ಅಂಕಣಗಳು

ಇಂದು ಅಲ್ಲಿಗೆ ಹೋದರೆ ತೋಪು ಬಿಕೋ ಎನ್ನುತ್ತಿತ್ತು

• ಮಧುಕರ ಮಳವಳ್ಳಿ

ನಮ್ಮೂರು ಮಳವಳ್ಳಿಯಿಂದ ಸುಮಾರು 4 ರಿಂದ 5 ಮೈಲಿ ಇರುವ ಮಾರೇಹಳ್ಳಿ ಲಕ್ಷ್ಮೀ ನರಸಿಂಹ ದೇವಸ್ಥಾನದ ತೋಪಿಗೆ ಹೋಗಿದ್ದೆ.

ನನ್ನ ಬಾಲ್ಯದಲ್ಲಿ ಮದುವೆಯ ಸುಗ್ಗಿ ಅಂತ ಮಾರ್ಚಿನಿಂದ ಜೂನ್‌ವರೆಗೆ ಕರೆಯುತ್ತಿದ್ದರು. ಆ ಹಿಪ್ಪೆಮರಗಳ ನೆರಳಿನಲ್ಲಿ ಅದೆಷ್ಟು ಗಂಡು-ಹೆಣ್ಣು ದಂಪತಿಗಳಾಗಿದ್ದಾರೆ. ಹಿಂದೆ ಈಗಿನಂತೆ ಮದುವೆಗೆ ಛತ್ರಗಳು, ಕಲ್ಯಾಣಮಂಟಪಗಳು ಇರಲಿಲ್ಲ. ದಲಿತ ವರ್ಗದವರಿಗೆ ಅದು ವರವಾಗಿತ್ತು. ಮಕ್ಕಳಾದ ನಾವು ಶನಿವಾರ, ಭಾನುವಾರ ಮತ್ತು ಬೇರೆ ದಿನಗಳಲ್ಲಿ ಕದ್ದು ಅಲ್ಲಿಗೆ ಹೋಗುತ್ತಿದ್ದೆವು. ಕಾರಣ ಮದುವೆಯ ಊಟ. ವಿಶೇಷವಾಗಿ ಬೂಂದಿ, ರವೆ ಪಾಯಸ ಮತ್ತು ಶಾವಿಗೆ ಪಾಯಸ, ಯಾರಾದರೂ ಲಡ್ಡು ಮಾಡಿದ್ದರೆ, ಅದೇ ನಮ್ಮ ಮೊದಲ ಆದಕ್ಕೆ ಆಗಿತ್ತು… ಪಲಾವ್ ಮಾಡಿರುವ ಮದುವೆಯಲ್ಲಿ ನಮ್ಮ ಕೊನೆಯ ಊಟವೆಂದು ಫಿಕ್ಸ್ ಮಾಡುತ್ತಿದ್ದವು. ನಮ್ಮನ್ನು ಗಮನಿಸಿ, ನಮ್ಮ ಬಟ್ಟೆಗಳನ್ನು ನೋಡಿ, ಯಾವ ಜಾತಿ ಅಂತ ಕೇಳಿ, ನಾವು ಥಟ್ ಅಂತ ನಮ್ಮ ಜಾತಿ ಹೇಳಿದರೆ, ಅವರು ‘ಈಗ ಎದ್ದು ಹೋಗಿ ಆಮೇಲೆ ಬನ್ನಿ’ ಎನ್ನುವಾಗ ಆ ಪಲಾವ್ ಮೇಲೆಯೇ ನಮ್ಮ ಕಣ್ಣು. ಇದರ ನಡುವೆ ನಮ್ಮ ಕೇರಿಯ ಮದುವೆ ಆದರೆ ಮಜಾನೇ ಬೇರೆ. ಮಕ್ಕಳಾದ ನಮಗೆ ಆ ಪೆಟ್ರೋಮ್ಯಾಕ್ಸ್ ಬೆಳಕು ಅಚ್ಚರಿ ಉಂಟು ಮಾಡ್ತಾ ಇತ್ತು. ಆ ಹಿಪ್ಪೆಮರಗಳು ಸುಂದರತೆ ಮತ್ತು ಭಯ ಉಂಟುಮಾಡಿದರೆ, ಬ್ಯಾಟರಿಯನ್ನು ಬಳಸಿ ಹಾಕುತ್ತಿದ್ದ ಮೈಕ್‌ಸೆಟ್‌ನ ಹಾಡುಗಳು ನಮ್ಮನ್ನು ಪುಳಕಗೊಳಿಸುತ್ತಿದ್ದವು.

