ಪಂಜಿನ ಕವಾಯತು ಮೈದಾನದಲ್ಲಿ ಆಕರ್ಷಿಸಿದ ಡ್ರೋನ್ ಶೋ, ಟೆಂಟ್ ಪೆಗ್ಗಿಂಗ್
ಮೈಸೂರು: ಮೈ ಜುಮ್ಮೆನಿಸುವಂತೆ ಮಾಡಿದ ಆಕರ್ಷಕ ಡ್ರೋನ್ ಶೋ, ದೇಶಪ್ರೇಮ ಉಕ್ಕಿಹರಿಸಿದ ಪಥಸಂಚಲನ, ಮನಸ್ಸಿಗೆ ಮುದ ನೀಡಿದ ನೃತ್ಯ ಪ್ರದರ್ಶನ, ಬೆಂಕಿಯೊಂದಿಗಿನ ಸರಸ, ಸೌಂಡ್ ಅಂಡ್ ಲೈಟ್ ಬೆಳಕಿನ ಚಿತ್ತಾರ…
ನಾಡಹಬ್ಬ ದಸರಾ ಅಂಗವಾಗಿ ಬುಧವಾರ ರಾತ್ರಿ ಬನ್ನಿಮಂಟಪದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ನೋಡುಗರ ಮನ ಸೂರೆಗೊಳಿಸಿತು. ಕ್ರೀಡಾಂಗಣದಲ್ಲಿ ಕಿಕ್ಕಿರಿದ್ದು ನೆರೆದಿದ್ದ ೩೦ ಸಾವಿರಕ್ಕೂ ಹೆಚ್ಚು ಮಂದಿಯನ್ನು ವಿಸ್ಮಯ ಲೋಕಕ್ಕೆ ಕರೆದೊಯಿತು. ಎರಡೂವರೆ ಗಂಟೆಗಳ ಕಾಲ ನಡೆದ ಸಾಹಸ, ನೃತ್ಯ, ಸಂಗೀತ ಮತ್ತು ಡ್ರೋನ್ ಪ್ರದರ್ಶನ ಜನರನ್ನು ಮೂಕವಿಸ್ಮಿತಗೊಳಿಸಿದವು.
ರಾತ್ರಿ ೮.೦೬ಕ್ಕೆ ಆರಂಭವಾದ ಕಾರ್ಯಕ್ರಮ ರಾತ್ರಿ ೧೦ರವರೆಗೆ ನಡೆಯಿತು. ರಾಷ್ಟ್ರಗೀತೆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಯಿ ಅವರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ೧೮ ತುಕಡಿಗಳ ಪರಿವೀಕ್ಷಣೆಯನ್ನು ತೆರೆದ ಜೀಪ್ನಲ್ಲಿ ವೀಕ್ಷಣೆ ಮಾಡಿದರು. ಈ ವೇಳೆ ಕುಶಾಲುತೋಪು ಹಾಗೂ ಮೂರು ಬಾರಿ ಒಟ್ಟು ೨೧ ಸಿಡಿಮದ್ದು ಸಿಡಿಸಲಾಯಿತು.
ನಂತರ ನಡೆದ ಆಕರ್ಷಕ ಪಥಸಂಚಲನ ನೆರೆದಿದ್ದವರಲ್ಲಿ ದೇಶಪ್ರೇಮ ಉಕ್ಕಿ ಹರಿಸಿತು. ಅಶ್ವಾರೋಹಿ ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಕೆಎಸ್ಆರ್ಪಿ ತುಕಡಿಗಳು, ಗೃಹರಕ್ಷಕ ದಳ, ಎನ್ಸಿಸಿ, ಸೇವಾದಳ ಒಳಗೊಂಡಂತೆ ೧೮ ತಂಡಗಳು ಮುಖ್ಯ ದಳಪತಿ ಎಂ.ಜಿ. ನಾಗಾರಜ್ ಅವರ ನೇತೃತ್ವದಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡವು.
