ಎಡಿಟೋರಿಯಲ್

ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದಕ್ಕಲು ಕೃಷಿಕರ ಮಾರಾಟ ಸಂಘಗಳ ರಚನೆ ಅತ್ಯಗತ್ಯ

ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲವೆಂಬುದು ಸಾರ್ವಕಾಲಿಕ ದೂರು. ರೈತರು ರಾಜಕೀಯವಾಗಿ ಸಂಘಟಿತರಾದಂತೆ ಸಹಕಾ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ಸಂಘಟಿತರಾಗಲಿಲ್ಲ. ಒಂದು ವೇಳೆ ಸಂಘಟಿತರಾಗಿದ್ದರೆ ರೈತರೇ ತಮ್ಮ ಉತ್ಪನ್ನಗಳ ಬೆಲೆ ನಿರ್ಧರಿಸುವ ಸಾಮರ್ಥ್ಯ ದಕ್ಕುತ್ತಿತ್ತು. ಅಂತಹದ್ದೊಂದು ಪ್ರಾತ್ಯಕ್ಷಿಕೆ ಮಾದರಿಯಾಗಿ ಮಂಡ್ಯದಲ್ಲೊಂದು ಕೃಷಿಕರ ಸಂಘ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ರೈತರೆಲ್ಲ ಸೇರಿ ಮಂಡ್ಯದಲ್ಲಿ ಕಟ್ಟಿರುವ ಸಂಸ್ಥೆ ‘ಬಯಲು ಸೀಮೆ ಸಾವಯವ ಕೃಷಿಕರ ಸಂಘ’. ರೈತರು ಮತ್ತು ಗ್ರಾಹಕರ ನಡುವೆ ಆರೋಗ್ಯಕರ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಸ್ಯ ಜೀನೋಮ್ ಸಂರಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿವಳ್ಳಿ ಬೋರೇಗೌಡ, ಕೃಷಿ ಪಂಡಿತ ರಾಜ್ಯಪ್ರಶಸ್ತಿ ವಿಜೇತ ಸಿ.ಪಿ.ಕೃಷ್ಣ, ರಾಜ್ಯ ಪ್ರಶಸ್ತಿವಿಜೇತ ಮಾರಗೌಡನಹಳ್ಳಿ ಶಿವಣ್ಣಗೌಡ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಶಿವರಾಮೇಗೌಡ ಕೀಲಾರ, ಸೂಪಸ್ಟಾರರ್ ಖ್ಯಾತಿಯ, ರಾಜ್ಯಪ್ರಶಸ್ತಿ ವಿಜೇತ ಮರಿದೇಶಿಗೌಡ, ಗೋ ಸಂರಕ್ಷಣೆಯಲ್ಲಿ ರಾಜ್ಯ ಪ್ರಶಸ್ತಿಗಳಿಸಿದ ಎಂ.ಟಿ.ವೆಂಕಟೇಶ್, ಸಾವಯವ ಬೆಲ್ಲ ತಯಾರಿಕೆಯಲ್ಲಿ ಖ್ಯಾತರಾದ ಸುಂಕಾತೊಣ್ಣೂರು ದೇವೇಗೌಡ- ಹೀಗೆ ೫೫ ರೈತರು ಒಂದೆಡೆ ಸೇರಿ ಸಂಘಟಿಸಿರುವ ಸಂಸ್ಥೆ ಬಯಲು ಸೀಮೆ ಸಾವಯವ ಕೃಷಿಕರ ಸಂಘ. ಸಾವಯವ ಪದ್ದತಿಯಲ್ಲಿ ಬೆಳೆದ ಉತ್ಪನ್ನಗಳನ್ನು ತಮ್ಮ ಜಮೀನಿನಿಂದ ನೇರ ಗ್ರಾಹಕರಿಗೆ ತಲುಪಿಸುತ್ತಿದೆ.

