BREAKING NEWS

ರಾಜ್ಯದಲ್ಲಿ ಇನ್ನೂ 3 ದಿನ ಮಳೆ

ಬೆಂಗಳೂರು : ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಹಿಂಗಾರು ಚುರುಕಾಗಿದ್ದು, ಶುಕ್ರವಾರದವರೆಗೆ ಮಳೆ ಮುಂದು ವರೆಯಲಿದೆ. ಆದರೆ, ಮಳೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ. ಹಿಂಗಾರು ಚೇತರಿಸಿಕೊಂಡಿದ್ದರೂ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಚದುರಿದಂತೆ ಅಲ್ಲಲ್ಲಿ ಮಾತ್ರ ಮಳೆಯಾಗಿದೆ.

ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಜಲಾಶಯಗಳ ಒಳ ಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಚದುರಿದಂತೆ ಕೆಲವೆಡೆ ಮಳೆಯಾಗಿದೆ.

ಸೋಮವಾರಕ್ಕೆ ಹೋಲಿಸಿದರೆ ನಿನ್ನೆ ಮಳೆ ಪ್ರಮಾಣ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಿನ್ನೆ ಮಧ್ಯಾಹ್ನವೇ ಮಳೆ ಆರಂಭಗೊಂಡು ಜನ ಜೀವನ ಅಸ್ತವ್ಯಸ್ತಗೊಳಿಸಿತ್ತು. ಬಹಳಷ್ಟು ಕಡೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಕೆರೆ-ಕಟ್ಟೆಗಳಿಗೂ ನೀರು ಬಂದಿದೆ.

ತೀವ್ರ ಬರಪರಿಸ್ಥಿತಿ ಎದುರಿಸುತ್ತಿದ್ದ ರಾಜ್ಯಕ್ಕೆ ಹಿಂಗಾರು ಚೇತರಿಕೆಯಾಗಿ ಮಳೆಯಾಗುತ್ತಿರುವುದು ಜನರಲ್ಲಿ ಅದರಲ್ಲೂ ರೈತರಿಗೆ ಖುಷಿ ತಂದಿದೆ. ಆದರೆ, ಕೊಯ್ಲಿಗೆ ಬಂದಿದ್ದ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಈ ಮಳೆಯಿಂದ ತೊಂದರೆಯಾಗಿದೆ. ಕೆಲವೆಡೆ ಅಗಾಗ್ಗೆ ಮಳೆ ಬಂದರೆ, ಮತ್ತೆ ಕೆಲವೆಡೆ ಜಿಟಿ-ಜಿಟಿ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದ್ದು, ಆನಂತರ ಇಳಿಮುಖವಾಗಲಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಟ್ರಪ್‍ನಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಚದುರಿದಂತೆ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಳೆಯ ಅಬ್ಬರ ಕಡಿಮೆಯಾದರೂ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಮುಂದಿನ ಮೂರು ದಿನಗಳ ಅವಯಲ್ಲಿ ದಾವಣಗೆರೆ, ಹರಪನಹಳ್ಳಿ, ಚನ್ನಗಿರಿ, ಹಾವೇರಿ, ಗದಗ, ಹುಬ್ಬಳ್ಳಿ, ಸವದತ್ತಿ, ಬಾಗಲಕೋಟೆ, ಜಮಖಂಡಿ, ವಿಜಯಪುರ, ಇಂಡಿ ಭಾಗದಲ್ಲಿ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ 15ರಿಂದ 20 ಮಿ.ಮೀ., ಉತ್ತರ ಒಳನಾಡಿನಲ್ಲಿ 25ರಿಂದ 40 ಮಿ. ಮೀ. ನಷ್ಟು ಮಳೆಯಾಗುವ ಸೂಚನೆಗಳಿವೆ.

ಅದೇ ರೀತಿ ಮುಂದಿನ ಹತ್ತು ದಿನಗಳ ಅವಯಲ್ಲಿ ದಕ್ಷಿಣ ಒಳನಾಡಿನಲ್ಲಿ 20ರಿಂದ 40 ಮಿ.ಮೀ., ಮಲೆನಾಡಿನಲ್ಲಿ 30ರಿಂದ 60 ಮಿ.ಮೀ., ಕರಾವಳಿಯಲ್ಲಿ 35ರಿಂದ 50 ಮಿ.ಮೀ. ಹಾಗೂ ಉತ್ತರ ಒಳನಾಡಿನಲ್ಲಿ 20ರಿಂದ 50 ಮಿ.ಮೀ.ನಷ್ಟು ಮಳೆಯಾಗಲಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಅಕ್ಟೋಬರ್‍ನಲ್ಲಿ 131ಮಿ.ಮೀ. ವಾಡಿಕೆ ಮಳೆಗೆ ಕೇವಲ 47 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ.65 ರಷ್ಟು ಮಳೆ ಕೊರತೆ ಉಂಟಾಗಿತ್ತು. ಸೋಮವಾರ ರಾಜ್ಯದಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಮಳೆಯಾಗಿದೆ.

ಕಳೆದೊಂದು ವಾರದಲ್ಲಿ 30 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಆದರೂ ದಕ್ಷಿಣ ಒಳನಾಡಿನಲ್ಲಿ ನವೆಂಬರ್ ಒಂದರಿಂದ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.160ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ.29ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಶೇ.132 ಹಾಗೂ ಶೇ.208ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಹಿಂಗಾರು ಹಂಗಾಮಿನ ಅವಯ ಅಕ್ಟೋಬರ್ ಒಂದರಿಂದ ನವೆಂಬರ್ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.47ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಕಂಡುಬಂದಿತ್ತು. ಅದೇ ರೀತಿ ಜೂನ್ ನಿಂದ ಈವರೆಗೆ ಶೇ.28ರಷ್ಟು, ಏಪ್ರಿಲ್‍ನಿಂದ ಇಲ್ಲಿವರೆಗೆ ಶೇ.25ರಷ್ಟು ಹಾಗೂ ಜನವರಿಯಿಂದ ಈತನಕ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

andolanait

Recent Posts

ಓದುಗರ ಪತ್ರ: ನೇರಳೆ ತಳಿ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಲಿ

ನೇರಳೆ ಹಣ್ಣಿನ ಬೀಜಗಳ ಔಷಧಿಯ ಗುಣಗಳನ್ನು ಪರಿಗಣಿಸಿ ಸರ್ಕಾರವು ಇವುಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ತೋಟಗಾರಿಕಾ…

44 mins ago

ಓದುಗರ ಪತ್ರ: ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಬಸ್ ನಿಲುಗಡೆಯಿಂದ ತೊಂದರೆ

ಮೈಸೂರಿನ ರಿಂಗ್ ರಸ್ತೆ ಪರಸಯ್ಯನ ಹುಂಡಿ ಸರ್ಕಲ್‌ನಲ್ಲಿ ಪ್ರತಿನಿತ್ಯ ಸಾರಿಗೆ ನಿಗಮದ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್…

46 mins ago

ಓದುಗರ ಪತ್ರ: ಆದ್ಯತೆಗಳ ಪಟ್ಟಿಯಲ್ಲಿ ಶಿಕ್ಷಣ ಎಲ್ಲಿದೆ?

ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಶಾಲೆಗಳು ಮತ್ತೆ ಬಾಗಿಲು ತೆರೆದಿವೆ. ಹೊಸ ಕನಸುಗಳೊಂದಿಗೆ ಮಕ್ಕಳು ತರಗತಿಗಳತ್ತ ಹೆಜ್ಜೆ ಇಟ್ಟಿದ್ದಾರೆ. ನೂತನ…

48 mins ago

ಕೊಡಗಿನಲ್ಲಿ ಹೆಚ್‌ಪಿವಿ ಲಸಿಕೆ ಪಡೆಯಲು ಹಿಂದೇಟು

ನವೀನ್ ಡಿಸೋಜ ಜಿಲ್ಲೆಯಲ್ಲಿ ಶೇ.೩೦.೮೫ರಷ್ಟು ಮಂದಿಗೆ ಮಾತ್ರ ಲಸಿಕೆ; ಗರ್ಭಕಂಠ ಕ್ಯಾನ್ಸರ್ ತಡೆಯಲು ಲಸಿಕೆ ಕಡ್ಡಾಯ: ಆರೋಗ್ಯ ಇಲಾಖೆ ಮನವಿ…

4 hours ago

ರಾಷ್ಟ್ರೀಯ ಕೆಟಲ್‌ಬಾಲ್ ಟೂರ್ನಿಯಲ್ಲಿ ಮಿಂಚಿದ ಪ್ರತಿಭೆಗಳು

ಹೇಮಂತ್‌ಕುಮಾರ್ ೧೦ ಚಿನ್ನ, ೬ ಬೆಳ್ಳಿ, ೩ ಕಂಚಿನ ಪದಕಗಳನ್ನು ಬಾಚಿದ ಆಕ್ಸ್‌ಫರ್ಡ್ ಅಕಾಡೆಮಿ ಮಂಡ್ಯ: ಪರಿಶ್ರಮವಿದ್ದೆಡೆ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀರಂಗಪಟ್ಟಣ…

4 hours ago

ಮುಸುಕಿನ ಜೋಳಕ್ಕೆ ರೋಗ ಬಾಧೆ; ಸಂಕಷ್ಟಕ್ಕೆ ಸಿಲುಕಿದ ರೈತರು

ಮಂಜು ಕೋಟೆ ಕೋಟೆ: ಔಷಧ ಸಿಂಪಡಿಸಿದ ಬಿತ್ತನೆ ಬೀಜ ವಿತರಿಸಿದರೂ ಪ್ರಯೋಜನವಾಗದೆ ಲಕ್ಷಾಂತರ ರೂ. ನಷ್ಟ  ಎಚ್.ಡಿ.ಕೋಟೆ: ಸಾವಿರಾರು ಎಕರೆಯಲ್ಲಿ…

4 hours ago