BREAKING NEWS

ನಾಳೆ ಮತದಾನ : ಮೈಸೂರಲ್ಲಿ ಸಕಲ ಸಿದ್ಧತೆ

ಮೈಸೂರು : ನಾಳೆ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮತಗಟ್ಟೆ ಅಧಿಕಾರಿಗಳು ಮತ್ತು ಮೈಕ್ರೋ ಅಬ್ಸರ್ವರ್ ಗಳಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರದಿಂದ ಮಸ್ಟರಿಂಗ್ ಕೇಂದ್ರಕ್ಕೆ ಹೋಗಲು ಇಂದು ಬೆಳಿಗ್ಗೆ 6ಗಂಟೆಗೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಿಬ್ಬಂದಿಗಳು ವಾಹನದಲ್ಲಿ ತಮಗೆ ವಹಿಸಿದ ಮಸ್ಟರಿಂಗ್ ಕೇಂದ್ರಗಳಿಗೆ ತೆರಳಿದ್ದಾರೆ.

ಪುಷ್ಪ ವಿದ್ಯಾಸಂಸ್ಥೆ (ಪಿರಿಯಾಪಟ್ಟಣ), ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಕೃಷ್ಣರಾಜನಗರ), ಸಂತ ಜೋಸೆಫರ ಶಾಲೆ (ಹುಣಸೂರು), ಸಂತ ಮೇರಿಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ (ಎಚ್.ಡಿ.ಕೋಟೆ), ಬಾಲಕರ ಸರ್ಕಾರಿ ಪಿಯು ಕಾಲೇಜು (ನಂಜನಗೂಡು), ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜು (ಜೆ.ಎಲ್.ಬಿ ರಸ್ತೆ, ಮೈಸೂರು), ಮಹಾರಾಜ ಕಾಲೇಜು ಶತಮಾನೋತ್ಸವ ಭವನ (ಜೆ.ಎಲ್.ಬಿ ರಸ್ತೆ ಮೈಸೂರು), ಬೇಡನ್ ಪೊವೆಲ್ ಪಬ್ಲಿಕ್ ಸ್ಕೂಲ್ ಸೈಟ್ ಮತ್ತು ಗೈಡ್ಸ್ ಆವರಣ (ಜಿಲ್ಲಾಧಿಕಾರಿ ಕಚೇರಿ ಹಿಂಭಾಗ ಮೈಸೂರು), ಜೆಎಸ್ಎಸ್ ವಿದ್ಯಾಪೀಠ (ಊಟಿ ರಸ್ತೆ, ಮೈಸೂರು), ಜೆ.ಎಸ್.ಎಸ್ ಪ್ರಥಮ ದರ್ಜೆ ಕಾಲೇಜು (ದೇವಿರಮ್ಮನಹಳ್ಳಿ, ನಂಜನಗೂಡು ತಾಲ್ಲೂಕು) ಹಾಗೂ ವಿದ್ಯೋದಯ ಶಿಕ್ಷಣ ಸಂಸ್ಥೆ (ತಿ.ನರಸೀಪುರ) ಆವರಣದಿಂದ ವಾಹನಗಳು ಹೊರಡಲಿವೆ. ಈ ಸ್ಥಳಗಳು ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳೂ ಆಗಿವೆ. ಸಿಬ್ಬಂದಿ ತೆರಳಲು ಹಾಗೂ ಅಲ್ಲಿಂದ ಬರಲು ಒಟ್ಟು 481 ಕೆ.ಎಸ್.ಆರ್.ಟಿ.ಸಿ. ಬಸ್ 84 ಮ್ಯಾಕ್ಸಿ ಕ್ಯಾಬ್ ಹಾಗೂ 29 ಜೀಪ್ ಗಳ ವ್ಯವಸ್ಥೆ ಮಾಡಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 26,55,988 ಮಂದಿ ಮತ ಚಲಾಯಿಸಲು ಹಕ್ಕು ಪಡೆದಿದ್ದು, ಇದರಲ್ಲಿ 1,66,633 ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದಕ್ಕಾಗಿ 2,905 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಹಾಗೂ ಆಯಾ ವಿಧಾನಸಭೆ ಮತ ಕ್ಷೇತ್ರದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಲಭ್ಯವಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಅಂದರೆ ಮೇ 8ರ ಸಂಜೆ 6ರಿಂದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ನಂತರ ಆಯಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಚಾರಕರು ತಮ್ಮ ತಮ್ಮ ಕ್ಷೇತ್ರಗಳಿಗೆ ತೆರಳಿದ್ದಾರೆ.