ಈ ರೈತರೆಲ್ಲ ತಮ್ಮ ತಾಕುಗಳಲ್ಲಿ ಸಾವಯವ ಪದ್ದತಿಯಲ್ಲೇ ಕೃಷಿ ಕೈಗೊಂಡು, ಹಗಲು ರಾತ್ರಿ ತಮ್ಮ ಶ್ರಮವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕನಸು ಕಂಡವರು. ರಾಸಾಯನಿಕಗಳನ್ನು ಬಳಸಿ ಬೆಳೆದ ಆಹಾರೋತ್ಪನ್ನಗಳನ್ನು ಬಣ್ಣಬಣ್ಣದ ಆಕರ್ಷಕ ಪ್ಯಾಕುಗಳಲ್ಲಿರಿಸಿ ಗ್ರಾಹಕರನ್ನು ಸೆಳೆಯುವ ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳಿಗೆ ಪರ್ಯಾಯವಾಗಿ ಅಷ್ಟೇ ಸಮರ್ಥವಾಗಿ ಮಾರುಕಟ್ಟೆ ಸೃಷ್ಟಿಸುವ ಗುರಿ ಕೃಷಿಕರ ಸಂಘದ್ದು.
ಈ ಸಾವಯವ ಕೇಂದ್ರದಲ್ಲಿ ನಮ್ಮ ಸಾಂಪ್ರದಾಯಿಕ ಅಕ್ಕಿತಳಿಗಳಾದ ರಾಜಮುಡಿ, ಕೆಂಪಕ್ಕಿ, ದೊಡ್ಡಭೈರನೆಲ್ಲು, ಎಚ್‌ಎಂಟಿ, ಕೆಂಪುಸಣ್ಣ, ಸಿದ್ದಸಣ್ಣ, ಗಂಧಸಾಲೆ ಅಕ್ಕಿಗಳು, ಸಾವಯವ ಬೆಲ್ಲದ ಪುಡಿ, ಅಚ್ಚು, ಜೇನುತುಪ್ಪ, ಹರಳೆಣ್ಣೆ, ಹುಚ್ಚೆಳ್ಳು ಎಣ್ಣೆ, ತುಪ್ಪ, ಬೆಣ್ಣೆ, ಜೀರಿಗೆ ಮುಂತಾದವು ಲಭ್ಯ. ಪ್ರತಿ ಶುಕ್ರವಾರ ಸಂಜೆ ಸಾವಯವ ಸೊಪ್ಪು ತರಕಾರಿಗಳ ಸಂತೆಯೂ ಪ್ರಾರಂಭವಾಗಿದೆ.

ತಾವು ಬೆಳೆದ ಆರೋಗ್ಯಪೂರ್ಣವಾದ ಆಹಾರವನ್ನು ತಾವೂ ಬಳಸಿ ಬಳಿಕ ಗ್ರಾಹಕರಿಗೆ ನೀಡಬೇಕೆಂಬುದು ಈ ಸಂಘದ ಮೊದಲ ಧ್ಯೇಯ. ಇಲ್ಲೊಂದು ಶಿಸ್ತನ್ನು ರೂಢಿಸಿಕೊಂಡಿದ್ದಾರೆ. ಪ್ರತಿತಿಂಗಳೂ ಒಬ್ಬೊಬ್ಬರ ಜಮೀನಿನಲ್ಲಿ ಸಭೆ ಸೇರುವುದು, ವ್ಯಾಪಾರ ಕೇಂದ್ರದಲ್ಲಿ ಯಾವ ಪದಾರ್ಥಕ್ಕೆ ಹೆಚ್ಚು ಬೇಡಿಕೆ ಇದೆ, ಯಾವುದಕ್ಕೆ ಯಾರು ಆಸಕ್ತಿವಹಿಸಿಲ್ಲ, ಕಾರಣ ಏನು ಎಂಬುದನ್ನು ಚರ್ಚಿಸಿ ವಿಚಾರ ಮಂಥನ ನಡೆಸಲಾಗುತ್ತದೆ. ಮಾತ್ರವಲ್ಲ ದಿನಕ್ಕೆ ಇಬ್ಬರಂತೆ ಈ ಮಾರಾಟ ಕೇಂದ್ರದಲ್ಲಿದ್ದು, ನಿರ್ವಹಣೆ ನೋಡಿಕೊಳ್ಳುತ್ತಾರೆ. ‘

ನಾವು ನೈಸರ್ಗಿಕ ಹಾಗೂ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಮಾಡಿದ ಸಾಧನೆ ಭವಿಷ್ಯದ ಪ್ರಜೆಗಳ ಆರೋಗ್ಯ ದೃಷ್ಠಿಯಿಂದ ಅನಿವಾರ್ಯವಾದುದು’ ಎನ್ನುತ್ತಾರೆ ಶಿವಳ್ಳಿ ಬೋರೇಗೌಡರು. ಜನ ಹೆಚ್ಚೆಚ್ಚು ರಾಸಾಯನಿಕಯುಕ್ತ ಆಹಾರಗಳನ್ನು ಬಳಸುವುದರಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಈಗಲೂ ನಾವು ಎಚ್ಚೆತ್ತುಕೊಳ್ಳದಿರುವುದು ದುರಂತ. ಒಂದು ಕೆಜಿ ಅಡುಗೆ ಎಣ್ಣೆ ತಯಾರಿಗೆ ಸುಮಾರು ನಾಲ್ಕು ಕೆಜಿ ಕಡ್ಲೇಕಾಯಿ ಬೀಜ ಬೇಕು. ಆದರೆ ಇಂದು ಮಾರುಕಟ್ಟೆಯಲ್ಲಿ ೧೭೫ ರೂ.ಗೆ ಒಂದು ಕೆಜಿ ಅಡುಗೆ ಎಣ್ಣೆ ಸಿಗುತ್ತಿದೆ ಎಂದರೆ ಅದರಲ್ಲಿ ಏನೇನೆಲ್ಲ ರಾಸಯನಿಕ ಬಳಸಬಹುದು? ಇದನ್ನು ಗ್ರಾಹಕರು ಅರ್ಥ ಮಾಡಿಕೊಳ್ಳುತ್ತಿಲ್ಲ. ತಕ್ಷಣದ ಲಾಭ ನೋಡುತ್ತಾರೆಯೇ ಹೊರತು ಅಮೂಲ್ಯವಾದ ಆರೋಗ್ಯದ ಬಗ್ಗೆ ಚಿಂತಿಸುತ್ತಿಲ್ಲ ಎಂಬ ಕಾಳಜಿ ಅವರದು.

