ಜಿಲ್ಲೆಗಳು

ರೈತರ ಆತ್ಮಹತ್ಯೆ ಬೇಸಾಯದ ಬದುಕಿನ ತಲ್ಲಣಗಳ ಪ್ರತಿರೂಪ : ರೂಪ ಹಾಸನ

ಟಿ.ಜಿ.ಎಸ್.ಅವಿನಾಶ್ ವಿರಚಿತ ‘ಬೆಳಕಿನ ಬೇಸಾಯ’ ಪುಸ್ತಕ ಬಿಡುಗಡೆ

ಸಾಮ್ರಾಜ್ಯಗಳನ್ನು  ಕಟ್ಟಲು ತಳಹದಿ ಹಾಕಿಕೊಟ್ಟಿರುವುದು ಕೃಷಿ. ಅದನ್ನು ಲಾಭದಾಯಕ ಮಾಡಲು ನಿಸರ್ಗದೊಂದಿಗೆ ನಡೆಯಬೇಕು. ನಿಸರ್ಗದೊಂದಿಗೆ ಅನುಸಂಧಾನ ಮಾಡಬೇಕೇ ಹೊರತು ಅದರೊಂದಿಗೆ ಯುದ್ಧಕ್ಕೆ ಇಳಿಯಬಾರದು.

-ಡಾ.ಬಂಜಗೆರೆ ಜಯಪ್ರಕಾಶ್

ಮೈಸೂರು: ದೇಶದ ಶೇ.೬೦ರಷ್ಟು ಮಂದಿ ತೊಡಗಿರುವ ಕೃಷಿ ಕ್ಷೇತ್ರ ಅವನತಿಯ ಹಾದಿಯಲ್ಲಿರುವ ಧಾರುಣತೆಯನ್ನು ಕಾಣುತ್ತಿದ್ದೇವೆ ಎಂದು ಸಾಹಿತಿ ರೂಪ ಹಾಸನ ಕಳವಳ ವ್ಯಕ್ತಪಡಿಸಿದರು.

ನಗರದ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಹೊರತಂದಿರುವ ಟಿ.ಜಿ.ಎಸ್.ಅವಿನಾಶ್ ವಿರಚಿತ ‘ಬೆಳಕಿನ ಬೇಸಾಯ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಯಲ್ಲಿ ರಚನಾತ್ಮಕ, ಕ್ರಿಯಾಶೀಲ ಹಾಗೂ ಪ್ರಕೃತಿಗೆ ಹತ್ತಿರವಾದ ಪ್ರಯೋಗಗಳನ್ನು ಇಂದು ಮಾಡಬೇಕು. ಪ್ರಕೃತಿ ಧರ್ಮವನ್ನು ಅರಿಯಬೇಕು; ಅನುಸರಿಸಬೇಕು. ನಮ್ಮೊಂದಿಗಿರುವ ಜೀವವೈವಿಧ್ಯವನ್ನೂ ತಿಳಿದುಕೊಳ್ಳಬೇಕು. ಪ್ರಾಕೃತಿಕ ಸಂರಚನೆ ಇರುವುದು ನಮಗಾಗಿ ಮಾತ್ರವೇ ಎಂದು ಭಾವಿಸಿದ್ದೇವೆ. ಆದರೆ, ಮನುಷ್ಯನು ಜೀವ ವಿಕಸನ ಪ್ರಕ್ರಿಯೆಯಲ್ಲಿ ಈಚೆಗೆ ಬಂದವರು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಮಕ್ಕಳಿಗೆ ಪ್ರಕೃತಿಯ ಬಗ್ಗೆ ಅರ್ಥ ಮಾಡಿಸಬೇಕು. ಇಲ್ಲದಿದ್ದರೆ ಮನುಷ್ಯ ಸಂತತಿಗೆ ಹೆಚ್ಚು ಉಳಿಗಾಲವಿಲ್ಲ ಎಂದರು.
ನಾವಿಂದು ಪರಿಸರದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ರೈತರ ಆತ್ಮಹತ್ಯೆ ಪ್ರಕರಣಗಳು ಬೇಸಾಯದ ಬದುಕಿನ ತಲ್ಲಣಗಳ ಪ್ರತಿರೂಪವಾಗಿವೆ. ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪತೀತ್ಯವು ಕೃಷಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು. ಪ್ರಕೃತಿಗೆ ಹತ್ತಿರವಾದ ನೈಸರ್ಗಿಕ ಮೂಲದ ಕೃಷಿಯನ್ನು ಬೆಂಬಲಿಸುತ್ತೇವೆ ಎಂಬುದನ್ನು ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ತಿಳಿಸಬೇಕು. ಸಾಮುದಾಯಿಕ ಹಾಗೂ ಸಂಘಟನಾತ್ಮಕ ಕೃಷಿ ಪ್ರಜ್ಞೆ ಬೆಳೆಸಬೇಕು. ಎಲ್ಲೆಲ್ಲಿ ಸರ್ಕಾರಿ ಜಾಗ ಲಭ್ಯವಿದೆಯೋ ಅಲ್ಲಿ ‘ಬೆಳಕಿನ ಬೇಸಾಯ’ ಪ್ರಯೋಗಗಳನ್ನು ಮಾಡಬೇಕು. ಇದಕ್ಕೆ ಗ್ರಾಮ ಪಂಚಾಯಿತಿಗಳ ಮೂಲಕ ಸರ್ಕಾರ ಬೆಂಬಲ ನೀಡಬೇಕು. ಇದಕ್ಕೆ ಬೆಳಕು ತೋರುವಲ್ಲಿ ‘ಬೆಳಕಿನ ಬೇಸಾಯ’ ಕೃತಿಯು ಸಹಕಾರಿಯಾಗಿದೆ ಎಂದು ಹೇಳಿದರು.

ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕೃಷಿಯು ಸುಲಭವಲ್ಲ. ವಿಪರೀತ ತಾಳ್ಮೆ ಮತ್ತು ಶ್ರಮವನ್ನು ಬೇಡುತ್ತದೆ. ಇದಕ್ಕಾಗಿ ದೃಢ ನಿಶ್ಚಯವೂ ಇರಬೇಕಾಗುತ್ತದೆ. ನಾವು ನಿಸರ್ಗದ ಚಕ್ರವರ್ತಿಗಳೂ ಅಲ್ಲ, ಸಾಮ್ರಾಟರೂ ಅಲ್ಲ. ಅದರ ಒಂದು ಭಾಗವಷ್ಟೆ. ಅನ್ನವನ್ನು ಚಿನ್ನ ಮಾಡುವ ದುರಾಸೆ ಸಲ್ಲದು. ಪ್ರಕೃತಿಯಲ್ಲಿರುವ ಎಲ್ಲವನ್ನೂ ದೇವರೆಂದು ಭಾವಿಸಬೇಕು ಎಂದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರೈತರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಒದಗಿಸುವ ಕೆಲಸ ನಡೆಯಬೇಕಿದೆ ಎಂದರು.

ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, ಬೇಸಾಯದ ಮೇಲೆ ಹಲವು ವಿಷಯಗಳಲ್ಲಿ ಬೆಳಕು ಚೆಲ್ಲುವ ಕೆಲಸವನ್ನು ಬೆಳಕಿನ ಬೇಸಾಯ ಕೃತಿಯು ಮಾಡಿದೆ ಎಂದು ತಿಳಿಸಿದರು.

ಲೇಖಕ ಟಿ.ಜಿ.ಎಸ್.ಅವಿನಾಶ್, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ಪತ್ರಕರ್ತ ಡಿ.ಆರ್.ಅಶೋಕ್ ರಾಮ್, ಹಿರಿಯ ಸಾಹಿತಿ ದೇವನೂರ ಮಹಾದೇವ, ಪ್ರೊ.ಸುಮಿತ್ರಾ ಬಾಯಿ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು.

 

andolanait

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಸತ್ಯದ ಆರಾಧಕ ಮೌನವನ್ನು ಅವಲಂಬಿಸುವುದು ಅವಶ್ಯಕ

ನಾನು ಶಾಕಾಹಾರಿ ಮಂಡಲಿಯ ಕಾರ್ಯಕಾರಿ ಸಮಿತಿಯ ಸದಸ್ಯನಾಗಿ ಆರಿಸಲ್ಪಟ್ಟೆನು. ಆದರ ಪ್ರತಿ ಯೊಂದು ಸಭೆಗೂ ನಾನು ತಪ್ಪದೆ ಹಾಜರಾಗುತ್ತಿದ್ದೆ. ಆದರೆ…

7 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 22 ಶನಿವಾರ  

7 hours ago

ಧಾವಂತ ಬದುಕಿಗೆ ಹೊಸ ಚೈತನ್ಯ ನೀಡುವ ಅರವಟ್ಟಿಗೆ

ಸಾಮಾಜಿಕ ಕಳವಳಿಯ ನೆಲೆಯಲ್ಲಿ ಮೂಡಿರುವ ಕಥಾ ಸಂಕಲನ ಹೆಚ್.ಎಸ್.ಸಿದ್ದಮಲ್ಲಿಕಾರ್ಜುನಸ್ವಾಮಿ, ಹುಂಡೀಪುರ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರ ಹೊಸ ಕೃತಿ ‘ಅರವಟ್ಟಿಗೆ’…

9 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧೀಜಿ ಆತ್ಮಕತೆಯ ಶತಮಾನೋತ್ಸವಕ್ಕೆ ಆಂದೋಲನ ಕೈಜೋಡಿಸಿರುವುದು ಐತಿಹಾಸಿಕ

ಪ್ರೊ. ಜಿ. ಬಿ. ಶಿವರಾಜು, ಟ್ರಸ್ಟಿ, ಕಸ್ತೂರ ಬಾ ಗಾಂಧಿ ಆಶ್ರಮ ಗಾಂಧೀಜಿ ಆತ್ಮಕತೆ ‘ಸತ್ಯದೊಡನೆ ನನ್ನ ಅನ್ವೇಷಣೆ’ಗೆ ೧೦೦…

9 hours ago

ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆಯಾದರೆ ಮಾತ್ರ ಎಸ್‌ಸಿ,ಎಸ್‌ಟಿ ಕಾಯ್ದೆ ಅನ್ವಯ ; ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಸಾರ್ವಜನಿಕರ ವೀಕ್ಷಣೆಗೆ ಒಳಪಡುವ ಸ್ಥಳದಲ್ಲಿ ಜಾತಿ ನಿಂದನೆ ನಡೆದಿರುವುದು ಸಾಬೀತಾಗದಿದ್ದರೆ, ಅದನ್ನು ಪರಿಶಿಷ್ಟ…

23 hours ago

ಆರೋಪದಿಂದ ಮುಕ್ತನಾಗಿ ಹೊರಬರುತ್ತೇನೆ : ಸಚಿವ ನಾಗೇಂದ್ರ ವಿಶ್ವಾಸ

ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ದುರುಪಯೋಗವಾಗಿದೆ ಎಂದು ಹೇಳಲಾಗಿದ್ದ 187 ಕೋಟಿ ರೂಪಾಯಿ…

1 day ago