ಹಾಗೆ ಮುಂಜಾನೆ ಹೊತ್ತಿಗೆ ಸುತ್ತ ಮುತ್ತಲಿನ ಹಳ್ಳಿಯ ಜನರು ಎತ್ತಿನಗಾಡಿಯಲ್ಲಿ ಬಂದು ತಮಗೆ ಬೇಕಾದ ಜಾಗ ಗುರುತಿಸಿಕೊಂಡು, ಅಡುಗೆ ಶುರು ಮಾಡುತ್ತಿದ್ದರು. ಮತ್ತೆ ನಾವು ಗೆಳೆಯರು ಅವತ್ತಿನ ಮದುವೆಗಳನ್ನು ಲೆಕ್ಕಹಾಕಿ, ಸಂಜೆಗೆ ಆ ಒಲೆಗಳ ಇದ್ದಿಲು ನಮಗೆ ಎಂದು ಭಾಗಮಾಡಿಕೊಳ್ಳತ್ತಿದ್ದೆವು. ಎಲ್ಲ ಮುಗಿದು ಹೊರಟ ಮೇಲೆ ಆ ಕೆಂಡಗಳಿಗೆ, ಮಣ್ಣುಹಾಕಿ ಕೆಂಡ ಆರಿದ ನಂತರ ಇದ್ದಿಲನ್ನು ಚೀಲಗಳಲ್ಲಿ ತುಂಬಿಕೊಂಡು ಮಾಮೂಲಿ ಸಾಬರಿಗೆ ಮಾರಿ ಪಿಚ್ಚರ್ ನೋಡಲು ಹಣ ಹೊಂದಿಸಿಕೊಳ್ಳುತ್ತಿದ್ದೆವು. ಮತ್ತೆ, ಆ ಹಿಪ್ಪೆಬೀಜಗಳು ಕೂಡ ನಮ್ಮದೇ ಆಗಿತ್ತು.

ಮತ್ತೆ ಶ್ರಾವಣ ಶನಿವಾರಗಳಂದು ದೇವಸ್ಥಾನದಲ್ಲಿ ಕೊಡುವ ಪ್ರಸಾದದ ಕಡೆ ನಮ್ಮ ನಡೆ. ಆ ಪುಳಿಯೋಗರೆ, ಸಿಹಿ ಪೊಂಗಲ್, ಮೊಸರನ್ನದ ರುಚಿಯೇ ಬೇರೆ, ನವೆಂಬರ್ ಕಾಲದ ಕಾರ್ತಿಕ ಹುಣ್ಣಿಮೆಯಲ್ಲಿ ವಾರದಲ್ಲಿ ಒಂದೋ ಎರಡೋ ಮದುವೆಗಳು ಆಗುತ್ತಿದ್ದವು. ಹಿಪ್ಪೆ ಬೀಜಗಳನ್ನು ಆಯ್ದುಕೊಳ್ಳಲು ಹೋಗುತ್ತಿದ್ದ ನಾನು, ಗೆಳೆಯರಿಗೆ ವಿಷಯ ತಿಳಿಸಿ ಶಾಲೆಗೆ ಚಕ್ಕರ್ ಹಾಕಿ ಅಲ್ಲಿ ಊಟಕ್ಕೆ ಹಾಜರಾಗುತ್ತಿದ್ದೆವು. ಹಾಗೆಯೇ ಈ ತೋಪಿನಲ್ಲಿ ನಡೆಯುವ ಮತ್ತೊಂದು ವಿಶೇಷವೆಂದರೆ ಜೂನ್-ಜುಲೈ ತಿಂಗಳಿನಲ್ಲಿ ಜಾತ್ರೆ. ಇಡೀ ಜಾತ್ರೆಯ ಜನ ಒಟ್ಟಿಗೆ ಅ ಹಿಪ್ಪೆ ತೋಪಿನಲ್ಲಿ ಕುಳಿತು ಊಟ ಮಾಡುವುದೇ ಚಂದವಾಗಿತ್ತು. ಹೊಸ ಮದುವೆಯ ಜೋಡಿಗಳ ತಿರುಗಾಟ, ಮುಂದಿನ ಬಾರಿ ಮದುವೆ ಆಗಲು ಹವಣಿಸುತ್ತಿರುವ ಗಂಡು-ಹೆಣ್ಣುಗಳ ಕಳ್ಳ ಕಣೋಟಗಳು, ಮಕ್ಕಳು ಊಟ ಮುಗಿಸಿ ತಮಗೆ ಬೇಕಾದ ಆಟದ ಸಾಮಾನು ಖರೀದಿಗೆ ಕಾಯುವುದು ನಡೆದಿರುತ್ತಿತ್ತು.