ಒಬ್ಬ ರೈತ ಎಲ್ಲವನ್ನೂ ಬೆಳೆಯುವುದಿಲ್ಲ. ಹಾಗಾಗಿ ಯಾರು ಏನು ಬೆಳೆಯುತ್ತಾರೋ ಅದನ್ನು ಈ ಮಾರಾಟ ಕೇಂದ್ರಕ್ಕೆ ಸರಬರಾಜು ಮಾಡುತ್ತಾರೆ. ಇಲ್ಲಿ ಅವುಗಳನ್ನು ವರ್ಗೀಕರಿಸಿ ಅದರ ದರವನ್ನೂ ನಮೂದಿಸಿಟ್ಟಿದ್ದಾರೆ. ಬಹುತೇಕ ಕಡೆ ಸಾವಯವ ಉತ್ಪನ್ನಗಳೆಂಬ ಹೆಸರಿನಲ್ಲಿ ಗ್ರಾಹಕರಿಗೆ ವಂಚನೆಯಾಗುತ್ತಿರುವುದನ್ನು ಕಾಣಬಹುದು. ರೈತ ಅನ್ನದಾತನೇ ಹೊರತು ವಂಚಕನಲ್ಲ. ಆದರೆ, ರೈತರು ಮತ್ತು ಗ್ರಾಹಕರ ನಡುವಿನ ದಲ್ಲಾಳಿಗಳು ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಆದ್ದರಿಂದ ನಮ್ಮ ಸಂಘದಿಂದ ನೇರ ಮಾರಾಟವಿದೆ. ಇದನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ಸಂಘಟಕರ ಕಳಕಳಿಯ ಮನವಿಯೂ ಹೌದು.

ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದಕ್ಕೆ ಕಾರಣ ಮಾರುಕಟ್ಟೆ ವಿಷಯದಲ್ಲಿ ರೈತರಲ್ಲಿ ಸಂಘಟನೆ ಇಲ್ಲದಿರುವುದು. ಈ ಹಂತದಲ್ಲಿ ಒಂದು ಸಹಕಾರಿ ಸಂಸ್ಥೆಯಂತೆ ಬೆಳೆದ ಬಯಲು ಸೀಮೆ ಸಾವಯವ ಕೃಷಿಕರ ಸಂಘವನ್ನು ರೈತರು ಮಾದರಿಯಾಗಿ ಪರಿಗಣಿಸಬೇಕಿದೆ. ಇಂತಹ ಮಾರಾಟ ಸಂಘಗಳು ಪ್ರತಿ ಗ್ರಾಮದಲ್ಲೂ ಪ್ರಾರಂಭವಾದರೆ, ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯಲು ಸಾಧ್ಯ. ಇಂತಹ ಪ್ರಯತ್ನಗಳು ಆರಂಭದಲ್ಲೇ ಯಶಸ್ವಿಯಾಗದೇ ಇರಬಹುದು. ಆದರೆ ದೀರ್ಘಾವಧಿಯಲ್ಲಿ ರೈತರ ಬೆಳೆಗೆ ನ್ಯಾಯಯುತ ಬೆಲೆ ದಕ್ಕಬೇಕಾದರೆ ಇಂತಹ ಸಂಘಗಳು ಅತ್ಯಗತ್ಯವಷ್ಟೇ ಅಲ್ಲ, ಅನಿವಾರ್ಯವೂ ಹೌದು. ಸರ್ಕಾರ ಇಂತಹ ರೈತ ಸಂಘಗಳನ್ನು ರಚಿಸಲು ಉತ್ತೇಜನ ನೀಡಬೇಕು.

andolana

Recent Posts

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ…

20 mins ago

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

56 mins ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

2 hours ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

2 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

18 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

20 hours ago