ಸೌಂಡ್ ಮತ್ತು ಲೈಟ್: ನಾನಾ ಬಣ್ಣದ ಬೆಳಕಿನ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಹಿಂದಿಯ ಹಾಡುಗಳು ಮತ್ತು ತಬಲ ವಾದ ಗಳು ಬೆಳಕಿನ ನೃತ್ಯಕ್ಕೆ ಹಿಮ್ಮೇಳವಾಗಿತ್ತು. ಡಿಎನ್ಎ ಎಂಟರ್ಟೇನ್ಮೆಂಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೨೩೫ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ’ಕನ್ನಡ ನಾಡಿನ ಜೀವ ನದಿ, ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಇವನೇ ರಾಜಕುಮಾರ, ಸರ ಸರ ಬಂತು ದಸರಾ ಎಂಬ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಎಲ್ಲರ ಗಮನಸೆಳೆದರು.
ಕೊನೆಯಲ್ಲಿ ಆಕರ್ಷಕ ಪಂಜಿನ ಕವಾಯತು ನಡೆಯಿತು. ಬೆಂಗಳೂರಿನ ತರಬೇತಿಯಲ್ಲಿ ನಿರತರಾಗಿರುವ ೩೦೦ ಪೊಲೀಸ್ ಪ್ರಶಿಕ್ಷಣಾರ್ಥಿಗಳು ಸಂಗೀತದ ತಾಳಕ್ಕೆ ತಕ್ಕಂತೆ ಬೆಂಕಿಯೊಂದಿಗೆ ಸರಸವಾಡಿದರು. ಸುಸ್ವಾಗತ’, ಕರ್ನಾಟಕ ಪೊಲೀಸ್’, ವೆಲ್ಕಂ ಟು ಆಲ್’, ‘ನಮ್ಮ ಮೈಸೂರು, ನಮ್ಮ ಹೆಮ್ಮೆ’, ‘ಜೈ ಚಾಮುಂಡಿ’, ‘೭೫ ಇಂಡಿಪೆಂಡೆನ್ಸ್ ಡೇ’ ಬರಹಗಳನ್ನು ಪಂಜಿನ ಮೂಲಕ ಮೂಡಿಸಿದರು. ೮ ಬಗೆಯ ವ್ಯಾಯಾಮವನ್ನು ಪ್ರದರ್ಶಿಸಲಾಯಿತು. ಅಂತಿಮವಾಗಿ ಆಕರ್ಷಕ ಬಾಣ ಬಿರುಸಿನೊಂದಿಗೆ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಹೊಸ ಅನುಭವ ನೀಡಿದ ಚಂಡೆ, ವಾದ್ಯಗಳ ನರ್ತನ!
ವಾದ್ಯ ಕಲಾವಿದರ ಚಂಡೆ ಹಾಗೂ ವಾದ್ಯಗಳ ನರ್ತನ ಕಾರ್ಯಕ್ರಮ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿತು. ೬೦ ಕ್ಕೂ ಹೆಚ್ಚು ಕಲಾವಿದರು ತಾಳ, ಮದ್ದಳೆ, ಚಂಡೆ ಸೇರಿದಂತೆ ಅನೇಕ ವಾದ್ಯಗಳನ್ನು ಏಕಕಾಲದಲ್ಲಿ ಮೊಳಗಿಸುವ ಮೂಲಕ ಪ್ರೇಕ್ಷಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯದ್ದರು.
ಟೆಂಟ್ ಪೆಗ್ಗಿಂಗ್
ಮೈಸೂರಿನ ಅಶ್ವಾರೋಹಿ ಪಡೆಯ ಸಿಬ್ಬಂದಿ ೧೨ ಕುದುರೆಗಳ ಜತೆ ನಡೆಸಿಕೊಟ್ಟ ಟೆಂಟ್ ಪೆಗ್ಗಿಂಗ್ ಸಾಹಸ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿತು. ನೆಲದಲ್ಲಿ ನೆಟ್ಟಿದ್ದ ಉರಿಯುವ ಗೂಟಗಳನ್ನು ನಾಗಾಲೋಟದಿಂದ ಕುದುರೆ ಸವಾರಿ ಮಾಡುತ್ತಾ ಬಂದು ಭರ್ಜಿಯಿಂದ ಮೇಲಕ್ಕೆತ್ತುವ ಸಾಹಸ ಎಲ್ಲರನ್ನು ರೋಮಾಂಚಗೊಳಿಸಿತು.