ವೋಟಿಂಗ್ ಮಾಡಿದ ಬಳಿಕ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಈ ಅಳಿಸಲಾಗದ ಶಾಯಿಯನ್ನು ಮೈಸೂರಿನಿಂದ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ನಾಳೆಯ ಚುನಾವಣೆಗೂ ಮೈಸೂರಿನ ಕಪ್ಪು ಶಾಯಿ ರವಾನೆಯಾಗಿದೆ. ಚುನಾವಣಾ ಆಯೋಗದ ಬೇಡಿಕೆ ಹಿನ್ನೆಲೆ 1 ಲಕ್ಷದ 20 ಸಾವಿರ ಬಾಟಲ್ ಪೂರೈಕೆ ಮಾಡಲಾಗಿದೆ.

ಶಾಂತಿಯುತವಾಗಿ ಮತದಾನ ನಡೆಸುವ ಉದ್ದೇಶದಿಂದ ಮೇ 8 ರ ಸಂಜೆ 6 ರಿಂದ ಮೇ 10ರ ಮಧ್ಯರಾತ್ರಿವರೆಗೆ ಹಾಗೂ ಮತ ಎಣಿಕೆಯ ದಿನ (ಮೇ 13) ದಂದು ಒಣ ದಿನಗಳೆಂದು ಘೋಷಿಸಿದ್ದು, ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಗಿ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅದೇ ರೀತಿ ಮೇ 10ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ಮುಂದೂಡಲಾಗಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ತಕ್ಷಣ ಕ್ರಮ ವಹಿಸಲು ಸಿ-ವಿಜಿಲ್ ತಂತ್ರಾಂಶ ಹಾಗೂ ಸಹಾಯವಾಣಿ 24*7 ಕಾರ್ಯನಿರ್ವಹಿಸುತ್ತಿದೆ. ಸಿ – ವಿಜಿಲ್ ತಂತ್ರಾಂಶದಲ್ಲಿ ಈವರೆಗೆ ದಾಖಲಾದ ಒಟ್ಟು 186 ದೂರುಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆಗೆ 11 ಕ್ಷೇತ್ರಗಳಿಗೆ 14 ಟೇಬಲ್ ಗಳಂತೆ ಒಟ್ಟು 154 ಟೇಬಲ್ಗಳನ್ನು ಸಜ್ಜುಗೊಳಿಸಲಾಗಿದೆ. ಇದಲ್ಲದೆ ಅಂಚೆ ಮತ ಎಣಿಕೆಗೂ ಕ್ಷೇತ್ರಕ್ಕೆ 2-3 ಟೇಬಲ್ ಗಳನ್ನು ಅಳವಡಿಸಲಾಗುತ್ತಿದೆ.

ಮೈಸೂರು ಮಹಾರಾಣಿ ಕಲಾ ಕಾಲೇಜಿನಲ್ಲಿ ಮೇ 13ರ ಬೆಳಗ್ಗೆ 8 ರಿಂದ ಮತ ಎಣಿಕೆ ಕಾರ್ಯವನ್ನು ಕೈಗೊಳ್ಳಲಾಗುವುದು. ಪ್ರತಿ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕೊಠಡಿಯಲ್ಲಿ ಮತದಾನವಾದ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಗಾಗಿ 14 ಟೇಬಲ್ ಗಳನ್ನು, ಅಂಚೆ ಮತ ಪತ್ರಗಳ ಎಣಿಕೆಗಾಗಿ ಮತದಾನವಾದ ಅಂಚೆ ಮತ ಪತ್ರಗಳ ಪ್ರಮಾಣಕ್ಕನುಸಾರವಾಗಿ ಪ್ರತ್ಯೇಕವಾಗಿ ಮತ ಎಣಿಕೆ ಟೇಬಲ್ ಗಳನ್ನು ಹಾಗೂ ಸೇವಾ ಮತದಾರರ ಅಂಚೆ ಮತಪತ್ರಗಳ ಎಣಿಕೆಗಾಗಿ ಟೇಬಲ್ ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಮೈಸೂರು ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2,905 ಮತಗಟ್ಟೆಗಳಿಗೆ ಮೀಸಲು ಸೇರಿದಂತೆ 3,156 ಅಧ್ಯಕ್ಷಾಧಿಕಾರಿಗಳು, 3,250 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ 6,352 ಮತದಾನಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ. 600 ಕೇಂದ್ರ ಸರಕಾರದ ಅಧಿಕಾರಿ / ನೌಕರರನ್ನು ಮೈಕ್ರೋ ಅಬ್ಸರ್ವರ್ ಆಗಿ ನೇಮಕ ಮಾಡಲಾಗಿದೆ.

