಿಮರೊಂದಿಗೆ ಸಹಭೋಜನ ಮಾಡಿದ ಕಾರಣ ಮ್ಲೇಚ್ಛರೆಂದು ಕರೆದು ಬಹಿಷ್ಕರಿಸಿದರು. ಹೀಗೆ ಬಹಿಷ್ಕೃತರಾದ ಅವರು ಸುಲ್ತಾನನ ಬಳಿ ಬಂದು ದೂರು ಕೊಟ್ಟರೂ ಅದರಿಂದೇನೂ ಪ್ರಯೋಜನವಾಗದೆ, ಅವನ ಸಲಹೆ ಮೇರೆಗೆ ಒಲ್ಲದ ಮನಸ್ಸಿನಿಂದ ಮುಸ್ಲಿಂ ಮತಕ್ಕೆ ಮತಾಂತರಗೊಂಡರು. ಆದರೆ, ತಮ್ಮ ಮೂಲ ಹಿಂದೂ ಸಂಪ್ರದಾಯಗಳನ್ನು ಹಾಗೆಯೇ ಉಳಿಸಿಕೊಂಡರು. ಮೋಲೇಸಲಾಮ್ ಅನ್ನುವುದು ಮೋಲ್-ಎ-ಸಲಾಮ್ ಅನ್ನುವುದರ ಗ್ರಾಮ್ಯರೂಪವಾಗಿದ್ದು. ಮತ್ತು ಮೋಲ್-ಎ-ಸಲಾಮ್ ಅನ್ನುವುದು ಮೊಹರ್-ಎ-ಸಲಾಮ್ ಅನ್ನುವುದರ ಅಪಭ್ರಂಶ. ಇದರ ಅರ್ಥ ‘ಇಸ್ಲಾಮಿನ ಮುದ್ರೆ’.

ಮೋಲೇಸಲಾಮ್ ಕುಟುಂಬಗಳು ತಮ್ಮನ್ನು ಹಿಂದೂಗಳೆಂದು ಕರೆದುಕೊಂಡರೂ ಹಿಂದೂಗಳು ಇವರ ಹೆಸರುಗಳನ್ನು ನೋಡಿ ಇವರನ್ನು ಹಿಂದೂಗಳೆಂದು ಒಪ್ಪುವುದಿಲ್ಲ. ಅತ್ತ ಮುಸ್ಲಿಮರು ಇವರ ಆಚರಣೆಗಳನ್ನು ನೋಡಿ ಇವರನ್ನು ಮುಸ್ಲಿಮರೆಂದು ಪರಿಗಣಿಸುವುದಿಲ್ಲ. ಆದರೆ, ಮೋಲೇಸಲಾಮ್ ಕುಟುಂಬಗಳು ಇದರ ಬಗ್ಗೆ ಏನೂ ತಲೆಕೆಡಿಸಿಕೊಳ್ಳದೆ, ತಮ್ಮ ಕುಲ ಕಸುಬಾದ ಗಿಡಮೂಲಿಕೆ ಮಾರಾಟವನ್ನು ನಡೆಸುತ್ತ, ಯಾವುದೇ ಕೋಮುಗಲಭೆಯ ಸುಳಿಗೆ ಸಿಗದೆ ಹಾಯಾಗಿ ಬದುಕುತ್ತಿದ್ದಾರೆ. ಜನಸಂಖ್ಯೆಯಲ್ಲಿ ಮೋಲೇಸಲಾಮ್ ಕುಟುಂಬಗಳು ಕೇವಲ ೨ ಲಕ್ಷದ ಆಸುಪಾಸು ಇರಬಹುದು, ಅಷ್ಟೇ. ಆದರೆ, ಭಾರತದ ಈಗಿನ ಕೋಮುದ್ವೇಷದ ವಾತಾವರಣದಲ್ಲಿ ಈ ಮೋಲೇಸಲಾಮ್‌ಗಳು ಮರುಭೂಮಿಯಲ್ಲಿನ ಓಯಸಿಸ್‌ಗಳಂತೆ.

andolanait

Recent Posts

ನೇಪಾಳ ಪ್ರವಾಹ | ಮೃತರ ಸಂಖ್ಯೆ 939ಕ್ಕೆ ಏರಿಕೆ, ಇನ್ನೂ ಸುಮಾರು 4,000 ಜನ ಕಣ್ಮರೆ

ಕಠ್ಮಂಡು: ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ ಮುಂದುವರಿದಿದ್ದು, ಮೃತರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ ಸುಮಾರು 4 ಸಾವಿರ ಜನರು…

48 mins ago

ಮಡಿಕೇರಿ: ಕೆರೆಗೆ ಹಾರಿ ತಾಯಿ ಮಗಳು ಆತ್ಮಹತ್ಯೆ

ಮಡಿಕೇರಿ: ತಲಕಾವೇರಿ ಸಮೀಪದ ತಣ್ಣಿಮಾನಿ ಗ್ರಾಮದಲ್ಲಿ ತಾಯಿ ಮತ್ತು ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.…

58 mins ago

ಮಡಿಕೇರಿ: ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ!

ಮಡಿಕೇರಿ: ಕೊಡಗಿನಲ್ಲಿ ಭಾರೀ ಮಳೆಗೆ ಬೆಟ್ಟದಲ್ಲಿ ಜಾರಿನಿಂತ ಬೃಹತ್‌ ಕಲ್ಲುಬಂಡೆ ಆತಂಕ ಮೂಡಿಸಿದೆ. ಮಡಿಕೇರಿ ತಾಲೂಕಿನ ಕುಂದಚೇರಿ ಗ್ರಾಮದ ಪೊಲಮಾನಿ…

1 hour ago

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

9 hours ago

ಓದುಗರ ಪತ್ರ: ಬದಲಾಗುತ್ತಿದೆ ಚಾತುರ್ಮಾಸ ಪದದ ಅರ್ಥ

ಪ್ರತಿವರ್ಷ ಆಷಾಢ, ಶ್ರಾವಣ ಮಾಸದ ಸಮಯದಲ್ಲಿ ಎಲ್ಲ ಮಠಾಧೀಶರೂ ಚಾತುರ್ಮಾಸ ವ್ರತವನ್ನು ಆಚರಿಸುವುದು ವಾಡಿಕೆ. ಚಾತುರ್ಮಾಸ ಎಂದರೆ ನಾಲ್ಕು ತಿಂಗಳು.…

9 hours ago

ಓದುಗರ ಪತ್ರ: ದಸರಾ ಮಹೋತ್ಸವ ಸರಳವಾಗಿರಲಿ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಮ್ಮ ನಾಡಿನ ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ…

9 hours ago