ಆಕರ್ಷಕ ಡ್ರೋನ್ ಶೋ
ಆಕಾಶದಲ್ಲಿ ಮೂಡಿದ ಬಣ್ಣ ಬಣ್ಣದ ಡ್ರೋಣ್ ಚಿತ್ತಾರಗಳು ನೋಡುಗರ ಮೈ ಜುಮ್ಮೆನಿಸಿತು. ಡಿಎನ್ಎ ಎಂಟರ್ಟೈನ್ಮೆಂಟ್ ವತಿಯಿಂದ ಹಮ್ಮಿಕೊಂಡಿದ್ದ ‘ಡ್ರೋನ್ ಶೋ’ ಸುಮಾರು ೧೦ ನಿಮಿಷಗಳ ನಡೆಯಿತು. ೨೫೦ಕ್ಕೂ ಹೆಚ್ಚು ಡ್ರೋನ್ಗಳು ಹಾರಾಡಿ ‘ಹ್ಯಾಪಿ ದಸರಾ, ಗಣೇಶನ ಮುಖ, ಅರಮನೆಯ ಚಿತ್ರ, ಮೈಸೂರು ಸಿಂಹಾಸನ, ವಾಲಗ, ಗಂಡಭೇರುಂಡ’ ಚಿತ್ರಗಳನ್ನು ಡ್ರೋನ್ ಮೂಲಕ ಬಾನಿನ ಅಂಗಳದಲ್ಲಿ ಮೂಡಿಸಿ ನೆರೆದಿದ್ದವರನ್ನು ಆಶ್ಚರ್ಯಚಕಿತರನ್ನಾಗಿಸಿತು.
ಸಾರ್ಥಕ ಬದುಕಿನ ಸಾಧಕ! ಗಹನ ಆರ್ಥಿಕ ಚಿಂತನೆಗಳನು ಎಳೆಎಳೆಯಾಗಿ ಬಿಡಿಸಿ ನೀಡಿದ ನಾಡ ಅಪ್ಪಟ ಆರ್ಥಿಕ ಚಿಂತಕ! ಶಿಷ್ಯರ ಮನದ…
ತೆಲಂಗಾಣದಲ್ಲಿ ೩೦,೦೦೦ ಕೆ.ಜಿ. ನಕಲಿ ಮಸಾಲೆ ಜಪ್ತಿಯಾಗಿರುವುದು ಕೇವಲ ಎಚ್ಚರಿಕೆಯಲ್ಲ ನಮಗಿದು ನೇರ ಬೆದರಿಕೆ! ಮಸಾಲೆ, ಹಾಲು, ಎಣ್ಣೆ ಹಾಗೂ…
ಮೈಸೂರು ಮಹಾನಗರ ಪಾಲಿಕೆಯು ಹೊರಾಂಗಣ ಸಂಗೀತ ವಾದ್ಯಗಳ ಜೋಡಣೆ ಎಂಬ ಹೆಸರಿನಲ್ಲಿ ಉದ್ಯಾನವನಗಳಲ್ಲಿ ಸಂಗೀತ ವಾದ್ಯಗಳನ್ನು ಜೋಡಿಸುವ ವಿನೂತನ ಪ್ರಯೋಗವನ್ನು…
ಶಿವಾಜಿ ಗಣೇಶನ್ ಅವರ ವಾರದ ಅಂಕಣ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೇಶದಲ್ಲಿ ದಿಢೀರನೆ ಹುಟ್ಟಿಕೊಂಡ ಕಾಕ್ರೋಚ್ ಜನತಾ…
ಬಿ.ಎಸ್.ವಿನಯ್ ಇಲ್ಲಿಯವರೆಗೆ ನಮ್ಮಂತಹ ಅಂಕಲ್ -ಆಂಟಿಗಳು ಜೆನ್ ಝೀಗಳ ಬಗ್ಗೆ ಒಳ್ಳೆಯ ಮಾತಾಡಿದ್ದಕ್ಕಿಂತ ಮೂಗು ಮುರಿದದ್ದೇ ಹೆಚ್ಚು. ಈ ಹುಡುಗರಿಗೆ…
ಸ್ವಾಮಿ ಪೊನ್ನಾಚಿ ನಾನು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳುವ ಕಾಲಕ್ಕೆ ಹೆಚ್ಚು ಕಡಿಮೆ ಚಳವಳಿಗಳ ಕಾವು ನಿಂತೇ ಹೋಗಿತ್ತು. ಜೋರು ಗಾಳಿ…