ಆದರೆ ಆ ತೋಪು ಈಗ ಬದಲಾಗಿದೆ. ಸರ್ಕಾರದ ರೀತಿ-ನೀತಿಗಳಿಂದ ಈ ದೇವಸ್ಥಾನ ಪುರಾತತ್ವ ಇಲಾಖೆ ಸೇರಿ ಆ ತೋಪಿನಲ್ಲಿ ಯಾವುದೇ ಮದುವೆಗಳು ನಡೆಯುತ್ತಿಲ್ಲ. ಜಾತ್ರೆ ಕೂಡ ಆಕರ್ಷಣೆ ಕಳೆದುಕೊಂಡಿದೆ. ಆ ತೋಪಿನ ಸುತ್ತಲೂ ಕಬ್ಬಿಣದ ಬೇಲಿ ಹಾಕಲಾಗಿದೆ.
madhukaramalavalli@gmail.

andolanait

Recent Posts

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

4 mins ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

5 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

5 hours ago

ಓದುಗರ ಪತ್ರ: ಕಾವೇರಿ:ಆದೇಶ ನಿಷ್ಪಕ್ಷಪಾತವಾಗಿರಲಿ

ಸಿಡಬ್ಲ್ಯುಆರ್‌ಸಿ ಆದೇಶದಂತೆ ಪ್ರತಿದಿನ ೬,೦೦೦ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ಕರ್ನಾಟಕ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕಾಗುತ್ತದೆ. ಜಲಾಶಯದಲ್ಲಿ…

5 hours ago

ಮಲ್ಟಿಪ್ಲೆಕ್ಸ್: ಪ್ರಾದೇಶಿಕ ಭಾಷಾ ಚಿತ್ರಗಳಿಗೆ ಮಾರಕ ಹಂಚಿಕಾ ಸೂತ್ರ

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಅದೇಕೋ ಏನೋ ಕರ್ನಾಟಕಕ್ಕೂ ಇಲ್ಲಿರುವ ಮಲ್ಟಿಪ್ಲೆಕ್‌ಳಿಗೂ ಆಗಿ ಬರುತ್ತಿಲ್ಲ ಎನಿಸುತ್ತದೆ. ಅದು ಚಿತ್ರೋದ್ಯಮಕ್ಕೆ ಮಾತ್ರವಲ್ಲ,…

5 hours ago

ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಂದು ಪ್ರತಿಭಟನೆ

ಲಕ್ಷ್ಮೀಕಾಂತ್ ಕೊಮಾರಪ್ಪ ಸುದರ್ಶನ ಸರ್ಕಲ್‌ನಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ  ಸೋಮವಾರಪೇಟೆ: ಮಲೆನಾಡ ಭಾಗದ ರೈತರ ಬದುಕಿನ ಮೇಲೆ ತೂಗುಗತ್ತಿಯಂತೆ ಪರಿಣಮಿಸಿರುವ…

5 hours ago