ಮತದಾನದ ಬಳಿಕ ಮೊಹರಾದ ವಿದ್ಯುನ್ಮಾನ ಮತಯಂತ್ರಗಳನ್ನು (ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್) ಹಾಗೂ ಚುನಾವಣಾ ಕಾಗದ ಪತ್ರಗಳನ್ನು ಡಿ. ಮಸ್ಟರಿಂಗ್ ಸ್ಥಳದಿಂದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಮನೆಯಿಂದಲೇ ಮತದಾನ ಮಾಡಲು 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರ ಮನೆ ಮನೆಗೆ ತೆರಳಿ ಮತದಾನ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ನೋಂದಾಯಿಸಿಕೊಂಡಿದ್ದ 2,806 ಮತದಾರರ ಪೈಕಿ 2,667 ಜನರು ಮತ ಚಲಾಯಿಸಿದ್ದಾರೆ. ಇನ್ನೂ 58 ಮಂದಿ ಗೈರಾಗಿದ್ದಾರೆ. ಇದರಲ್ಲಿ ಮತ ಚಲಾವಣೆಗೆ ನೋಂದಾಯಿಸಿಕೊಂಡಿದ್ದ 79 ಜನರು ಮೃತಪಟ್ಟಿದ್ದಾರೆ.

ಮತಗಟ್ಟೆಗೆ ಬರುವ ಮತದಾರರ ಆಧಾರ್ ಕಾರ್ಡ್, ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಪಾಸ್ ಬುಕ್, ಡ್ರೈವಿಂಗ್ ಲೈಸೆನ್ಸ್ ಪಾನ್ ಕಾರ್ಡ್, ಭಾವಚಿತ್ರ ಇರುವ ಪಿಂಚಣಿ ದಾಖಲೆ, ಸೇವಾ ಚೀಟಿ, ಅಧಿಕೃತ ಗುರುತಿನ ಚೀಟಿ ಸೇರಿದಂತೆ ಸುಮಾರು 11ಕ್ಕೂ ಹೆಚ್ಚು ಮತದಾರನ ಭಾವಚಿತ್ರವಿರುವ ದಾಖಲೆಗಳ ಪೈಕಿ ಯಾವುದಾದರು ಒಂದನ್ನು ತರಬಹುದಾಗಿದೆ.

lokesh

Recent Posts

ಮಳವಳ್ಳಿ | ಚಿರತೆ ಪ್ರತ್ಯಕ್ಷ ; ಆತಂಕ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…

7 hours ago

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

11 hours ago

ಮಲ್ಲಿಕಾರ್ಜುನ್‌ ಖರ್ಗೆ, ಎಂ.ನಾಗರಾಜ್‌ ಸಹಿತ ನಾಲ್ವರು ರಾಜ್ಯಸಭೆಗೆ ಅವಿರೋಧ ಆಯ್ಕೆ

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಧೈವಾರ್ಷಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆ ನಾಲ್ವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಎಂ.ಮಲ್ಲಿಕಾರ್ಜುನ…

12 hours ago

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 11ನೇ ನೀತಿ ಆಯೋಗದ ಸಭೆ

ಕರ್ನಾಟಕ ಸಿಎಂ ಡಿಕೆಶಿ ಸೇರಿ ಹಲವು ರಾಜ್ಯಗಳ ಸಿಎಂಗಳು ಭಾಗಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ರಾಷ್ಟ್ರ…

12 hours ago

ಕಾಂಗ್ರೆಸ್‌ ಶಾಸಕ ಷಡಕ್ಷರಿ ಆರೋಗ್ಯ ಸ್ಥಿತಿ ಗಂಭೀರ

ನವದೆಹಲಿ: ತಿಪಟೂರು ಕಾಂಗ್ರೆಸ್‌ ಶಾಸಕ ಕೆ.ಷಡಕ್ಷರಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಚಿವ ಸ್ಥಾನಕ್ಕಾಗಿ ಪಕ್ಷದ…

16 hours ago

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪತ್ತೆ: ಆರೋಗ್ಯ ಇಲಾಖೆಯಿಂದ ಹೈಅಲರ್ಟ್‌

ಕೋಯಿಕ್ಕೋಡ್:‌ ವಯನಾಡು, ಕೋಯಿಕ್ಕೋಡ್‌ನಲ್ಲಿ ಶಿಗೆಲ್ಲಾ ವೈರಸ್‌ ಸೋಂಕು ಹರಡಿರುವ ನಡುವೆ ನಿಫಾ ವೈರಸ್‌ ಪತ್ತೆಯಾಗಿದೆ. 43 ವರ್ಷದ ವ್ಯಕ್ತಿಯೊಬ್ಬರಿಗೆ ನಿಫಾ…

16 hours ago